ಹಾಗೆ ಅವರೆಲ್ಲರಿಗೂ ಗುರುವಿನ ರೂಪದಲ್ಲಿ ಅವರು ಬಂದಿದ್ದೂ ಕೂಡಾ ನಾಟಕೀಯವೇ ಆಗಿತ್ತು. ಅಷ್ಟು ಹೊತ್ತಿಗಾಗಲೇ ಇವರನ್ನು ಹೀಗೆ ಬಿಟ್ಟರೆ ಅವರವರಲ್ಲಿಯೇ ಅನಾವಶ್ಯಕ ದ್ವೇಷವು ಪ್ರಾರ೦ಭವಾಗುತ್ತದೆಂದು ಧೃತರಾಷ್ಟ್ರನೂ, ಭೀಷ್ಮನೂ ಯೋಚಿಸಿಮಕ್ಕಳನ್ನು ಶಸ್ತ್ರಾಭ್ಯಾಸ ಮತ್ತು ವಿದ್ಯಾರ್ಜನೆಗಾಗಿ ಕಳುಹಿಸಲು ಯೋಚಿಸಿದರು. ಆಗ ಕಣ್ಣ ಮುಂದೆ ಮೂಡಿ ಬಂದ ವ್ಯಕ್ತಿತ್ವವೆ ಕೃಪ. ಈ ಕೃಪನು ಗೌತಮ ಮಹರ್ಷಿಯ ಮಗನಾದ ಶರ್ದ್ವಂತನ ಮಗ. ಶರ್ದ್ವಂತನು ಬ್ರಾಹ್ಮಣನಾದರೂ ಪರುಶುರಾಮರಂತೆಅಮೋಘ, ಕಠೋರವಾದ ವ್ರತಚರ್ಯದೊಂದಿಗೆ ಧನುರ್ವಿದ್ಯೆ ಕಲಿಯುತ್ತಿದ್ದನು. ಅವನು ಹುಟ್ಟಿದಾರಭ್ಯ ಧನುರ್ಧಾರಿಯಾಗೇ ಹುಟ್ಟಿದ್ದರಿಂದಲೇ ಅವನಿಗೆ " ಶರ್ದ್ವಂತ " ಎಂಬ ಹೆಸರು ಬಂದಿತ್ತು.
ಅಂಥಾ ಶರ್ದ್ವಂತ ಯೌವನದಲ್ಲಿ ಅದ್ವಿತೀಯನಾಗಿ ಬೆಳೆಯುವಾಗ ಇಂದ್ರನ ಕುಯುಕ್ತಿಗೆ ಬಲಿಯಾಗಿ "ಜಾನಪದಿ" ಎಂಬ ಅಪ್ಸರೆಯಲ್ಲಿ ಅನುರಕ್ತನಾಗಿ ಬಿಟ್ಟ. ಸಾಧನೆಯಲ್ಲಿದ್ದವನು ಜಾನಪದಿಯನ್ನು ಸೆಳೆದುಕೊಂಡು ಶರಸ್ಥಂಭದ ಮೇಲೆಯೇ ಅವಳೊಂದಿಗೆಬೆರೆತ. ಕೊಂಚ ಮಾತ್ರದ ಚಿತ್ತ ಕದಲಿಕೆಯಿಂದ ಧನುರ್ಬಾಣಗಳನ್ನು ಕಳೆದುಕೊಂಡ ಶರ್ದ್ವಂತನಿಂದ ಅಪ್ಸರೆಯೊಂದಿಗೆ ಜನಿಸಿದವರೆ ಕೃಪ ಮತ್ತು ಕೃಪಿ ಎಂಬ ಮಕ್ಕಳು. ಮಕ್ಕಳಾದ ಅವರು ಶಂತನುವಿನ ಆಶ್ರಯದಲ್ಲಿ ಬೆಳೆಯುವಾಗ ಅಪ್ಪನಾದ ಶರ್ದ್ವಂತಗುಟ್ಟಾಗಿ ರಾತ್ರೋರಾತ್ರಿ ನಾಲ್ಕು ವಿಧದ ಧನುರ್ವೇದಗಳನ್ನು ಶಸ್ತ್ರಗಳನ್ನು ಅವುಗಳನ್ನು ರಹಸ್ಯವನ್ನು ವಿವರಿಸಿ ಹಿಂದಿರುಗಿದ. ಹೀಗೆ ಅಪ್ಪ ಶರ್ದ್ವಂತನಿಂದ ಪಡೆದ ಅಮೋಘ ವಿದ್ಯೆಯಿಂದಾಗಿ ಮಗ ಕೃಪಾಚಾರ್ಯನಾಗಿ ಬೆಳಕಿಗೆ ಬಂದ.
ಅವರನ್ನು ಕೌರವ ಪಾಂಡವರ ವಿದ್ಯಾಭ್ಯಾಸಕ್ಕಾಗಿ ನಿಯೋಜಿಸಲಾಯಿತು. ಆದರೆ ಅವರಲ್ಲಿನ ವಿದ್ಯೆಯ ಮಟ್ಟ ಭೀಷ್ಮನಿಗೆ ಸಾಕೆನ್ನಿಸಲಿಲ್ಲ. ಇದಕ್ಕಿಂತಲೂ ಮಿಗಿಲಾದ ಶಸ್ತ್ರಾಸ್ತ್ರ ಪಂಡಿತರಿಂದ, ಸಾಧ್ಯವಾದರೆ ಪರಶುರಾಮರಿಂದ ಅಭ್ಯಾಸಮಾಡಿಸಬೇಕೆಂದು ಯೋಚಿಸುತ್ತಿರುವಾಗಲೇ ಹಸ್ತಿನಾವತಿಯ ಆಚೆಗೆ ಬಯಲಲ್ಲಿ ಅದ್ಭುತ ಬ್ರಾಹ್ಮಣನೊಬ್ಬ ಬಂದು ನಿಂತಿದ್ದಾನೆಂದು ಸುದ್ದಿ ಬಂತು. ಕೃಪನಿಂದ ವಿದ್ಯೆ ಕಲಿಯುತ್ತಿದ್ದ ಮಕ್ಕಳು ಆಟವಾಡಲು ಅರಮನೆಯಾಚೆಗಿನ ಕ್ರೀಡಾಂಗಣಕ್ಕೆ ತೆರಳಿದ್ದರು. ಅಲ್ಲಿ ಅಂಗಳದಾಚೆಗೆ ಭಾರಿ ಪಾಳು ಬಾವಿಯೊಂದು ಇತ್ತು. ಅದರಲ್ಲಿ ಕೆಲವು ವಸ್ತುಗಳು ಬಿದ್ದು ಹೋದವು. ಸಾಮಾನ್ಯವಾಗಿ ಅದರಲ್ಲಿದ್ದ ವಸ್ತುಗಳನ್ನು ಈಚೆಗೆ ತೆಗೆಯುವ ಪರಿಪಾಠವೇ ಇರಲಿಲ್ಲ. ಕಾರಣ ಅದರ ತಳ ತಲುಪಲು ಸಾಧ್ಯವಾಗದಷ್ಟು ದೊಡ್ಡಮತ್ತು ಆಳವಾದ ಬಾವಿ ಅದಾಗಿತ್ತು. ಹುಡುಗರೆಲ್ಲ ಅದರ ಸುತ್ತ ಸೇರಿದರು. ಏನೂ ಮಾಡಲಾಗದಿದ್ದ ಸಂದರ್ಭದಲ್ಲಿ ಧ್ವನಿಯೊಂದು ಕೇಳಿಸಿತು.
