Saturday, March 10, 2018


ಅಧ್ಯಾಯ -೮
ಸಂಪೂರ್ಣ ನೂರಾ ಐದು ವಿದ್ಯಾರ್ಥಿಗಳು ಜಗತ್ತಿನಲ್ಲೇ ಅತ್ಯುತ್ತಮವಾದ ವಿದ್ಯಾಭ್ಯಾಸವನ್ನು ಮಾಡಿ ಗುರುಗಳ ಕೃಪೆಯಿಂದ ಪುನೀತರಾಗಿದ್ದರು. ಪ್ರತಿಯೊಬ್ಬ ಯೋಧನೂ ಏನಾದರೂ ಮಾಡಬೇಕೆನ್ನುವ ಹಂಬಲ ಮತ್ತು ಅದ್ಭುತವಾದ ವಿದ್ಯೆಯನ್ನು ಪ್ರದರ್ಶಿಸಬೇಕೆನ್ನುವ ಹುಮ್ಮಸ್ಸು ಉಬ್ಬಿರಿಯುತ್ತಿದ್ದ ಅ೦ಗಾಂಗಗಳ ಮಾಂಸ, ಖಂಡ, ಸ್ನಾಯುಗಳಲ್ಲೂ ಗೋಚರಿಸುತ್ತಿತ್ತು. ಭಾರವಾದ ಗದೆಯನ್ನು ತನ್ನ ಹೆಗಲ ಮೇಲಿರಿಸಿಕೊಂಡು ತಿರುಗಾಡುತ್ತಿದ್ಡ ದುರ್ಯೋಧನ ಆಗೀಗ ಅದನ್ನು ಎತ್ತಿ ಸುಖಾ ಸುಮ್ಮನೆ ಗಿರಿಗಿರಿ ಸುತ್ತಿಸುತ್ತಿದ್ದ.
ಅವನ ಎಷ್ಟೋ ಜನ ತಮ್ಮಂದಿರಿಗೆ ಆ ಗದೆಯನ್ನು ಎತ್ತುವುದೇ ಕಷ್ಟವಾಗುತ್ತಿತ್ತು. ಅವನಿಗೆ ಸರಿ ಸಮವಾಗಿ ಗದೆಯನ್ನು ಸುಲಭವಾಗಿ ಎತ್ತಬಲ್ಲ ಸಾಮರ್ಥ್ಯವಿದ್ದವರೆಂದರೆ ಗುರು ದ್ರೋಣರನ್ನು ಹೊರತು ಪಡಿಸಿದರೆ ಭೀಮ ಮಾತ್ರ. ಅಷ್ಟೊಂದು ಲೀಲಾಜಾಲ ಅಂಗಿಕ ಭಾವಾಭಿವ್ಯಕ್ತಿ ಅವನಿಗೆ ಮಾತ್ರವೇ ಸಾಧ್ಯವಿತ್ತು. ಆಗಷ್ಟೆ ಕೊನೆಯ ಬಾರಿಗೆ ಶಸ್ತ್ರಾಭ್ಯಾಸ ಮಾಡಿಸಿ ಕುಳಿತಿದ್ದ ದ್ರೋಣರ ಮನದಲ್ಲಿ, ದಶಕಗಳಿಂದಲೂ ದಹಿಸುತ್ತಿದ್ದ ಪ್ರತಿಕಾರದ ಕಿಡಿ ತಿವಿತಿವಿದು ಎಬ್ಬಿಸುತ್ತಿದ್ದುದು ಈಗ ಬೃಹದಾಕಾರವಾಗಿ ಬೆಳೆದು ನಿಂತಿತ್ತು. ಅಷ್ಟಕ್ಕೂ ದ್ರೋಣರಿಗೆ ಹೀಗಾದೀತು ಎನ್ನುವ ಅಂದಾಜೂ ಇರಲಿಲ್ಲ.
ಕಾರಣ ಬ್ರಾಹ್ಮಣ ಜಗತ್ತಿನ ಏಕೈಕ ವೀರಾಧಿವೀರನೆಂದು ಹೆಸರುವಾಸಿಯಾದ, ಇಪ್ಪತ್ತೊಂದು ಬಾರಿ ಭೂಮ೦ಡಲವನ್ನೆಲ್ಲಾ ಸುತ್ತಿ ಕ್ಷತ್ರಿಯರನ್ನು ನಿರ್ಮೂಲನೆ ಮಾಡಿ, ಶಾಂತವಾಗಿದ್ದ ಭಾರ್ಗವರಾಮ ಶ್ರೀ ಪರುಶುರಾಮರಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ದಿನಗಳವು. ಆಗ ಪಾಂಚಾಲದ ರಾಜಕುಮಾರ ದ್ರುಪದನೂ ಇದ್ದ. ಚೂಟಿಯಾಗಿದ್ದ ಬ್ರಾಹ್ಮಣ ವಟು ದ್ರೋಣನೊಡನೆ ಸಲುಗೆ ಬೆಳೆಸಿದ್ದ ದ್ರುಪದನಿಗೆ, ಮನೆ ಕಡೆಯಿಂದ ಅಷ್ಟೇನೂ ಉತ್ತಮ ಸ್ಥಿತಿವಂತನಲ್ಲ, ಆರ್ಥಿಕ ಬಲವೂ ದ್ರೋಣನಿಗಿಲ್ಲ ಎಂದು ಗೊತ್ತಾಗಿತ್ತು. ವಿದ್ಯೆಯನ್ನೇನೋ ಅದ್ಭುತವಾಗಿ ದ್ರೋಣ ಕಲಿಯುತ್ತಿದ್ದನಾದರೂ ಮನೆಯ ಕಷ್ಟಕಾರ್ಪಣ್ಯಗಳು ಅವನ ಏಕಾಗ್ರತೆ ನಾಶ ಮಾಡುತ್ತಿದ್ದುದನ್ನು ದ್ರುಪದ ಸೂಕ್ಷ್ಮವಾಗಿ ಗಮನಿಸಿದ್ದ. ತನ್ನೊಂದಿಗೆ ಸ್ನೇಹದಲ್ಲಿದ್ದಾನೆ. ಕಲಿಯುವುದರಲ್ಲಿ ಈ ಬ್ರಾಹ್ಮಣರಿಗೆ ಸಮನಾದವರು ಈ ಲೋಕದಲ್ಲಿ ಇಲ್ಲ ಎನ್ನುವುದನ್ನು ಮತ್ತೊಮ್ಮೆ ಸಾಬೀತುಮಾಡುತ್ತಿದ್ದಾನೆ. ಗುರುಭಾರ್ಗವರಾಮರ ಈ ಶಿಷ್ಯ ನಾಳೆ ಯಾತಕ್ಕಾದರೂ ಸಮಯಕ್ಕಾದಾನು ಎಂದು ದ್ರುಪದ ರಾಜಕೀಯ ಮುತ್ಸದ್ದಿಯಂತೆ ಮಾತನಾಡಿದ್ದ ಆವತ್ತು,
