Tuesday, July 25, 2017

ಕಾಶ್ಮೀರವೆಂಬ ಖಾಲಿ ಕಣಿವೆ
ಕಳೆದ ನೂರೇ ದಿನಗಳಲ್ಲಿ ಸುಮಾರು ಎಂಭತೈದಕ್ಕೂ ಹೆಚ್ಚು ಉಗ್ರಗಾಮಿಗಳನ್ನು ಭಾರತೀಯ ಸೇನಾಪಡೆ ಹೊಡೆದುರುಳಿಸಿದೆ. ಪ್ರತಿ ತಿರುವಿನಲ್ಲೂ ಇವತ್ತು ಬಂದೊಬಸ್ತು ಇರುವ ಚೆಕ್ ಪೆÇೀಸ್ಟುಗಳಿದ್ದು, ಸೈನಿಕರ ಶಸ್ತ್ರಾಸ್ತ್ರಗಳು ಎಂಥದಕ್ಕೂ ಸನ್ನದ್ಧವಾಗಿರುತ್ತವೆ. ಆದರೂ ಹೇಗೆ ಪ್ರತಿವಾರಕ್ಕಿಂತಿಷ್ಟು ಎಂಬಂತೆ ಉಗ್ರರು ಸೈನಿಕರಿಗೆದುರಾಗಿ ಬಲಿಯಾಗುತ್ತಿದ್ದಾರೆ..? ಬರುಬರುತ್ತಾ ಅಷ್ಟು ವರಚ್ಚಾಗಿ ಈ ಆಂತಕವಾದಿಗಳು ಹೇಗಾದರೂ ಒಳಕ್ಕೆ ನುಸುಳುತ್ತಿದ್ದಾರೆ..? ಒಂದೆಡೆ ನಿಸರ್ಗ ಕಲ್ಪಿಸಿರುವ ಸಂಕೀರ್ಣ ಭೌಗೋಳಿಕ ಪರಿಸ್ಥಿತಿ ಒಳಗೆ ಬರಲು ಅನುಕೂಲವಾದರೆ, ಹಾಗೆ ಒಮ್ಮೆ ಸರಹದ್ದಿನೊಳಗೆ ಬಂದವರೆಲ್ಲರಿಗೂ ನೀರು, ನೆರಳು, ಶಸ್ತ್ರಾಸ್ತ್ರ ಎತ್ತಿ ಕೊಟ್ಟು ನಮ್ಮ ಸೈನಿಕರ ಮೇಲೆ, ಹಿಂದೂಗಳ ಮೇಲೆ ಛೂ ಬಿಡುತ್ತಿರುವವರೂ ನಮ್ಮವರೇ ಎನ್ನುವುದೀಗ ರಹಸ್ಯವಾಗುಳಿದಿಲ್ಲ. ಆವತ್ತು ಉರಿ ಸೇನಾ ಕ್ಯಾಂಪ್ ಮೇಲೆ ದಾಳಿಯಾಯಿತಲ್ಲ. ಅದರ ನಂತರ ಸಾಲುಸಾಲಾಗಿ ಗಡಿಯಲ್ಲಿ ಉಗ್ರರ ಹೆಣ ಬೀಳತೊಡಗಿದವು. ಅಸಲಿಗೆ ನಮಗೆ ಲೆಕ್ಕಕ್ಕೆ ಸಿಗುವುದಕ್ಕಿಂತ ಕೈಗೆ ದೇಹ ಸಿಕ್ಕದಂತೆ ಹುರಿದು ಹೋಗುವುದನ್ನು ಅಲ್ಲಲ್ಲೆ ಎಳೆದು ಹಾಕಿ ಬಿಡುವ ಮಿಲಿಟರಿ ಲೆಕ್ಕಾಚಾರ ಬೇರೆಯದೇ ಇರುತ್ತದೆ. ಅದಾಚೆಗಿರಲಿ ಅದನ್ನಿಲ್ಲಿ ಚರ್ಚಿಸುವುದೂ ತರವಲ್ಲ. ಆದರೆ ಹಾಗೆ ಅಷ್ಟು ಸಲೀಸಾಗಿ ಈ ಪಾತಕಿಗಳು ಹೇಗೆ ಗಡಿಯನ್ನು ದಾಟಿ ಶ್ರೀನಗರ, ಪಹಲ್ಗಾಮ್ ಮತ್ತು ಇತರ ಪ್ರಮುಖ ಸ್ಥಳಗಳನ್ನು ಸುರಕ್ಷಿತವಾಗಿ ತಲುಪುತ್ತಾರೆ..?