" ಮಕ್ಕಳೆ ನಿಮ್ಮ ಆಟದ ವಸ್ತುಗಳನ್ನು ನಾನು ತೆಗೆದು ಕೊಡಲೇ..? " ಯುಧಿಷ್ಠಿರ ಹಿಂದಿರುಗಿ ನೋಡಿದ. ಅವನ ಹಿಂದೆ ಇದ್ದ ದುರ್ಯೋಧನನೂ ಮುಂದೆ ಬಂದ. ಅಗ್ನಿ ಹೋತ್ರಿಯಾದ, ನೀಳಕಾಯದ, ಮಧ್ಯಪ್ರಾಯದ ಕಠಿಣ ದೇಹ ಹೊಂದಿದ್ದ, ನಿಟಾರನೆಯನಿಲುವಿನ ಬ್ರಾಹ್ಮಣ. ಆ ಬ್ರಾಹ್ಮಣನಿಗೂ ಒಂದು ಅವಕಾಶ ಬೇಕಿತ್ತು. ಅದಕ್ಕಾಗಿ ಕೂಡಲೇ ಇವರನ್ನೆಲ್ಲಾ ಕೊಂಚ ನಿಂದಿಸುವಂತೆ ನುಡಿದ ಆತ.
" ಏನು ಭರತ ಕುಲದ ರಾಜಕುಮಾರ. ಬಾವಿಯಿಂದ ಒಂದು ವಸ್ತುವನ್ನು ನಿಮ್ಮ ಶಸ್ತ್ರಾಸ್ತ್ರಗಳ ಮೂಲಕ ಮೇಲಕ್ಕೆತ್ತಲಾರಿರಿ ಎಂದರೆ ಇನ್ನು ರಾಜ್ಯದ ರಕ್ಷಣೆಯನ್ನು ಹೇಗೆ ಮಾಡುತ್ತೀರಿ..? ಕೇವಲ ವಾಸನೆಯಿಂದ, ಧ್ವನಿಗ್ರಹಣದಿಂದ, ನಿಶಬ್ದದಿಂದ, ಚಲನೆಯಲಾಘವದಿಂದ ಶಸ್ತ್ರ ಪ್ರಯೋಗ ಮಾಡುವವನು ಮಾತ್ರ ಧೀರಯೋಧನಾಗುತ್ತಾನೆ ವಿನ: ಬರಿದೇ ಆಯುಧ ಬಳಸುವುದರಿಂದಲ್ಲ. ಅದಕ್ಕಿಂತಲೂ ಚಿಕ್ಕದಾದ ಉಂಗುರವನ್ನೂ ಈ ಬಾವಿಯಿಂದ ನಾನು ಕೆಳಗಿಳಿಯದೇ ತೆಗೆದುಕೊಡುತ್ತೇನೆ. ಏನುಕೊಡುತ್ತೀರಿ..?..." ಅವರ ಮಾತನ್ನು ಕೇಳಿದ ರಾಜಕುಮಾರರು ಮುಖ ಮುಖ ನೋಡಿಕೊಂಡರು.
" ಹಾಗೆ ನೀವು ಹೇಳಿದಂತೆ ಮಾಡಿದಲ್ಲಿ ನಿಮಗೆ ಅರಮನೆಯಲ್ಲಿ ಮೃಷ್ಟಾನ್ನ ಭೋಜನ ಏರ್ಪಡಿಸಲಾಗುವುದು ವಿಪ್ರರೇ.." ಎಂದ ಯುಧಿಷ್ಠಿರ.
" ಹೌದು ಬ್ರಾಹ್ಮಣೋತ್ತಮ. ನೀವು ಅಂತಹದ್ದೊಂದು ವಿದ್ಯೆಯನ್ನು ತೋರಿದಿರಾದರೆ ನಿಮಗೆ ಜೀವನ ಪೂರ್ತಿ ಈ ಅರಮನೆಯ ಸನ್ನಿಧಿಯಲ್ಲಿ ಜೀವನಕ್ಕೆ ಅವಕಾಶ ಮಾಡಿಕೊಡಲಾಗುವುದು. ಉತ್ತಮೋತ್ತಮರೆಲ್ಲರಿಗೆ ಈ ಹಸ್ತಿನಾವತಿ ಯಾವತ್ತೂ ಆಶ್ರಯನೀಡುತ್ತಲೇ ಬಂದಿದೆ ವಿಪ್ರೋತ್ತಮ.." ರಾಜಕುಟುಂಬದ ಮಾತುಗಳ ಲಹರಿಯೇ ಬೇರೆ ಅಲ್ಲವೇ. ಅದಕ್ಕೆ ತಕ್ಕಂತೆ ನುಡಿದಿದ್ದ ದುರ್ಯೋಧನ.