"..ಮಿತ್ರಾ ನೀನು ಚಿಂತೆ ಬಿಟ್ಟು ಏಕಾಗ್ರತೆಯಿಂದ ಸಾಧನೆ ಮಾಡು.." ದ್ರೋಣ ಬಿರುಗಣ್ಣಿಂದ ದ್ರುಪದನನ್ನು ನೋಡಿದ್ದ. ಅವನಿಗೇನು ಗೊತ್ತಿಲ್ಲವೇ ಏಕಾಗ್ರತೆಯಿಂದ ಕಲಿಯಬೇಕೆಂದು. ಆದರೆ ಏಕಾಗ್ರತೆ ಬರುವುದೆ ಸಮಸ್ಯೆ ಪರಿಹಾರವಾದ ಮೇಲೆ. ಆದನ್ನು ಪರಿಹರಿಸುವಂತೆ ಹಿಂದೆಯೇ ದ್ರುಪದ ನುಡಿದಿದ್ದ,
" ಮಿತ್ರಾ ಯೋಚಿಸಬೇಡ. ನೀನು ನನ್ನ ಅತ್ತ್ಯುತ್ತಮ ಮಿತ್ರರಲ್ಲೊಬ್ಬ. ಒಂದು ಕೈ ನನಗಿಂತಲೂ ಉತ್ತಮ ಬಿಲ್ಲುಗಾರ. ನಿನಗೆ ಈ ಭೂಮಿಯ ಮೇಲೆ ಅಸಾಧ್ಯ ಎನ್ನುವುದಿಲ್ಲ. ಆದರೂ ನಿನಗೆಲ್ಲೂ ನೆಲೆ ನಿಲ್ಲಲಾಗದೆ ಭೂಮಂಡಲದ ಮೇಲೆ ಒಂದು ಸೂರು, ನೆಮ್ಮದಿಯ ನಿದ್ರೆ ಸಿಕ್ಕದಿದ್ದರೆ, ಮುಂದೊಮ್ಮೆ ಪಾಂಚಾಲದ ಅರ್ಧರಾಜ್ಯ ಬೇಕಾದರೂ ಬರೆದುಕೊಡುತ್ತೇನೆ. ಈಗ ನಿಶ್ಚಿಂತೆಯಿಂದಿರು..." ಎಂದು ಸಂತೈಸಿ ಹೇಳಿದ ದ್ರುಪದ ಅದನ್ನು ಮರೆತೂಬಿಟ್ಟಿದ್ದ. ಕಾರಣ ಮಿತ್ರನನ್ನು ಸಂತೈಸುವ ಭರದಲ್ಲಿ ನುಡಿದಿದ್ದನೇನೋ. ಆದರೆ ದ್ರೋಣ ಅದನ್ನು ಗಂಭೀರವಾಗಿ ಪರಿಗಣಿಸಿಬಿಟ್ಟಾನು, ಮುಂದೆಂದಾದರೊಮ್ಮೆ ಈ ಬ್ರಾಹ್ಮಣ ವಟು ತನ್ನೆದುರು ನಿಂತು "...ನಿನ್ನ ಅರ್ಧ ರಾಜ್ಯ ಭಿಕ್ಷಾಂ ದೇಹಿ.." ಎಂದು ಬಿಟ್ಟಾನು ಎಂಬ ಸಣ್ಣ ಯೋಚನೆಯೂ ಹೊಳೆದಿರಲಿಲ್ಲ. ಕಾರಣ ಸಹಜವಾಗನ್ನುವಂತೆ ನನ್ನರ್ಧ ಆಸ್ತಿ ಬೇಕಾದರೂ ಕೊಟ್ಟೇನು ಸುಮ್ಮನಿರು ಎಂದು ಸಂತೈಸಿಬಿಟ್ಟಿದ್ದ.
ವಿದ್ಯಾಭ್ಯಾಸ ಮುಗಿಸಿ ದ್ರುಪದ ಹೊರಟುಹೋದ. ಇತ್ತ ಬಡಬ್ರಾಹ್ಮಣ ಎಂಬ ಹಣೆಪಟ್ಟಿಯಿಂದ ಹೊರಬರಲಾರದೆ ದ್ರೋಣ ತಡಬಡಿಸಿದ. ಅದ್ಭುತ ಬಿಲ್ಲುಗಾರ, ಅಪರ ಪರಾಕ್ರಮಿ ಸರಿ, ಆದರೇನು ಎಲ್ಲಿಯೂ ಸರಿಯಾಗಿ ಆಶ್ರಯ ಸಿಕ್ಕುತ್ತಿಲ್ಲ. ಮಡದಿ ಕೃಪೆ ಸಾಕಷ್ಟು ತೂಗಿಸಲು ಪ್ರಯತ್ನಿಸಿದಳು. ಬೆಂಬಲಕ್ಕೆ ಕೃಪೆಯ ಅಣ್ಣ ಕೃಪ ಕೂಡಾ ದ್ರೋಣನ ಬೆನ್ನಿಗೆ ನಿಂತ. ಉಹೂಂ. ಆದರೂ ಅದೇಕೋ ದರಿದ್ರ ಲಕ್ಷ್ಮಿ ಅವನ ಹೆಗಲಿಳಿಯಲೇ ಇಲ್ಲ. ಸಾಕಾಗಿ ಹೋದ ದ್ರೋಣ ದ್ರುಪದನ ರಾಜ್ಯಕ್ಕೆ ತೆರಳಿದ.