ನಮ್ಮಲ್ಲಿ ಹೆಚ್ಚಿನವರಿಗೆ ಕಾಶ್ಮೀರ ಕಣಿವೆಯ ಅತೀವ ಏರಿಳಿತದ ಬಗ್ಗೆ ಅಂದಾಜಿಲ್ಲ. ಅದನ್ನು ಟೊಪೆÇಗ್ರಾಫಿ ಎನ್ನುತ್ತಾರೆ. ಅದರಲ್ಲೂ ಉತ್ತರ ಕಾಶ್ಮೀರದ ಭಾಗದಲ್ಲಿ ಸರಿಯಾಗಿ ಅರ್ಧ ಕಿ.ಮೀ. ಕೂಡಾ ನೇರಾನೇರಕ್ಕೆ ನೆಲ ದಕ್ಕುವುದಿಲ್ಲ. ನನ್ನ ಭೇಟಿಗಳಲ್ಲಿ ಒಂದು ಹಳ್ಳಿಗೆ ಇವತ್ತು ಹೋದರೆ, ನಾನು ಹಿಂದಿರುಗುತ್ತಿದ್ದುದು ಮರುದಿನವೇ. ಲೇಹ್ ಹೆದ್ದಾರಿ ಮೇಲೆ ಗಾಂಧಾರ್‍ಬಾಲ್ ದಾಟಿಬಿಟ್ಟರೆ ಮತ್ತೇನಿದ್ದರೂ ಪರ್ವತದ ಸೆರಗು ಕೊರೆದು ರೂಪಿಸಿದ ಕಡಿದಾದ ಅಂಚಿನ ಅಪ್ಪಟ ಕಣಿವೆಯ ಏರಿಳಿತ. ನಾಲ್ಕು ಹೆಜ್ಜೆ ಮೇಲಕ್ಕೆ ಹೋದರೆ ಇನ್ನಾಲ್ಕು ಕೆಳಕ್ಕೆ. ಅದಕ್ಕೂ ಮೊದಲೇ ನದಿಯ ಸಣ್ಣ ತೊರೆಯೊಂದು ಬಾಯ್ದೆರೆದು ಅಲ್ಲಲ್ಲಿ ಹಾಯ್ದು ಹೋಗುತ್ತಿರುತ್ತದೆ. ಸಂಪೂರ್ಣ ಕಣಿವೆಯನ್ನು ಹೀಗೆ ಕೊರಕಲಾಗಿಸಿ ಗುಡ್ಡಗಳ ಏರಿಳಿತ, ನಿರಂತರ ಭೂ ಕುಸಿತದಂತಹ ವೈಪರಿತ್ಯಗಳಿಗೆ ಒಡ್ಡಿದ್ದೆ ಇಂತಹ ನದಿ ಕವಲುಗಳು. ಆವತ್ತು ಗಡಿ ದಾಟಿ, ಉರಿ ಸೆಕ್ಟರಿನ ಅಡುಗೆ ಕೋಣೆಯ ಕಡೆಯಿಂದ ದಾಳಿಯಾಯಿತಲ್ಲ, ಅದರ ಆಸುಪಾಸೇ ಎಷ್ಟು ನಾಲಾಗಳು, ಕಾಲುವೆಗಳಿವೆ ಎಂದರೆ ಒಬ್ಬ ಸಲೀಸಾಗಿ ಅದರ ಕೊರಕಲಿನಲ್ಲಿ ತೆವಳಿಕೊಂಡೆ ಕಿ.ಮೀ.ಗಟ್ಟಲೆ ಭಾರತದೊಳಕ್ಕೆ ಕ್ರಮಿಸಿಬಿಡುತ್ತಾನೆ.