ಮರು ಮಾತಾಡದ ಬ್ರಾಹ್ಮಣ ಕೂಡಲೇ ಶರ ಹೂಡಿ ಅದರಿಂದಲೇ ಸಂಪರ್ಕ ಕಲ್ಪಿಸಿಕೊಂಡು ಚೆಂಡು ಮೇಲಕ್ಕೆತ್ತಿದನಷ್ಟೇ ಅಲ್ಲ. ಅರ್ಧ ಚಂದ್ರಾಕೃತಿಯ ಶರದಿಂದ ಉಂಗುರವನ್ನೂ ಹಿಂದಿರುಗುವಂತೆ ಶರ ಪ್ರಯೋಗಿಸಿ ಚಕಿತಗೊಳಿಸಿದ. ಅದೊಂದುತಂತ್ರಗಾರಿಕೆ. ಪ್ರತಿ ಬಾಣದ ಹಿಂಭಾಗಕ್ಕೆ ಇನ್ನೊಂದು ತಗುಲಿಕೊಳ್ಳುವಂತೆ ಯೋಜಿಸಿ ಕೊನೆಯ ಬಾಣಕ್ಕೆ ದಪ್ಪನೆಯ ದಾರದಿಂದ ಬಿಗಿದು ಕಟ್ಟಿದ್ದ. ಮೊದಲ ಬಾಣ ವಸ್ತುವನ್ನು ಕಚ್ಚಿಕೊಳ್ಳುತ್ತಿದ್ದಂತೆ ಮೇಲಕ್ಕೆ ಎಳೆದುಕೊಂಡಿದ್ದ. ಅಕ್ಷರಶ: ಅದುಪಾತಾಳಗರಡಿ ತಂತ್ರಜ್ಞಾನ. ಸುಲಭಕ್ಕೆ ವಸ್ತುಗಳು ಮೇಲಕ್ಕೆ ಬಂದಿದ್ದು, ರಾಜಕುಮಾರರ ಮಾತಿನಂತೆ ಅರಮನೆ ಅವರಿಗೆ ರಾಜಶ್ರಯ ಕಲ್ಪಿಸಲು ಸಿದ್ಧವಾಗಿತ್ತು. ಅಲ್ಲಿಂದ ಅವರು ಹಿಂದಿರುಗಿ ನೋಡಲಿಲ್ಲ. ಕಾರಣ ಅವರ ವಿಷಯ ತಿಳಿದ ಕೂಡಲೇ ಭೀಷ್ಮಧಾವಿಸಿ ಬಂದು ಅವರನ್ನು ಕರೆದೊಯ್ದಿದ್ದ.
ಆ ಬ್ರಾಹ್ಮಣ ಕೂಡಾ ಭೀಷ್ಮರಂತೆ ಪರಶುರಾಮ ಶಿಷ್ಯ. ಬ್ರಹ್ಮಾಸ್ತ್ರವನ್ನು ಸಿದ್ಧಿಸಿಕೊಂಡ ಕೆಲವೇ ಕೆಲವು ಅತಿರಥರಲ್ಲಿ ಒಬ್ಬರಾಗಿದ್ದರು. ಭೀಷ್ಮ ನೀಡಿದ ಆದರಾಥಿತ್ಯವನ್ನು ಸ್ವೀಕರಿಸಿದ ಬ್ರಾಹ್ಮಣ, ಅವರ ನೂರೈದು ಮಕ್ಕಳನ್ನು ಯುದ್ಧಕಲೆಯಲ್ಲಿ ಭೂಮಂಡಲದಲ್ಲೇ ಅದ್ವಿತೀಯರನ್ನಾಗಿಸುವ ಹೊಣೆ ಹೊರುವುದಲ್ಲದೇ ತಮ್ಮ ಜೀವಮಾನವಿಡಿ ಹಸ್ತಿನಾವತಿಯ ಸಿಂಹಾಸನ ರಕ್ಷಣೆ ಕಟಿ ಬದ್ಧರಾಗುವುದಾಗಿ ವಚನ ವಿತ್ತರು.
ಅಸಲಿಗೆ ಆತ ಭಾರದ್ವಾಜನೆಂಬ ಮಹರ್ಷಿಯ ಮಗ. ಗಂಗಾತೀರದಲ್ಲಿ ಅಗ್ನಿಸ್ತೋಮ ಎಂಬ ಕಠೋರ ಆಚರಣೆಯ ಮಹಾಯಾಗಕ್ಕೆ ಮುಂದಾಗಿದ್ದ. ಆಗ "ಘೃತಾಚಿ" ಎಂಬ ಅಪ್ಸರೆಯ ಒಲವಿನ ಕರೆಗೆ ಚಂಚಲನಾದವನಿಗೆ ಅವಳೊಂದಿಗೆ ಕುಠೀರಕ್ಕೆಹಿಂದಿರುಗುವಷ್ಟು ವ್ಯವಧಾನವಿಲ್ಲದೇ, ಸೇರುವ ಕಾತುರತೆಯಲ್ಲಿ ಮರೆಯಾದ ಜಾಗಕ್ಕಾಗಿ ತವಕಿಸಿದ. ನದಿ ತೀರ ನಿರ್ಮಾನುಷ್ಯವಾಗಿದ್ದರೂ ಎಲ್ಲಿಯೂ ಮರೆಯಾಗಲು ಅನುಕೂಲವಾದ ಸ್ಥಳವಿಲ್ಲದಿದ್ದಾಗ ದ್ರೋಣಾ(ದೊನ್ನೆ)ಕಾರದ ದೋಣಿಯಲ್ಲಿಅವಳೊಂದಿಗೆ ಸಮಾಗಮವನ್ನಾಚರಿಸಿದ. ಆ ಕ್ಷಣಕ್ಕೆ ಫಲಿಸಿದ ಶಿಶುವಿಗೆ ಭಾರದ್ವಾಜ "ದ್ರೋಣ" ಎಂದು ಹೆಸರಿಸಿದ.