ಅರ್ಧರಾಜ್ಯವನ್ನೇ ಬರೆದುಕೊಡುತ್ತೆನೆಂದಿದ್ದ ಗೆಳೆಯ ಕೊಂಚ ರಾಜಾಶ್ರಯವಾದರೂ ಕೊಟ್ಟಾನು. ಇನ್ನಿಲ್ಲದಂತೆ ಸಹಾಯ ಮಾಡಿ ಅವನ ಸೈನ್ಯಕ್ಕೆ ಬೇಕಾದ ಅದ್ಭುತ ಬಿಲ್ವಿದ್ಯೆ, ಯುದ್ಧ ತರಬೇತು ಎಲ್ಲವನ್ನು ಪ್ರತಿಯಾಗಿ ನೀಡಿದರಾಯಿತು. ಒಂದು ನೆಮ್ಮದಿಯ ಊರು, ಕುಟುಂಬಕ್ಕೊಂದು ಸೂರು, ಪಾಂಚಾಲದರಮನೆಯ ಸೈನ್ಯ ಶಿಕ್ಷಣಾಧಿಕಾರಿಯ ಹುದ್ದೆ ಇನ್ನೇನು ಬೇಕು ಎಂದೆಲ್ಲಾ ಯೋಚಿಸುತ್ತಾ ಅರಮನೆಯ ಬಾಗಿಲಲ್ಲಿ ನಿಂತ ದ್ರೋಣನ ಕನಸು ಭಗ್ನಗೊಂಡಿತ್ತು.
" ಮಹಾರಾಜರು ರಾಜ ಸಮಾಲೋಚಕರೊಂದಿಗೆ ಗಂಭೀರ ಚರ್ಚೆಯಲ್ಲಿದ್ದಾರೆ, ನಿನ್ನನ್ನು ಗುರುತಿಸುತ್ತಿಲ್ಲ ಅವರು. ಅದೇನು ಬೇಕಿದ್ದರೂ ಆಚೆಯ ಊಟದ ಮನೆಯಿಂದ ಕಾಳು ಕಡಿ ತೆಗೆದುಕೊಂಡು ಉಂಡುಹೋಗಲು ಹೇಳಿದ್ದಾರೆ..." ಕಾವಲು ಭಟ ನುಡಿಯುತ್ತಿದ್ದರೆ ನಖಶಿಖಾಂತ ಉರಿದು ಬಿಟ್ಟ. ಅದರಲ್ಲೂ ಹಸಿವಿದ್ದಾಗ ಕೋಪ, ಸಂಕಟ ಜಾಸ್ತಿ. ಬೆನ್ನಿನಿಂದ ಬಾಣವನ್ನು ಸೆಳೆದು, ಕಾವಲಿನವರನ್ನು ಒಂದೇಟಿಗೆ ನಿವಾರಿಸಿಕೊಂಡು ಸಭಾ ಮರ್ಯಾದೆ ಲೆಕ್ಕಿಸದೆ ಮಧ್ಯೆ ನುಗ್ಗಿಬಿಟ್ಟ. ತುಂಬಿದ ದ್ರುಪದನ ಸಭೆ ಅವಾಕ್ಕಾಯಿತು.
ನಾರುಮಡಿ, ಕೃಶ ಶರೀರ, ಉದ್ದುದ್ದ ಗಡ್ಡ ಮೀಸೆಗಳು, ಎದೆಯ ಮೇಲೆ ಶರ ಎಳೆದೆಳೆದು ಬಿಟ್ಟು ಕ್ಷತಿಗೊಂಡ ಕಪ್ಪನೆಯ ಗುರುತು. ಕೈಗಳೆರಡರಲ್ಲೂ ಶರಾಘಾತಕ್ಕೆ ದಡ್ಡುಗಟ್ಟಿದ ಚರ್ಮ, ಕಠೋರ ಬ್ರಾಹ್ಮಣ್ಯದ ಸಂಕೇತವಾಗಿ ನೀಟಾರನೆ  ನಿಂತಿರುವ ಜನಿವಾರ, ಯುದ್ಧೋನ್ಮಾದದಿಂದ ಕಂಪಿಸುತ್ತಿದ್ದ ದೇಹ ಹೊರತುಪಡಿಸಿದರೆ ದ್ರುಪದ ನರೇಶನ ಸನಿಹಕ್ಕೆ ಬರುವಂತಹ ಯಾವ ಲಕ್ಷಣಗಳೂ ಕಂಡುಬರುತ್ತಿಲ್ಲ. ಮಿಗಿಲಾಗಿ ಸಭಾಭವನಕ್ಕೆ ಏಕಾಂಗಿಯಾಗಿ ನುಗ್ಗಿ ತನ್ನನ್ನೇ ಸ್ನೇಹಿತನಂತೆ ಏಕವಚನದಲ್ಲಿ ಕರೆದು ಕೆಳಗಿಳಿಯಲು ಸೂಚಿಸುತ್ತಿರುವ ವ್ಯಕ್ತಿಯನ್ನು ಮಸ್ತಿಷ್ಕ ನೆನಪಿಸಿ ಗುರುತಿಸಿಕೊಳ್ಳಲು ಪ್ರಯತ್ನಿಸಿತಾದರೂ, ಕಾಂಪಿಲ್ಯದ ಮಹಾರಾಜನೆಂಬ ಅಹಂ ಅದಕ್ಕಿಂತಲೂ ಮೊದಲು ಕ್ರಿಯೆಗಿಳಿಯಿತು.