ಉರಿಯ ಪಕ್ಕದಲ್ಲೇ ಮಹೌರ್ರ ಎನ್ನುವ ಇನ್ನೊಂದು ಪ್ರದೇಶವಿದೆ. ಅದರ ಪಕ್ಕೆಗೆ ಆತುಕೊಂಡು ಹರಿಯುವುದೇ ಸಲಮ್‍ನಾಲಾ ಎಂಬ ಹಳ್ಳ. ಹತ್ಯಾನನಾಲಾ, ಜಂಖಾನಾಲಾ, ಧಿಕೋಟಿನಾಲಾದಂಥ ಹತ್ತಾರು ಹಳ್ಳಗಳು ಹರಿದು ಝೀಲಂ ನದಿಯನ್ನು ತಲುಪುತ್ತವೆ. ನಿಮಗೆ ಗೊತ್ತಿರಲಿ ಈ ಝೀಲಂ ನದಿ ಇವತ್ತು ಅನಾಮತ್ತಾಗಿ ಕಿ.ಮೀ.ಗಟ್ಟಲೇ ಅಗಲವೂ, ಆಳದ ಜೊತೆಗೆ ನಮ್ಮ ಪ್ರದೇಶ ನಮಗೇ ಅಪರಿಚಿತವನ್ನಾಗಿಸುವಷ್ಟು ದಂಡೆಗಳನ್ನು ಬಾಚಿ ತಬ್ಬಿಉಬ್ಬಿ ಹರಿಯುತ್ತಿರುವ ಉಮೇದಿನ ನದಿ ಇದು. ಇಂತಹದ್ದೊಂದು ನದಿಯನ್ನು ಪಳಗಿಸುವುದು ಅತ್ಲಾಗಿರಲಿ, ದಂಡೆಯನ್ನು ಹಿಡಿತಕ್ಕಿಟ್ಟುಕೊಳ್ಳುವುದು ಕಷ್ಟ. ಇಂತಹ ತುಂಬ ದುರ್ಗಮ ಪ್ರದೇಶಗಳು ಸರಹದ್ದಿನುದ್ದಕ್ಕೂ ಸಾಲುಸಾಲಾಗಿವೆ. ಇಂಥಲ್ಲಿಂದಲೇ ಉಗ್ರರು ನುಸುಳುತ್ತಾರೆ. ಜೊತೆಗೆ ಪಾಕ್ ಮತ್ತು ಭಾರತದ ಗಡಿಯಲ್ಲಿ ಅನಾಮತ್ತು ಐದು ಗೇಟುಗಳಿವೆ. ಇದ್ದುದರಲ್ಲೇ ದೊಡ್ಡ ಊರಾದ ಚಕೋತಿ ಶ್ರೀನಗರಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ದಾರಿಯಾಗಿದೆ. ಅದರಾಚೆಗೆ ಕೊಟ್ಟಕೊನೆಯಲ್ಲಿ ತೀರ ಸರಹದ್ದಿನ ಬೇಲಿಗೆ ಆತುಕೊಂಡಿರುವುದೇ ಮುಝಪ್ಪರಾಬಾದ್.

ಆವತ್ತು ಸರ್ಜಿಕಲ್ ಸ್ಟ್ರೈಕ್ ನಡೆಯಿತಲ್ಲ ಆ ಲೀಪಾದಿಂದ 24 ಕಿ.ಮೀ. ದೂರದ ರೈಸಿನ್ ಎಂಬಲ್ಲಿಯೇ ವಾಹನಗಳು ನಿಂತು ಹೋಗುತ್ತವೆ. ಇನ್ನೇನಿದ್ದರೂ ಅತ್ಯಂತ ದುರ್ಗಮ ಕಚ್ಚಾದಾರಿಯಲ್ಲಿ ಘಟಿಯಾ ಜೀಪುಗಳು ಮಾತ್ರ ಜನರನ್ನು ಹೊತ್ತು ತರುತ್ತವೆ. ಇಲ್ಲಿ ನಿರ್ಮಿಸಿದ ರಸ್ತೆಯನ್ನು ಕುಸಿಯುವ ಪರ್ವತಗಳು ತಿಂಗಳೊಪ್ಪತ್ತಿಲ್ಲಿ ನುಂಗಿ ಮುಗಿಸುತ್ತವೆ. ಇದರ ಕೂಗಳತೆಯಲ್ಲಿದೆ ದುರ್ಗಮವಾದ ಬಂಗೂಸ್ ವ್ಯಾಲಿ. ಅತ್ಯಂತ ಸುಂದರ ಪ್ರದೇಶ ಲೀಪಾ ವಿಭಿನ್ನ ವಲಯ. ಮೇಲ್ಗಡೆಯ ಪೂರ್ವಭಾಗ ಡೈಖಾನ್ ವ್ಯಾಲಿ, ಪಕ್ಕದ ಇನ್ನೊಂದಿಷ್ಟು ವಲಯವನ್ನು ಚಾನ್ಸೇನ್ ಎನ್ನುತ್ತಾರೆ. ಉಗ್ರರಿಗೆ ಲೀಪಾ ಎಂದರೆ ಡೈಖಾನ್ ವ್ಯಾಲಿಯ ಬದೀಗೆ ಹೋಗುವಂತೆ ಪಾಕಿ ಅಧಿಕಾರ ಕೇಂದ್ರವೇ ಸೂಚನೆ ಕೊಡುತ್ತದೆ.