ಹೀಗೆ ವಿಚಿತ್ರ ಹಿನ್ನೆಲೆಯ ದ್ರೋಣ ಮುಂದೆ "ಅಗ್ನಿವೇಶ"ನಲ್ಲಿ ಅಮೋಘವಾದ ಧನುರ್ವಿದ್ಯೆಯನ್ನು ಕಲಿತು ಆಗ್ನೇಯಾಸ್ತ್ರ ಪ್ರಯೋಗದಲ್ಲಿ ಪರಿಣಿತನಾದ. ಮುಂದೆ ಗೌತಮ ಪುತ್ರಿಯಾದ ಕೃಪಿಯನ್ನು ವಿವಾಹವಾಗುವುದರ ಮೂಲಕ ಅಶ್ವತ್ತಾಮನೆಂಬಮಗುವನ್ನು ಪಡೆದ. ಹುಟ್ಟುತ್ತಲೇ ಅದ್ಭುತ ತೇಜಸ್ಸನ್ನು ಪಡೆದ ಪುತ್ರನಾದ ಅವನು ಚಿರಂಜೀವಿಯ ಪಟ್ಟವನ್ನು ಪಡೆದ. ಯೋಗ ಮತ್ತು ವಾಯುಸ್ತಂಭನ ಬಲದಿಂದ ಅದೊಂದು ರೀತಿಯಲ್ಲಿ ಅಜೇಯತ್ವವನ್ನು ಪಡೆದುಬಿಟ್ಟಿದ್ದ. ಅವನಿಚ್ಛೆಯ ವಿರುದ್ಧವಾಗಿ ಅವನಉಸಿರು ನಿಲ್ಲಿಸುವುದು ಸಾಧ್ಯವಿರಲಿಲ್ಲ. ಆದ್ದರಿಂದ ಅವನು ಎಂದಿಗೂ ಅಜರಾಮರ. ಹಾಗಾಗಿ ಮಗನ ಜೀವವಿರುವ ತನಕ ಅಸು ನೀಗುವುದಿಲ್ಲ ಎಂದು ದ್ರೋಣ ಘೋಷಿಸಿ ಒಂದು ರೀತಿಯಲ್ಲಿ ತಾನೂ ಅಜರಾಮರನಾಗಿಬಿಟ್ಟಿದ್ದ.
ಅಂಥಾ ದ್ರೋಣ ಹಸ್ತಿನಾವತಿಯ ರಾಜಕುಮಾರರನ್ನು ಶಿಷ್ಯರನ್ನಾಗಿ ಸ್ವೀಕರಿಸಿ ಒಂದು ಶುಭಘಳಿಗೆಯಲ್ಲಿ ವಿದ್ಯಾಭ್ಯಾಸ ಆರಂಭಿಸಿದರು. ಒಮ್ಮೆ ದ್ರೋಣರ ಅಭ್ಯಾಸ ಆರಂಭವಾಗುತ್ತಿದ್ದಂತೆ ಅವರ ಮೊದಲಿನ ರಗಳೆಗಳೆಲ್ಲವೂ ತನ್ನಷ್ಟಕ್ಕೆ ಮರೆಯಾಗಿ ವಿದ್ಯೆಕಲಿಯುವಲ್ಲಿ ಆಸಕ್ತಿಯಿಂದಾಗಿ ಎಲ್ಲರೂ ಗಂಭೀರವಾಗಿ ಉಳಿಯತೊಡಗಿದರು. ಇತ್ತ ಅವರ ಯೋಗ್ಯತೆ ಮತ್ತು ಆಸಕ್ತಿಗನುಗುಣವಾಗಿ ದ್ರೋಣ ಅವರವರ ಶಸ್ತ್ರಾಸ್ತ್ರಗಳನ್ನು ಆಯ್ಕೆ ಮಾಡಿದ್ದರು. ಅದರಂತೆ ಭೀಮ ದುರ್ಯೋಧನರು ಗದೆಯನ್ನು ಆಯ್ಕೆಮಾಡಿಕೊಂಡಿದ್ದರೆ, ಅರ್ಜುನನು ಬಿಲ್ವಿದ್ಯೆಯಲ್ಲಿ ಪ್ರವೀಣನಾಗುವ ಅವಕಾಶ ಪಡೆದನು.
ಅವನೊಂದಿಗೆ, ಅವರ ಮಗ ಅಶ್ವತ್ಥಾಮನೂ ಸೇರಿಕೊಂಡಿದ್ದ. ಉಳಿದವರೂ ಕೂಡಾ ಕಡಿಮೆ ಸಾಮರ್ಥ್ಯದವರೇನಲ್ಲ. ಅವರೆಲ್ಲರಲ್ಲಿ ಕೆಲವರು ಆಯಾ ವಿದ್ಯೆಗಳಲ್ಲಿ ಜಾಗತಿಕವಾಗಿ ಮೀರಿ ನಿಲ್ಲುವ ಲಕ್ಷಣ ಕಾಣತೊಡಗಿದ್ದರಿಂದ ದ್ರೋಣ ಅವರವರಗ್ರಹಿಸುವಿಕೆಗೆ ತಕ್ಕಂತೆ ವಿದ್ಯೆ ಕಲಿಸತೊಡಗಿದ್ದರು. ಆದರೂ ಭೀಷ್ಮನ ಮತ್ತು ಅರಮನೆಯ ಇತರ ಸಹಾನುವರ್ತಿಗಳಂತೆ ದ್ರೋಣರೂ ಕೂಡಾ ಪಾಂಡವರ ಪಕ್ಷಾನುವರ್ತಿಗಳಾಗಿ ವರ್ತಿಸುತ್ತಿದ್ದರು. ಅದನ್ನು ದುರ್ಯೋಧನ ಹಲವು ಬಾರಿ ಧೃತರಾಷ್ಟ್ರನಮೂಲಕ ದ್ರೋಣರ ಗಮನಕ್ಕೆ ತಂದಿದ್ದನಾದರೂ, ಮಹಾರಾಜನೂ ಸಹಿತ ನೇರವಾಗಿ ನೀವು ಪಾಂಡವರನ್ನು ಹೆಚ್ಚು ಸಲಹುತ್ತಿದ್ದೀರಿ ಎನ್ನುವಂತಿರಲಿಲ್ಲ.