" ನಿನ್ನಂಥವನೊಂದಿಗೆ ಅದೆಂಥಾ ಸ್ನೇಹ. ಸರಿಕರಲ್ಲದವರೊಡನೆ ಅಂದೆಂಥಾ ಮಿತೃತ್ವ..? ಸಭಾಮರ್ಯಾದೆ ಗೊತ್ತಿಲ್ಲದ ಬ್ರಾಹ್ಮಣ. ನಿನ್ನಲ್ಲಿರುವ ಯುದ್ಧೋನ್ಮಾದ ನೋಡಿದರೆ ಅದ್ಯಾವ..."ಮುಂದಿನ ಮಾತನ್ನು ನುಡಿಯಲು ನೀಡದೆ ದ್ರೋಣ ಗುಡುಗಿದ್ಡ.
" ಎಲವೋ ಅವಿವೇಕಿ ದ್ರುಪದ. ಸಿಂಹಾಸನ ಸಿಕ್ಕಿದ ಕೂಡಲೇ ಬಾಲ್ಯ, ಬಳಗ, ಗುರು, ವಿದ್ಯೆ ಎಲ್ಲವೂ ಮರೆತುಬಿಟ್ಟೆಯಾ ಚಾಂಡಾಲ. ನನಗೂ, ನನ್ನ ಬದುಕಿಗೂ ಭರವಸೆಯ ಮಾತನ್ನು ಕೊಟ್ಟು ಬದುಕಲು ಪ್ರೇರೇಪಿಸಿವನೆಂದು ನಂಬಿ ಬಂದೆ. ಹಸಿದ ಹೊಟ್ಟೆಗೆ ಅನ್ನ ಮತ್ತು ಸ್ನೇಹಿತನೆಂಬ ಸಲುಗೆಯಿಂದ ರಾಜಾಶ್ರಯವನ್ನು ಕೇಳಿ ಬಂದಿದ್ದೆ ನೀಚಾ. ಅದಕ್ಕೆ ಬದಲಾಗಿ ಈ ಭಾರ್ಗವರಾಮ ಶಿಷ್ಯ ನಿನ್ನ ರಾಜ್ಯವನ್ನು ರಕ್ಷಿಸಲು ಬದ್ಧನಾಗಿದ್ದ. ಸೈನ್ಯಕ್ಕೆ ಶಿಕ್ಷಣಾಧಿಕಾರಿಯಾಗಿ ಋಣ ತೀರಿಸುತ್ತಿದ್ದ. ಆದರೆ ನಿನ್ನ ನೆತ್ತಿಗೇರಿರುವ ಅಹಂ ನನ್ನನ್ನು ಈ ತುಂಬಿದ ಸಭೆಯಲ್ಲಿ ಅವಮಾನಕ್ಕೀಡು ಮಾಡಿದೆ. ಬಣ್ಣಗೆಟ್ಟ ಪಂಚೆಯುಟ್ಟ ಬಡ ಬ್ರಾಹ್ಮಣನಾದ ನನ್ನನ್ನು ಹೀಯಾಳಿಸಬಾರದಿತ್ತು. ದ್ರುಪದಾ ನಿನ್ನ ಸಿಂಹಾಸನದಿಂದ ಕೆಳಗಿಳಿಸಿ, ನನ್ನ ಶಿಷ್ಯರ ಕೈಯಿಂದ ಹೊಡೆಸಿ, ದೊಡ್ಡದಾದ ನನ್ನ ಮಂಚದ ಕಾಲಿಗೆ ಕೆಡವಿಕೊಳ್ಳದಿದ್ದರೆ ನಾನು ಪರುಶರಾಮರ ಶಿಷ್ಯ ದ್ರೋಣನೇ ಅಲ್ಲ. ನಿನ್ನೊಡನೆ ಸರಿಕನಾದ ನಂತರವೇ ನಿನ್ನನ್ನು ಕಾಣುತ್ತೇನೆ. ಅದಾಗದಿದ್ದರೆ ಈ ಶರೀರವನ್ನು ಪಂಚಭೂತಗಳಿಗೆ ಹವಿಸ್ಸುವಾಗಿಸುತ್ತೇನೆ..." ರಣಾವೇಶದಿಂದ ಪ್ರತಿಜ್ಞೆ ಮಾಡಿ ಪುನ: ಕಾಡು ಸೇರಿದ್ದ ದ್ರೋಣ. ನಂತರದ್ದು ಇತಿಹಾಸ.