ಇತ್ತ ತಾವಗಿ, ಅಪೂಟು ಪಾಕಿಗಳ ಪಕ್ಕೆಗೆ ಆತುಕೊಂಡಿರುವ ಕೋಹಲಾ, ಕೊಂಚ ಎಡಕ್ಕೆ ಬಿದ್ದರೆ ಮುನಾಸಾ, ಮಾಲೋಂಚಾ, ಅದಕ್ಕೂ ಕೆಳಗೆ ನೀಲಾಭಟ್ಟಿ, ಮಗ್ಗುಲಲ್ಲೇ ತೀನ್‍ಭಾಗ್ಲಿ, ಪಾದದಲ್ಲೇ ನಟೋರಿಯಸ್ ಅಜಮನಗರ್, ಕೊನೆಯಲ್ಲಿ ಸಹೀಲನ್ ಹೀಗೆ ಉರಿಯ ಸುತ್ತ ಸರಹದ್ದಿನ ಸೆರಗಿಗೆ ಚುಂಗಿನಂತೆ ಆವರಿಸಿಕೊಂಡಿರುವ ಹತ್ತಾರು ಮನೆಗಳ ನೂರಾರು ಹಳ್ಳಿಗಳಿವೆ. ಇವೆಲ್ಲದಕ್ಕೂ ಕಳಸವಿಟ್ಟಂತೆ ಫೀರ್‍ಪಂಜಾಲ್ ಪರ್ವತಶ್ರೇಣಿ ಎರಡೂ ಮಗ್ಗುಲಲ್ಲೂ ಯಥೇಚ್ಚವಾಗಿ ಕನಿಷ್ಠ ಸಾವಿರ ಅಡಿಯ ಎತ್ತರದ ಪರ್ವತಾಗ್ರಹಗಳನ್ನು ಹೊಂದಿದ್ದು ಯಾವ ಕಡೆಯ ದೃಶ್ಯವನ್ನೂ ನಿರುಕಿಸಬಹುದಾಗಿದೆ. ಹೀಗೆ ಆವರಿಸಿಕೊಂಡಿರುವ ತುದಿಗಳ ಮೇಲೆನೆ ಎರಡೂ ಕಡೆಯ ಸೈನಿಕರು ಅರೆಗಳನ್ನು ಹುಡುಕಿ ಬಂಕರು ನಿರ್ಮಿಸಿಕೊಂಡು ಗಡಿ ಕಾಯುತ್ತಾರೆ. ಹಾಗೆ ಎರಡೂ ಬಂಕರ್‍ಗಳ ಮಧ್ಯದ ಪ್ರದೇಶವನ್ನು ನೋ ಮ್ಯಾನ್ಸ್ ಲ್ಯಾಂಡ್ ಎಂದು ಕರೆಯುತ್ತಾರೆ. ಅಸಲಿಗೆ ಬರೀ ಕಣ್ಣಿಗೆ ಮತ್ತು ನೇರ ನೋಟಕ್ಕೆ ಅಲ್ಲಿ ಯಾರೂ ದಕ್ಕುವುದೇ ಇಲ್ಲ. ಏನಿದ್ದರೂ ಆ ಕೊರಕಲುಗಳಲ್ಲೇ ಕಾಲು ಹರಿಸುತ್ತಾರೆ.