ಗದೆಯಲ್ಲಿ ದುರ್ಯೋಧನನೂ ಕುಶಲಿಯಾಗತೊಡಗಿದ್ದ. ಚತುರತೆಯಲ್ಲಿ ಅವನು ಭೀಮನಿಗಿಂತಲೂ ಒಂದು ಕೈ ಮಿಗಿಲಾಗಿ ಗದೆಯನ್ನು ತಿರುವತೊಡಗಿದ್ದನು. ಎಲ್ಲರನ್ನೂ ಹೋಲಿಸಿ ನೋಡುವಾಗ ಗದೆಯಲ್ಲಿ ಭೀಮ ದುರ್ಯೋಧನರೂ, ಶರದಲ್ಲಿಅರ್ಜುನನೂ, ಕತ್ತಿ ಗುರಾಣಿಗಳಲ್ಲಿ ನಕುಲ ಸಹದೇವರೂ, ಕತ್ತಿ ಮತ್ತು ಈಟಿ ಪ್ರಯೋಗದಲ್ಲಿ ಯುಧಿಷ್ಠಿರನೂ ಪಳಗಿದ್ದರೆ, ಮಲ್ಲ ಯುದ್ಧದಲ್ಲಿ ದುಶ್ಯಾಸನನ ಜೊತೆಗೆ ದುರ್ಯೋಧನನೂ ಸಮಸಮ ಎನ್ನುವಂತೆ ಕಾದಾಡುವಲ್ಲಿ ಪರಿಣಿತಿ ಪಡೆಯತೊಡಗಿದ್ದರು.
ಈ ಸಂದರ್ಭದಲ್ಲಿ ಒಮ್ಮೆ ರಾಜಕುಮಾರರೆಲ್ಲಾ ಸೇರಿ ಕಾಡಿಗೆ ಬೇಟೆಯಾಡಲು ಹೋದರು. ಆ ಕಾಡು ಹಸ್ತಿನಾವತಿಯ ಸಾಮಂತನಾದ ನಿಷಾದರಾಜ ಹಿರಣ್ಯಧನುಷನಿಗೆ ಸೇರಿದ್ದಾಗಿತ್ತು. ದಟ್ಟ ಕಾಡಿನಲ್ಲಿ ರಾಜಕುಮಾರರಿಗೆ ಸೇರಿದ್ದ ಬೇಟೆ ನಾಯಿಎಲ್ಲರಿಗಿಂತ ಮುಂದಕ್ಕೆ ಬೇಟೆ ಹುಡುಕಿ ಬೊಗಳುತ್ತಾ ಓಡುತ್ತಿದ್ದುದು ಇದ್ದಕ್ಕಿದ್ದಂತೆ ಸುಮ್ಮನಾಗಿ ಹಿಂದಿರುಗಿತು. ದುರ್ಯೋಧನ, ಯುಧಿಷ್ಠಿರ ಹಾಗು ದುಶ್ಯಾಸನ ಹಾಗೆ ಬಂದ ನಾಯಿಯನ್ನು ಆಶ್ಚರ್ಯದಿಂದ ಪರೀಕ್ಷಿಸಿದರು. ಒಂಚೂರೂ ಗಾಯವಾಗದರೀತಿಯಲ್ಲಿ ಬಾಣಗಳನ್ನು ಬಿಟ್ಟು ಅದರ ಬಾಯಿಯಲ್ಲಿ ತುಂಬಲಾಗಿತ್ತು. ಅದನ್ನು ನೋಡಿ ಬಿಲ್ವಿದ್ಯೆಯಲ್ಲಿ ಪರಿಣಿತನಾಗುತ್ತಿದ್ದ ಅರ್ಜುನ ಒಂದು ಕ್ಷಣ ವಿಚಿಲಿತನಾದ. ಕಾರಣ ತಮ್ಮ ಗುರುಗಳು ಇಲ್ಲಿಯವರೆಗೂ ಲಕ್ಷ್ಯಬೇಧನ, ಮ೦ತ್ರಾಸ್ತ್ರ ಪ್ರಯೋಗಗಳ ಬಗ್ಗೆಸಾಕಷ್ಟು ಹೇಳಿದ್ದಾರೆಯೇ ವಿನ: ಈ ತರಹದ ತಾಂತ್ರಿಕ ಕೌಶಲ್ಯವನ್ನು ಕಲಿಸಲಿಲ್ಲವಲ್ಲ ಎಂದು ಬೆರಗಾದ.
ಜೊತೆಗೆ ನಾಯಿ ಬಂದ ದಾರಿಯನ್ನನ್ನುಸರಿಸಿ ಹೋದರೆ ಕಂಡಿದ್ದು ಅದೇ ನಿಷಾದ ರಾಜನ ಮಗ ಏಕಲವ್ಯ ಮಣ್ಣಿನ ದ್ರೋಣರ ಮೂರ್ತಿ ಎದುರು ನಿರಂತರವಾಗಿ ಶರಸಂಧಾನ ನಡೆಸಿದ್ದಾನೆ. ದ್ರೋಣರಂತಹ ಅರಮನೆಯ ಗುರು ತನಗೆ ನೇರವಾಗಿ ವಿದ್ಯೆಕಲಿಸದಿದ್ದರೂ ಅವರ ಅನುಗ್ರಹವಾದರೂ ಇರಲಿ ಎಂದು ಅವರನ್ನು ಮಾನಸಿಕವಾಗಿ ಗುರುವೆಂದು ಸ್ವೀಕರಿಸಿ ತಾನೇ ಅಭ್ಯಸಿಸುತ್ತಿದ್ದ. ಅವನ ಯಾವ ಕೃತ್ಯದಲ್ಲೂ ಕ್ರಿಯೆಯಲ್ಲೂ ಶಬ್ದದ ಸುಳಿವೇ ಇರಲಿಲ್ಲ. ಕೇವಲ ಶರಗಳು ಕೈಯ್ಯಿಂದ ಹೊರಟಾಗ ಆಗುವಅನುಸಂಧಾನ ಮಾತ್ರವೇ ಕೇಳಿಸುತ್ತಿತ್ತು. ಸದ್ದಿಲ್ಲದೇ ಶತ್ರುವನ್ನು ಕಬಳಿಸಲು ಅನುವಾಗುವ ರೀತಿಯಲ್ಲಿ ಶಸ್ತ್ರಾಸ್ತ್ರಗಳನ್ನು ಬಳಸುವಾಗ ಎಲ್ಲಿಂದ ಶರಗಳು ಬರುತ್ತಿವೆ ಎಂದು ಗೊತ್ತಾಗುವ ಮುಂಚೆನೆ ಲಕ್ಷ್ಯ ಭೇದವಾಗುವ ವಿದ್ಯೆಯದು.