ಕೆಲವೇ ಸಮಯದಲ್ಲಿ ಆಚಾರ್ಯ ಭೀಷ್ಮರ ಎದುರು ನಿಲ್ಲುವಂತಾಯಿತು. ಕೃಪ ಜೊತೆಗಿದ್ದೇ ಇದ್ದ. ಭೀಷ್ಮರೂ ಒಂದು ಕಾಲದಲ್ಲಿ ಪರಶುರಾಮರ ಶಿಷ್ಯರೇ. ಅಲ್ಲಿಂದೀಚೆಗೆ ತಿರುಗಿ ನೋಡಲಿಲ್ಲ. ರಾಜಾಶ್ರಯ ಸಿಕ್ಕ ಮೇಲೆ ವಿದ್ಯೆಯ ಮೇಲಿನ ಹಿಡಿತ ಬಿಗಿಗೊಳಿಸಿದ್ದ ದ್ರೋಣ. ಸಂಪೂರ್ಣ ವಿದ್ಯೆಯನ್ನೆಲ್ಲಾ ಧಾರೆ ಎರೆದು ಮಾತುಕೊಟ್ಟಂತೆ ರಾಜಕುಮಾರರನ್ನು ಜಗತ್ತಿನಲ್ಲಿಯೇ ಸರ್ವಶ್ರೇಷ್ಠ ಯೋಧರನ್ನಾಗಿಸಿದ. ಗುರುದಕ್ಷಿಣೆಯ ವಿಷಯ ಬಂದಾಗ ಅದನ್ನು ಶಿಷ್ಯರಿಂದಲೇ ತೆಗೆದುಕೊಳ್ಳುವುದಾಗಿ ನುಡಿದು ಭೀಷ್ಮ, ಧೃತರಾಷ್ಟ್ರರನ್ನು ಜಾಣ್ಮೆಯಿಂದ ಒಲಿಸಿಕೊಂಡಿದ್ದ. ಕುಳಿತಲ್ಲಿಂದ ಸೇವಕರನ್ನು ಕರೆದು ಮೈದಾನದಲ್ಲಿ ಶಿಷ್ಯರನ್ನು ಸೇರಿಸುವಂತೆ ಸೂಚಿಸಿದ. ಶಿಷ್ಯೋತ್ತಮರ ಮಧ್ಯದಲ್ಲಿ ಎದುರಿಗೆ ಮದಗಜಗಳಂತೆ ಭೀಮ ದುರ್ಯೋಧನರು ನಿಂತುಕೊಂಡಿದ್ದರು.
"..ಎಲ್ಲರೂ ಸರ್ವ ಶ್ರೇಷ್ಠ ವಿದ್ಯೆಗಳನ್ನು ಪಡೆದಿದ್ದೀರಿ. ಇನ್ನೇನಿದ್ದರೂ ದೇವಾನುದೇವತೆಗಳನ್ನು ಒಲಿಸಿಕೊಂಡು ಶಸ್ತ್ರಾಸ್ತ್ರಗಳನ್ನು ಪಡೆಯುವುದಷ್ಟೆ. ಅದಕ್ಕೂ ಮೊದಲು ನನಗೆ ಗುರುದಕ್ಷಿಣೆಯನ್ನು ಕೊಡಬಹುದು ಎಂದೆನ್ನಿಸಿದರೆ ಮನ:ಪೂರ್ವಕವಾಗಿ ಕೊಡುತ್ತೀರಾದರೆ ಕೇಳುತ್ತೇನೆ. ಇದರಲ್ಲಿ ಒತ್ತಾಯವೇನಿಲ್ಲ..." ಎಲ್ಲರೂ ಒಮ್ಮೆ ಸ್ತಬ್ದರಾದರು. ಕುತೂಹಲ. ತಂತಮ್ಮಲ್ಲೇ ಗುಜುಗುಜು ಆರಂಭಿಸಿದರು. ದ್ರೋಣರ ಪೀಠಿಕೆ ಕೇಳುತ್ತಿದ್ದಂತೆ ನಿಂತಲ್ಲಿಯೇ ದುರ್ಯೋಧನ ಕೊಸರಾಡಿದ. ಅದು ಗೊತ್ತಿದ್ದೇ ದುಶ್ಯಾಸನ ಭುಜ ತಿವಿದ. ಹಿಂದೊಮ್ಮೆ ಹೀಗೆಯೇ ದಕ್ಷಿಣೆಯ ನೆಪದಲ್ಲಿ ಕಾಡಿನ ಬೇಡರ ಕುವರ ಏಕಲವ್ಯನ ಬೆರಳು ಪಡೆದು ಈ ಜಗತ್ತು ಕಾಣಬಹುದಾಗಿದ್ದ ಅಪರೂಪದ ಬಿಲ್ಗಾರನೊಬ್ಬನನ್ನು ಕಳೆದುಬಿಟ್ಟಿದ್ದರು. ಆ ದಿನ ಎಲ್ಲರಿಗಿಂತಲೂ ಹೆಚ್ಚಿಗೆ ಸಂಕಟ ಪಟ್ಟಿದ್ದವನು ದುರ್ಯೋಧನ.
ಕಾರಣ ಉಳಿದದ್ದೇನೆ ಇರಲಿ. ಒಬ್ಬ ಮನುಷ್ಯ ವಿದ್ಯೆಯನ್ನೇ ಕದ್ದಿದ್ದರೂ ಅದರಲ್ಲಿ ಸದುದ್ದೇಶ ಇದ್ದರೆ ಮನ್ನಿಸಿ ಬೆಳೆಸಬೇಕಾದ, ಉತ್ತಮ ದಾರಿ ತೋರಬೇಕಾದ ಗುರುವೇ ಬದುಕಿದ್ದೂ ಸತ್ತಂತೆ ಮಾಡಿಬಿಟ್ಟರೇ..? ದುರ್ಯೋಧನ ದ್ರೋಣರ ಈ ಬೇಡಿಕೆಯಿಂದಾಗಿ ಒದ್ದಾಡಿ ಹೋಗಿದ್ದ. ತಾನೆ ಅರಮನೆಯಿಂದ ಸಾಕಷ್ಟು ಸಂಪತ್ತನ್ನು ಕಾಡುಪುತ್ರನಿಗೆ ನೀಡಿ ಹೇಗೋ ಬದುಕಿಕೋ ಎಂದು ಕಣ್ಣೊರೆಸಿ ತಬ್ಬಿ ಸಂತೈಸಿ ಬಂದಿದ್ಡ. ಆ ಹುಡುಗನಾದರೂ ಒಂದಿನಿತಾದರೂ ದ್ರೋಣರ ಬಗ್ಗೆ ಕಪಟವನ್ನಾಡಬೇಕು..? ಉಹೂಂ.. ಬೆರಳೇನು ಗುರುದ್ರೋಣ ಕೇಳಿದ್ದರೆ ಕತ್ತು ಕೂಡಾ ಕೊಟ್ಟು ಬಿಡುತ್ತಿದ್ಡೆ ಎನ್ನಬೇಕೆ...? ಅದೆ೦ಥಾ ಗುರು ಭಕ್ತಿ...?