ಹಾಗೆ ಅಂತಹ ಪ್ರದೇಶಗಳಿಂದ ಇತ್ತ ಚಲಿಸಲಾರಂಭಿಸುತ್ತಿದ್ದಂತೆ ನಮ್ಮ ಬಂಕರುಗಳಿಂದ ಕಣ್ಣು ನೆಟ್ಟ ಕೂತ ಸೈನಿಕರ ಲಕ್ಷ್ಯವನ್ನು ಬೇರೆಡೆಗೆ ಸೆಳೆಯಲು ಪಾಕಿ ಸೈನಿಕರು ಗುಂಡು ಹಾರಿಸತೊಡಗುತ್ತಾರೆ. ನಮ್ಮವರೂ ಅದಕ್ಕೆ ಉತ್ತರಿಸುವಾಗ, ಅರೆಬರೆ ತರಬೇತಿಯ ಹುಂಬ ಹುಡುಗರು ನೆಲದ ಮೇಲೆ ಬಿದ್ದು ಹೊರಳುತ್ತಾ, ನಾಲಾಗಳ ಕೊರಕಲಿಗೆ ಇಳಿದು ಸರಿಯುತ್ತಾ ಗಡಿ ದಾಟುತ್ತಾರೆ. ನೆನಪಿರಲಿ ಹಾಗೆ ಬರುವ ಉಗ್ರರ ಬಳಿ ಸಣ್ಣಪುಟ್ಟ ಆಯುಧ ಬಿಟ್ಟರೆ ಬೇರೇನೂ ಇರುವುದಿಲ್ಲ. "ಲಗೇಜು" ಏನಿದ್ದರೂ ಇತ್ತ ಬಂದೊಡನೆ ಪೂರೈಸಲಾಗುತ್ತದೆ ಎಂದರೆ ಅದಿನ್ನೆಂಥಾ ಬೆಂಬಲ ನಮ್ಮವರಿಂದಲೇ ಸಿಕ್ಕುತ್ತಿರಬಹುದು ಊಹಿಸಿ.

ಪ್ರತಿ ಗಡಿಯಲ್ಲೂ ಇವತ್ತು ಅಪ್ಪಟ ಬುಡಕಟ್ಟು ಕಾಶ್ಮೀರಿ ಕುಟುಂಬಗಳು ಗ್ವಾಲೆಗಳಂತೆ ಬದುಕು ಕಟ್ಟಿಕೊಂಡಿದ್ದು ನುಸುಳುಕೋರರು ಮೊದಲು ಅಶ್ರಯ ಪಡೆಯುವುದೇ ಇಲ್ಲಿ. ಇದೊಂದು ಗೊತ್ತಿರಲಿ, ಅರ್ಧ ಕೆ.ಜಿ. ಅಕ್ಕಿ ಹೆಚ್ಚಿಗೆ ಕೊಂಡರೂ ಅಲ್ಲಿ ಹೊಸ ಅತಿಥಿಯ ಅಗಮನವಾಗಿದೆ ಎಂದು ಊಹಿಸಿಯೇ ಬಯೋನೆಟ್ ಎದುರಿಗಿಟ್ಟು ಸೈನಿಕರು ಕೂಂಬಿಂಗ್ ಮಾಡುತ್ತಿರುತ್ತಾರೆ. ಒಣಗಲು ಹಾಕುವ ಬಟ್ಟೆಗಳು, ಅಡುಗೆಯ ಪದಾರ್ಥದ ವ್ಯತ್ಯಾಸ, ಮನೆಯ ಬಳಿಯಲ್ಲಿ ಬದಲಾಗುವ ಚಟುವಟಿಕೆ, ಇದ್ದಕ್ಕಿದ್ದಂತೆ ಕೆಲ ಮನೆಗಳ ಹೆಂಗಸರು ಗುಳೆ ಹೋದಂತೆ ಗಡಿಯಿಂದ ಒಳಭಾಗದ ಸಂಬಂಧಿಕರ ಮನೆಗಳಿಗೆ ತೆರಳಿಬಿಡುವುದು, ಯಾವ ಹೊತ್ತಿಗೂ ಬಾಗಿಲು