ಅವನನ್ನು ನೋಡುತ್ತಿದ್ದಂತೆ ಧಾವಿಸಿ ಹೋದ ದುರ್ಯೋಧನ, ತಾನು ರಾಜಕುಮಾರ ಎನ್ನುವುದನ್ನು ಅಚೆಗೆ ಇಟ್ಟು, ತಾನಾಗಿ ಮುಂದುವರೆದು ಅವನನ್ನು ಆಲಂಗಿಸಿ ಮಾತಾಡಿಸಿದ. ಏಕಲವ್ಯ ಕ್ಷಣಕಾಲ ಚಿತ್ತ ಕದಲಿ, "..ದುರ್ಯೋಧನ ಹಸ್ತಿನಾವತಿಯರಾಜಕುಮಾರ.." ಎನ್ನುತ್ತಾ ನೆಲಕ್ಕೆ ಕುಳಿತು ವಂದಿಸಿದ. ಯುಧಿಷ್ಠಿರ ಅವನನ್ನು ಹೊಗಳಿ ಬೆನ್ತಟ್ಟಿ ತಮ್ಮಂದಿರೊಂದಿಗೆ ಬಂದ ದಾರಿಯಲ್ಲೇ ಹಿಂದಿರುಗುತ್ತಿದ್ದರೆ, ಅವನನ್ನು ತನ್ನೆದುರು ಸಮಾನವಾಗಿ ನಿಲ್ಲಿಸಿಕೊಂಡ ದುರ್ಯೋಧನ ಏಕಲವ್ಯನಿಗೆ ನುಡಿದ.
" ಏಕಲವ್ಯ. ನಿನ್ನ ಕಂಡು ನನ್ನ ಘಳಿಗೆ ಸಾರ್ಥಕವಾಯಿತು. ನಿನಗೆ ಗುರುಗಳು ವಿದ್ಯೆ ಕಲಿಸಲು ಸಿದ್ಧರಿಲ್ಲದಿದ್ದರೇನಂತೆ ನಿನ್ನ ಪರಮ ಭಕ್ತಿ ಮತ್ತು ಏಕಾಗ್ರತೆಯಿಂದಾಗಿ ಯಾರೂ ಸಾಧಿಸದಷ್ಟು ಅದರಲ್ಲೂ ನಮ್ಮ ಯಾವ ಕುರು ರಾಜಕುಮಾರರೂಸಾಧಿಸದಷ್ಟು ಅಗಾಧ ಸಾಧನೆಯನ್ನು ಶರಸಂಧಾನದಲ್ಲಿ ಮಾಡಿದ್ದಿ. ನಿನ್ನ ಈ ಸಾಧನೆಗೆ ಬರುವ ಯಾವುದೇ ಅಡೆತಡೆಗಳನ್ನು ಇನ್ನು ಮೇಲೆ ಹಸ್ತಿನಾವತಿ ನಿಗ್ರಹಿಸುತ್ತದೆ. ಅವರ ಪರವಾಗಿ ನಾನು ನಿನಗೆ ಈ ವಚನ ಕೊಡುತ್ತೇನೆ. ನಿನ್ನ ಕಲಿಕೆಯಲ್ಲಿಯಾವುದೇ ಕುಂದು ಬಾರದಂತೆ ವಿದ್ಯೆ ನಿನ್ನ ವಶವಾಗಲಿ ಏಕಲವ್ಯ. ಹಸ್ತಿನಾವತಿಯ ಸಿಂಹಾಸನ ನಿನ್ನ ಸೇವೆಯನ್ನು ಒಂದಲ್ಲ ಒಂದಿನ ಬಳಸಿಕೊಳ್ಳುತ್ತದೆ. ನಿನಗ್ಯಾವ ಸವಲತ್ತು ಸೌಲಭ್ಯ ಬೇಕಿದ್ದರೂ ಅವುಗಳನ್ನು ಅರಮನೆಯಿಂದ ಒದಗಿಸಿಕೊಡುತ್ತೇನೆ..."
" ಧನ್ಯವಾದ ರಾಜಕುವರ. ನಿಮ್ಮ ಸೇವೆಗೆ ಈ ಬೇಡ ಜೀವ ಎಂದಿಗೂ ಬದ್ಧ. ನಿಮ್ಮ ಈ ಅನುಗ್ರಹ ನನ್ನ ಜೀವನವನ್ನು ಪಾವನಗೊಳಿಸಿದರೆ ಆ ಗುರುವರ್ಯರ ಆಶೀರ್ವಾದ ನನ್ನನ್ನು ರಣ ಕಲಿಯನ್ನಾಗಿಸುವಲ್ಲಿ ಪ್ರೇರೇಪಿಸುತ್ತಿದೆ. ನನ್ನ ಸೇವೆ ನಿಮ್ಮ ಪಾಲಿಗೆಎಂದಿಗೂ ಲಭ್ಯ. ಇದು ಹಿರಣ್ಯಧನುಷನ ಮಗ ಏಕಲವ್ಯನ ಮಾತು ರಾಜಕುಮಾರ. ನಿಮ್ಮನ್ನು ಈ ಕಾಡಿನಲ್ಲಿ ಏನೂಂದೂ ನೀಡದೆ ಸತ್ಕರಿಸದಿರುವುದಕ್ಕೆ ನನಗೆ ಕೀಳರಿಮೆಯಾಗುತ್ತಿದೆ. ನಿಮ್ಮ ಸೇವೆಯ ಭಾಗ್ಯ ನನಗೆ ಸಿಕ್ಕಲಿ.." ಎಂದು ಮತ್ತೆ ನಡುಮಟ್ಟಬಗ್ಗಿ ವಂದಿಸಿದ.