ಛೇ.. ಅಂಥವನೊಬ್ಬನನ್ನು ತಮ್ಮೊಂದಿಗೆ ಬೆಳೆಸಿದ್ದರೆ ಈ ರಾಜ್ಯಕ್ಕೆ ಅದರಲ್ಲೂ ಹಸ್ತಿನಾಪುರಕ್ಕೊಬ್ಬ ಅದ್ಭುತ ಸೇನಾನಿ ಸಿಗುತ್ತಿದ್ದ ಎಂದು ದ್ರೋಣರು ಯೋಚಿಸಬೇಕಿತ್ತು. ಯಾಕೆಂದರೆ ಇವರೆಲ್ಲಾ ಕಟಿಬದ್ಧರಾಗಿರುವುದು ಹಸ್ತಿನಾವತಿಯ ರಾಜ ಸಿಂಹಾಸನಕ್ಕೆ ಮತ್ತದರ ರಕ್ಷಣೆಗೆ. ಆದರೆ ಅಂತಹ ಅದ್ಭುತ ಬಿಲ್ಗಾರನೊಬ್ಬನ ಬೆರಳೆ ಕತ್ತರಿಸಿಕೊಂಡರಲ್ಲಾ. ಈ ಗುರುಗಳ ಬುದ್ಧಿಗೆ ಅದೇನು ಮ೦ಕೋ ಅಥವಾ ಏಕಲವ್ಯನ ಗ್ರಹಚಾರವೋ ಎಂದುಕೊಳ್ಳುವಾಗಲೇ ತಿಳಿದ ವಿಷಯದಿಂದ ದುರ್ಯೋಧನ ಜುಗುಪ್ಸೆಗೊಂಡಿದ್ದ. ಇಂತಹ ಘಟನೆಗಳ ಅನುಭವವಿದ್ದ ದುರ್ಯೊಧನ ಕೊಂಚ ಅನ್ಯಮನಸ್ಕನಾಗಿಯೇ ನಿಂತಿದ್ದ.
ಈಗ ನೋಡಿದರೆ ಕೇಳುತ್ತಿರುವ ರೀತಿಯೇ ವಿಚಿತ್ರ. ಇವರಿಗೆ ಗುರುದಕ್ಷಿಣೆಯಾಗಿ ಏನೇ ಕೊಡಬೇಕಿದ್ದರೂ ಅದು ಭೀಷ್ಮ ಪಿತಾಮಹ ಅಥವಾ ಅಪ್ಪ ಧೃತರಾಷ್ಟ್ರರ ಜವಾಬ್ದಾರಿ. ಈಗ ತಮ್ಮೆದುರಿಗೆ ಪೀಠಿಕೆ ಇಡುತ್ತಿದ್ದಾರೆ ಅಂದರೆ ಖಂಡಿತಕ್ಕೂ ಇದರಲ್ಲೇನೋ ಗಮ್ಮತ್ತಿದೆ. ನಿಂತಲ್ಲೇ ನೆಟ್ಟ ನೋಟದಿಂದಲೇ ದ್ರೋಣರನ್ನು ದಿಟ್ಟಿಸಿದ ದುರ್ಯೋಧನ ನುಡಿದ.
" ಗುರುಗಳೆ ನಮ್ಮನ್ನೆಲ್ಲ ಕಡೆದು ಶಿಲೆಯಿಂದ ಮೂರ್ತಿಯನ್ನಾಗಿಸಿದವರು ನೀವು. ನಿಮಗೆ ಈ ದೇಹ, ಇದಕ್ಕೆ ನೀಡಿದ ವಿದ್ಯೆ ಸೇರಿದಂತೆ ಸಂಸ್ಕಾರಗಳ ಮೇಲೂ ಸಂಪೂರ್ಣ ಹಕ್ಕಿದೆ. ನಿಮ್ಮ ಬೇಡಿಕೆ ಏನೇ ಇದ್ದರೂ ಸರಿ. ನಮ್ಮೆಲ್ಲ ಸಹೋದರರ ಪರವಾಗಿ ನಾನು ಮಾತು ಕೊಡುತ್ತಿದ್ದೇನೆ. ನೀವು ನಿಸ್ಸಂಕೋಚವಾಗಿ ಏನು ಬೇಕಿದ್ದರೂ ಕೇಳಿ. ಬೆರಳಿನಿಂದ ಹಿಡಿದು ತಲೆಯವರೆಗೂ ನಿಮ್ಮೆದುರಿಗೆ ಇರಿಸುತ್ತೇವೆ..." ಬೇಕೆಂದೆ ಒತ್ತಿ ನುಡಿದ ದುರ್ಯೋಧನ. ಅವನ ಮಾತಿನಲ್ಲಿದ್ದ ಮೊನಚನ್ನು ಗಮನಿಸಿಯೂ ಸುಮ್ಮನಾದರು ದ್ರೋಣ. ಅವರಿಗೀಗ ಕೆದಕುವುದು ಬೇಕಿರಲಿಲ್ಲ. ಅಷ್ಟಕ್ಕೂ ದುರ್ಯೋಧನ ಮೊದಲಿನಿಂದಲೂ ಮಹಾಸ್ವಾಭಿಮಾನಿ. ಹಿಂದಿನಿಂದ ಆಡಿ ಹಂಗಿಸಿದವನಲ್ಲ. ನೇರಾನೇರ ಸ್ನೇಹದಿಂದ ಕದನದವರೆಗೂ. ಅವರು ಒಮ್ಮೆ ಎಲ್ಲರತ್ತ ತಿರುಗಿ ನೋಡಿ ನುಡಿದರು.