ಹಾಕಿಕೊಂಡೆ ಇರುವ ಮನೆಗಳು ಹೀಗೆ ಸೈನಿಕರು ಹುಡುಕುವ ರೀತಿಯೇ ಅಂದಾಜಿಗೆ ದಕ್ಕುವುದಿಲ್ಲ. ಅಲ್ಲೆಲ್ಲಾ ಪ್ರತಿ ತಿರುವಿನಲ್ಲೂ, ಪ್ರತಿ ಪರ್ವತದ ಬುಡಕ್ಕೂ ಆತುಕೊಂಡು ಅಕ್ಷರಶ: ಆಯುಧವೇ ವಸ್ತ್ರ ಎನ್ನುವಂತೆ ಮೈ ತುಂಬಾ ಬಂದೂಕು, ಬಾಂಬು, ಗ್ರೇನೆಡು ಹೊತ್ತ ಸೈನಿಕರು ಕಾಲೂರಿ ನಿಂತು ಕಾಯುತ್ತಿರುತ್ತಾರೆ. ಅದರೆ ಆ ಉದ್ದಾನುಉದ್ದದ ಕಣಿವೆ ಮತ್ತು ಫೀರ್‍ಪಂಜಾಲ್ ಶ್ರೇಣಿಯ ಸಾಲುಸಾಲು ಪರ್ವತದ ಪ್ರದೇಶದ ಕಾವಲಿಗೆ ಅದೆಷ್ಟೇ ಸೈನಿಕರನ್ನು ಹಾಕಿದರೂ ಎಲ್ಲಿ ಈಡಾಗಬೇಕು..? ಹಾಗೆ ದಾಟುವವರನ್ನು ಮೊದಲು ತಮ್ಮ ಮನೆಗಳಲ್ಲಿ ಒಂದೆರಡು ದಿನ ಮಟ್ಟಿಗೆ ಸಾಕುವ ದೇಶದ್ರೋಹಿಗಳು, ನಂತರ ಅವರನ್ನು ಒಳಭಾಗಕ್ಕೆ ಕಳಿಸುತ್ತಾರೆ. ಅಗತ್ಯಕ್ಕೆ ತಕ್ಕಷ್ಟು ಆಯುಧಗಳ ದಾಸ್ತಾನು ಮೊದಲೆ ತಲುಪಿರುತ್ತದೆ. ಅದು ಕೈಗೆ ಬರುತ್ತಿದ್ದಂತೆ ಪಾಕಿಗಳೊಂದಿಗೆ ಮಾತುಕತೆಗೆ ಶುರುವಿಟ್ಟುಕೊಂಡು ಮಾರಣಹೋಮಕ್ಕೆ ರೆಡಿಯಾಗುತ್ತಾರೆ. ಅದರೆ ರಸ್ತೆಗಿಳಿಯುವ ಮೊದಲೇ ಅವರ ಇರುವಿನ ಬಗ್ಗೆ ಟಿಪ್ಸು ಕೊಟ್ಟು ಸೈನಿಕರ ಕೈಯಲ್ಲಿ ಹೊಡೆಸಿ ಹಾಕುವ ಅವರದೇ ಮನುಷ್ಯ ಲಕ್ಷಾಂತರ ಬಹುಮಾನ ಎಣಿಸುತ್ತಾ ಹುಳ್ಳಗೆ ನಗುತ್ತಾನೆ. ಸತ್ತವನ ಹೆಸರಲ್ಲಿ ದೊಂಬಿಗಿಳಿಯುವ ಹುಂಬ ಹುಡುಗರನ್ನು ಮಿಲಿಟರಿ ಪಡೆ ನೋಡುತ್ತಿದ್ದಂತೆ ಗಲಾಟೆಗಿಬ್ಬಿಬ್ಬರಂತೆ ಕೊಂದು ಕೆಡುವುತ್ತದೆ. ಕಾಶ್ಮೀರ ಖಾಲಿಯಾದೇ ಏನು ಮಾಡೀತು...?

No comments:

Post a Comment