" ನೀನು ಸೇವೆಗೆ ಸಿದ್ಧ ಎಂಬ ಮಾತೇ ಅತಿ ದೊಡ್ಡ ಉಪಚಾರ ಮಿತ್ರ. ನಾನು ರಾಜಕುಮಾರನಾದರೂ ನೀನು ನನಗೆ ಮಿತ್ರನಂತೆ ಕಾಣಿಸುತ್ತಿದ್ದಿ ಏಕಲವ್ಯ. ನಿನ್ನ ಈ ರಣಾರ್ಪಣೆಗೆ ನಾನು ಸಂತೋಷವಾಗಿದ್ದೇನೆ. ಇನ್ನು ಮುಂದೆ ನೀನು ನನ್ನ ಆತ್ಮೀಯಬಳಗದಲ್ಲಿ ಒಬ್ಬನು ಏಕಲವ್ಯ. ನಿನ್ನ ರಣವಿದ್ಯೆ ನನ್ನನ್ನು ಮರಳು ಮಾಡಿದೆ. ಎಕಾಂಗಿಯಾಗಿ ನೀನು ನಡೆಸುತ್ತಿರುವ ಅಭ್ಯಾಸ, ನಾವು ಮಾಡುತ್ತಿರುವ ಅಭ್ಯಾಸಕ್ಕಿಂತ ಎಷ್ಟೊ ಪಟ್ಟು ಮಿಗಿಲಾಗಿದೆ. ಒಬ್ಬ ನೈಜ ವಿದ್ಯಾರ್ಥಿ ನೀನು. ಶುಭವಾಗಲಿ ಗೆಳೆಯ.." ಎನ್ನುತ್ತಾ ತುಂಬು ಸ್ನೇಹಭಾವದಿಂದ ದುರ್ಯೋಧನ ಅವನನ್ನು ಅಲಂಗಿಸಿದ್ದ. ರಥವನ್ನೇರಿ ಕಾಡ ದಾರಿಯಲ್ಲಿ ಬರುವಾಗ ದುಶ್ಯಾಸನನಿಗೂ, ಶಕುನಿಗೂ ವಿವರಿಸುತ್ತಾ ನುಡಿದಿದ್ದ ದುರ್ಯೋಧನ,
" ನೋಡಿದಿರಾ, ಕಲಿಕೆಯಲ್ಲಿ ನಮ್ಮ ರಾಜಕುಮಾರರು ತೋರಿಸಲಾಗದ ನೈಪುಣ್ಯತೆಯನ್ನು ಕಾಡು ಬಾಲಕನೊಬ್ಬ ಮೆರೆಯುತ್ತಿದ್ದಾನೆ. ಕಲಿಕೆ ಎಂದರೆ ಹೀಗಿರಬೇಕು. ಬಹುಶ: ಅರ್ಜುನನಿಗೆ ಸರಿ ಸಮನಾಗಿ ಹೀಗೆ ಧನುರ್ವಿದ್ಯೆಯನ್ನು ಕಲಿಯುತ್ತಿರುವವರಲ್ಲಿಸರಿಕನೆಂದರೆ ಇವನೇ ಇರಬೇಕು.." ಎ೦ದು ತುಂಬು ಮನಸ್ಸಿನಿಂದ ಶ್ಲಾಘಿಸಿದ್ದ. ಕೂಡಲೇ ಶಕುನಿ
" ಸರಿಯಾಗಿ ಹೇಳಿದೆ ದುರ್ಯೋಧನಾ. ಮುಂದೊಮ್ಮೆ ಯಾವತ್ತಾದರೂ ಅರ್ಜುನನ ವಿರುದ್ಧ ಕಾದಾಡಲು ಅಗತ್ಯಬಿದ್ದರೆ ಹುಡುಗ ನೆರವಾದಾನು. ಕಾರಣ ಯಾವತ್ತೋ ದಾಯಾದಿಗಳ ಕಲಹವೆದ್ದಲ್ಲಿ ನೀನೊಬ್ಬನೆ ಸರ್ವರನ್ನೂ ಸೆದೆಬಡಿಯಬಲ್ಲೆ, ಆದರೆಶಸ್ತ್ರಾಸ್ತ್ರಗಳ ಮೇಲಾಟದಲ್ಲಿ ಸಧ್ಯ ಅರ್ಜುನ ಮಾತ್ರವೇ ಶರದಿವ್ಯ ವಿದ್ಯೆ ಸಾಧಿಸುತ್ತಿದ್ದಾನೆ. ಹಾಗಾಗಿ ನಿನಗೊಬ್ಬ ಸರಿಯಾದ ಯುದ್ಧಗಾರ ಸಿಕ್ಕಿದಂತಾಯಿತು ಬಿಡು. " ಎಂದಿದ್ದ.
ಹೌದಲ್ಲ ಎನ್ನಿಸಿತ್ತು ದುರ್ಯೋಧನನಿಗೆ. ತಾನು ಆ ನಿಟ್ಟಿನಲ್ಲಿ ಯೋಚಿಸಿಯೇ ಇಲ್ಲ. ತಮ್ಮ ತಮ್ಮ ದಾಯಾದಿಗಳಲ್ಲಿ ಒಂದು ರೀತಿಯ ಅಂತರ ಹೆಚ್ಚಾಗುತ್ತಿದೆ ಮತ್ತು ಆಪ್ತತೆ ಕಡಿಮೆಯಾಗುತ್ತಿದೆ ಎನ್ನಿಸುತ್ತಿತ್ತಾದರೂ ಅದೇ ಮುಂದೊಮ್ಮೆ ಏನಾದರೂದಾವಾನಲಕ್ಕೆ ಕಾರಣವಾದೀತೆಂದು ತನಗೇಕೆ ಹೊಳೆಯಲಿಲ್ಲ. ಮಾವ ಶಕುನಿ ನುಡಿದದ್ದು ನಿಜವೇ. ದುರ್ಯೋಧನ ಈಗ ಅಗಾಧ ವ್ಯಾಪ್ತಿಯಲ್ಲಿ ಯೋಚನೆಗಳನ್ನು ಆರಂಭಿಸಿದ್ದ. ಆದರೆ ಅದಕ್ಕೂ ಮೊದಲೇ ಆ ದುರಂತ ಘಟಿಸಿತ್ತು. ಕಾರಣ ಇವರೇನೋಸುಮ್ಮನೆ ಮಾತು ಮಾತಿಗೆ ಅರ್ಜುನ ತಮಗೆದುರಾದಾನು ಎಂದುಕೊಂಡಿದ್ದರೆ ಅತ್ತ ಅವರ ಪಾಳೆಯದಲ್ಲಿ ನಡೆದ ಚಿಂತನೆಯೇ ಬೇರೆಯಾಗಿತ್ತು. ಉಳಿದವರದ್ದು ಏನೇ ಇರಲಿ. ಆದರೆ ಆಚಾರ್ಯರಾದ ದ್ರೋಣರೂ ಕೂಡಾ ಹೀಗೆ ಸಾಮಾನ್ಯರಂತೆಯೋಚಿಸುತ್ತಾರೆ, ತೀರ ಪಾಂಡವರ ಪಕ್ಷಪಾತಿಯಾಗಿ ವರ್ತಿಸಿ ಇಂತಹದ್ದೊಂದು ಇತಿಹಾಸವೇ ಕ್ಷಮಿಸಲಾರದಂತಹ ಘಟನೆಗೆ ಕಾರಣರಾಗುತ್ತಾರೆ ಎಂದು ಯಾರೂ ಊಹಿಸಿರಲಿಕ್ಕಿಲ್ಲ. ಆದರೆ ದ್ರೋಣರಿಗಿದ್ದ ಅರಮನೆಯ ಋಣವೋ ಅಥವಾ ತನ್ನಶಿಷ್ಯನನ್ನು ರಕ್ಷಿಸಿಕೊಳ್ಳುವ ದೂರದೃಷ್ಟಿಯೋ ಅಂತೂ ಮಾಡಬಾರದ ಅಪಚಾರ ಎಸಗಿಬಿಟ್ಟಿದ್ದರು. ಇಂತಹದ್ದೂ ನಡೆಯಬಹುದು ಎಂದು ದುರ್ಯೋಧನ ಅಂದುಕೊಳ್ಳುವುದು ಒತ್ತಟ್ಟಿಗಿರಲಿ ಕನಸಲ್ಲೂ ಊಹಿಸಲಾಗದ ಪ್ರಮಾದವಾಗಿ ಹೋಗಿತ್ತು.