" ನೀವೆಲ್ಲರೂ ಈ ಜಗತ್ತಿನಲ್ಲಿಯೇ ಅದ್ಭುತ ಯುದ್ಧ ಯೋಧರಾಗಿ ರೂಪಗೊಂಡಿದ್ದೀರಿ. ನಿಮ್ಮ ಬಾಣ ತೂಣಿರಗಳ ಎದುರಿಗೆ, ಗದೆ ಗುರಾಣಿ ಈಟಿಗಳ ಹೊಡೆತಕ್ಕೆ ಭೂಲೋಕವೇ ಬೆಚ್ಚಿ ಬೀಳಬಲ್ಲದು. ಇವುಗಳನ್ನೆಲ್ಲಾ ಒರೆಗೆ ಹಚ್ಚುವ ಕಾಲ ಇದೀಗ. ನೀವೆಲ್ಲಾ ಗುರುದಕ್ಷಿಣೆಯಾಗಿ ಕಾಂಪಿಲ್ಯದ ದೊರೆ ದ್ರುಪದನನ್ನು ಯುದ್ಧದಲ್ಲಿ ಕೆಡವಿ ಹೊತ್ತುಕೊಂಡು ಬಂದು ನನ್ನ ಮನೆಯ ಮ೦ಚದ ಕಾಲಿಗೆ ಕೆಡುವಬೇಕು ಹೇಳಿ ಸಾಧ್ಯವೇ....?" ದ್ರೋಣರ ವಿಲಕ್ಷಣ ಬೇಡಿಕೆಗೆ ಒಂದರೆಕ್ಷಣ ಧರ್ಮರಾಯನೂ ಯೋಚಿಸಿದ. ಅರ್ಜುನ ಬಿಲ್ಲಿನ ಮೇಲಿನ ಹಿಡಿತ ಬಿಗಿಸಿ ಏನು ಹೇಳಲಿ ಎಂದು ತಲೆ ಅತ್ತಿತ್ತ ಕುಣಿಸಿದ. ಆದರೆ ಮಾತು ಕೊಟ್ಟಾಗಿದೆ ಇನ್ನೇನು ಯೋಚಿಸುವುದಿದೆ. ರಾಜಧರ್ಮವನ್ನು ಮರೆಯುವುದು ಹೇಗೆ ಸಾಧ್ಯ...? ಎದೆಸೆಟೆಸಿ ಹೆಗಲಿಗೆ ಗದೆಯೇರಿಸಿ ನುಡಿದ ದುರ್ಯೋಧನ.
" ಗುರುಗಳೆ. ನಿಮ್ಮ ಮಾತು ನಮಗೆ ಆಜ್ಞೆ ಅದನ್ನು ಕೋರಿಕೆಯಾಗಿಸಬೇಕಿಲ್ಲ. ದ್ರುಪದ ನಿಮ್ಮ ಮ೦ಚಕ್ಕೆ ಬಂದು ಬಿದ್ದ ಎಂದು ತಿಳಿದುಕೊಳ್ಳಿ ಇದು ಶತ:ಸಿದ್ಧ.. ಆದರೆ.." ಎಂದು ನಿಲ್ಲಿಸಿದ.
" ಏನದು..?" ದ್ರೋಣ ಕಣ್ಣನ್ನು ಕಿರಿದುಗೊಳಿಸಿದರು. ಕಾರಣ ದುರ್ಯೋಧನನದ್ದು ಛಲದಲ್ಲೂ, ಕೊಟ್ಟ ಮಾತಿಗೂ ಎದಿರಿಲ್ಲ. ಮಾತು ಆಡಿದೊಡನೆ ಅದಕ್ಕೆ ಬದ್ಧ. ಅದರಲ್ಲೂ ಅವನ ಗದೆಯ ಕೌಶಲ್ಯದ ಎದುರಿಗೆ ಭೀಮನನ್ನು ಹೊರತು ಪಡಿಸಿದರೆ ನಿಲ್ಲಬಲ್ಲವರು ಯಾರೂ ಇಲ್ಲ. ದ್ರುಪದ ಕಾಲಡಿಗೆ ಬರುವುದರಲ್ಲಿ ಸಂಶಯವಿಲ್ಲ. ಒಳಗೊಳಗೆ ಹೆಮ್ಮೆಯಾಯಿತು ಅವರಿಗೆ. ಆದರೆ ಇವನ ಸಂಶಯವೇನೋ..? ದ್ರೋಣ ನಿಂತಲ್ಲೇ ಕೊಸರಿದರು.