ಅಷ್ಟು ಮಾತ್ರದ ರಾಜಕೀಯ ಮುತ್ಸದ್ದಿನತನ, ದೂರದೃಷ್ಟಿಯ ನಡೆಗಳನ್ನು ನಿರ್ವಹಿಸಿ ಅರಸು ಮನೆತನಕ್ಕೆ ಬೆಂಬಲಿಸುವವರೂ, ಭವಿಷ್ಯದ ನಿಟ್ಟಿನಲ್ಲಿ ಇಂತಹದ್ದೆಲ್ಲಾ ಮಾಡಬೇಕಾಗುತ್ತದೆ ಎನ್ನುವುದನ್ನು ಯೋಚಿಸುವವರೂ ಸಹಿತ ಕೂಡಾ ಈ ರೀತಿಯನಡೆಯನ್ನು ದ್ರೋಣರಿಂದ ನಿರೀಕ್ಷಿರಲೇ ಇಲ್ಲ. ರಾಜಕೀಯ ಮಾಡಬೇಕು ನಿಜ ಆದರೆ ಈ ಪರಿ ಎಂಥವರನ್ನೂ ನಿರ್ದಯವಾಗಿ ಹೊಸಕಿ ತಮ್ಮ ಗುರಿ ಮತ್ತು ಧ್ಯೇಯ ಸಾಧನೆಗೆ ಇಳಿಯುವುದಿದೆಯಲ್ಲ, ಅದನ್ನು ಯಾರೂ ಊಹಿಸಲಾಗದ ಮಟ್ಟದಲ್ಲಿ ದ್ರೋಣಮಾಡಿಬಿಟ್ಟಿದ್ದರು. ದುರ್ಯೋಧನ ಭಾವುಕನಾಗಿ ಯೋಚಿಸುತ್ತಿದ್ದುದರಿಂದ ಉಳಿದವರಿಗಿಂತಲೂ ತಂತ್ರಗಾರಿಕೆಯಲ್ಲಿ ಹಿಂದೆ ಬಿದ್ದಿದ್ದ. ಆದರೆ ಪಾಂಡವರು ಪ್ರಾಯೋಗಿಕವಾಗಿ ಯೋಚಿಸಿ ಅಡಿಯಿಡತೊಡಗಿದ್ದು ಸ್ಪಷ್ಟವಾಗಿತ್ತು.
ಅದು ದುರ್ಯೋಧನನ ಬಲದ ಮೇಲೆ ಹೊಡೆದ ಮೊಟ್ಟ ಮೊದಲ ಪ್ರಹಾರವಾಗಿತ್ತು ಮತ್ತು ದ್ರೋಣರು ಪಾಂಡವರೊಡನೆ ಸೇರಿ ಮಾಡಿದ ಐತಿಹಾಸಿಕ ಪ್ರಮಾದವಾಗಿತ್ತು. ಒಟ್ಟಾರೆ ಬಲಿಪಶು ದುರ್ಯೋಧನಾಗಿದ್ದ. ಅದರ ಪ್ರಯೋಜನವೇನಾದರೂ ಇದ್ದರೆಅದು ಭವಿಷ್ಯತ್ತಿನಲ್ಲಿ ಅವನಿಗೆ ಸಲ್ಲುತ್ತಿತ್ತೇನೋ ಅದಕ್ಕೆ ಅದನ್ನು ಮೊಳಕೆಯಲ್ಲೇ ಚಿವುಟಲಾಗಿತ್ತು. ಪಾಂಡವರನ್ನು ಬಲಪಡಿಸುವ ಚಿಂತನೆಗೆ ಪರೋಕ್ಷವಾಗಿ ಕಾರ್ಯಾಚರಣೆ ಆರಂಭವಾಗಿ ಹೋಗಿತ್ತಾ..? ಗೊತ್ತಿಲ್ಲ. ಆದರೆ ಮೊದಲ ದಾಳ ಮಾತ್ರ ದ್ರೋಣರರೂಪದಲ್ಲಿ ಚಾಲನೆಗೆ ಬಂದುಬಿಟ್ಟಿತ್ತು. ಹಾಗಾಗೆ ಆ ಸುದ್ದಿ ದುರ್ಯೋಧನನ್ನು ತಲುಪುವ ಹೊತ್ತಿಗೆ ಆ ದುರ್ಘಟನೆ ನಡೆದು ಹೋಗಿತ್ತು.
No comments:
Post a Comment