" ಗುರುಗಳೆ. ದ್ರುಪದ ನಮಗೆಲ್ಲ ಒಬ್ಬ ರಾಜನಾಗಿ ಪರಿಚಯವೇ ಹೊರತಾಗಿ ಯಾವುದೇ ರೀತಿಯಲ್ಲೂ ಸಮಾನ ಶತ್ರುವೂ, ಸಮಾನ ಮಿತ್ರನೂ ಅಲ್ಲವೇ ಅಲ್ಲ. ಯಾವುದೇ ಕಾರಣಗಳಿಲ್ಲದೇ ಅನ್ಯಾಯವಾಗಿ ನಾವು ಅವನನ್ನು ಯುದ್ಧರಂಗಕ್ಕೆ ಕರೆತರುವಂತಿಲ್ಲ. ಅದು ರಾಜಧರ್ಮವೂ ಅಲ್ಲ. ಹಳೆಯ ದ್ವೇಷ, ಅಸೂಯೆ ಅಥ್ವಾ ಭೂ ವಿವಾದ ಸೇರಿದಂತೆ ಯಾವುದರಲ್ಲೂ ಪಾಂಚಾಲ ರಾಜ ನಮ್ಮೊಂದಿಗೆ ಮುಖ, ಕೈ, ಬಾಯಿ ಕೆಡಿಸಿಕೊಂಡಿದ್ದಿಲ್ಲ. ಅನಾವಶ್ಯಕವಾಗಿ ದ್ರುಪದ ಹಸ್ತಿನಾವತಿಯೊಂದಿಗೆ ಜಿದ್ದಿಗೆ ಬಿದ್ದ ಅಧರ್ಮೀಯನೂ ಅಲ್ಲ. ಹೋಗಲಿ ಹೆಣ್ಣುಗಳಿವೆ ಅವನ್ನಾದರೂ ಹೊತ್ತು ತರೋಣ ಎಂದರೆ, ಆಗೇನಾದರು ಅವನು ತಿರುಗಿ ಬಿದ್ದರೆ ಅವನನ್ನೂ ಮೂಟೆ ಕಟ್ಟಿ ಹೊತ್ತು ತಂದು ಕ್ಷತ್ರೀಯ ಧರ್ಮ ಮೆರೆಯೋಣ ಎಂದರೆ ದ್ರುಪದನಿಗೆ ಹೆಣ್ಣು ಮಕ್ಕಳೂ ಇಲ್ಲ. ನಿಮಗೆ ಮದುವೆ ಯೋಗ್ಯ ಗಂಡು ಮಕ್ಕಳೂ ಇಲ್ಲ. ಹೀಗಿದ್ದಾಗ ನಾನು ನನ್ನ ಸಹೋದರರೊಡನೆ ನಿಮ್ಮ ದಕ್ಷಿಣೆಯಾಗಿ ದ್ರುಪದನನ್ನು ಹೆಡೆಮುರಿಗೆ ಕಟ್ಟಿ ಹೊತ್ತುಕೊಂಡು ಬರುವಾಗ, ರಾಜ ಧರ್ಮದಂತೆ ದ್ರುಪದನನ್ನು ಹೊತ್ತೊಯ್ಯುತ್ತಿರುವುದಾದರೂ ಏಕೆ ಎಂದು ಅವನಿಗೆ ಹೇಳಬೇಕಲ್ಲವಾ..?
ರಾಜ್ಯದ ಮೇಲೆ ದಾಳಿ ಮಾಡಿದಾಗ ಶತ್ರುನಾಶವೇ ವಿನಃ ನಾಗರಿಕ ನಾಶ ರಾಜಧರ್ಮವಲ್ಲ. ಹೀಗಿದ್ದಾಗ ಅಲ್ಲಿಯ ಪ್ರಜೆಗೂ ರಾಜನ ಕಾರ್ಯಗಳ ಹಿಂದಿನ ರಾಜಕಾರಣವನ್ನು ಅರಿತುಕೊಳ್ಳುವ ಹಕ್ಕಿದ್ದೇ ಇದೆ. ಜನ ಸಾಮಾನ್ಯನೊಬ್ಬ ನನ್ನನ್ನೋ, ನನ್ನ ತಮ್ಮ೦ದಿರನ್ನೋ, ಹಸ್ತಿನಾವತಿಯ ರಾಜಕುಮಾರರೇ ಏಕೆ ನಮ್ಮ ಮೇಲೆ ದಾಳಿ ಮಾಡಿದಿರಿ ಎಂದು ಕೇಳಿದರೆ ಏನೆಂದು ಉತ್ತರಿಸುವುದು..? ಸ್ವತ: ದ್ರುಪದನಿಗಲ್ಲದಿದ್ದರೂ ರಾಜವಾಡೆಯ ಹೆಣ್ಣು ಮಗಳ್ಯಾರಾದರೂ ಎದುರಿಗೆ ನಿಂತ ನನ್ನ ಪ್ರಶ್ನಿಸಿದರೆ, ಉತ್ತರಿಸದೆ ಧಿಮಾಕಿನಿಂದ ದ್ರುಪದನನ್ನು ಹೊತ್ತು ತಂದೆವಾದರೆ ಅದಕ್ಕಿಂತ ಹೇಯ ರಾಜಧರ್ಮ ಇನ್ನೊಂದಾಗಲಿಕ್ಕಿಲ್ಲ. ಕುರುಕುಲಕ್ಕೆ ಅದು ಶೊಭೇಯೂ ಅಲ್ಲ. ಹೀಗಾಗಿ ತಾವು ದಯವಿಟ್ಟು ದ್ರುಪದನ ಮೇಲೆ ಸವಾರಿ ಮಾಡುವ ನಮ್ಮ ಯುದ್ಧದ ಹಿಂದಿನ ಉದ್ದೇಶವನ್ನು ತಿಳಿಸಿದರೆ ಅಷ್ಟರಮಟ್ಟಿಗೆ ನಾವು ರಾಜಧರ್ಮದೊಂದಿಗೆ ನಮ್ಮ ವಿಜಯಯಾತ್ರೆ ಆರಂಭಿಸುತ್ತೇವೆ. ದ್ರುಪದನನ್ನು ಕರೆತರುವುದರಲ್ಲಿ ತಾವು ಸಂಶಯ ಇಟ್ಟುಕೊಳ್ಳಬಾರದು..." ಒಂದರೆಕ್ಷಣ ಎಲ್ಲರೂ ನಿಶಬ್ದರಾಗಿ ನಿಂತುಬಿಟ್ಟರು. ಯಾರೊಬ್ಬರೂ ತೆಗೆದು ಹಾಕುವ ಮಾತಲ್ಲ ಅದು.
ಅದು ನಿಜಕ್ಕೂ ಭವಿಷ್ಯದ ಮಹಾರಾಜನೊಬ್ಬ ಆಡಿದ ಮಾತುಗಳು ಎನ್ನುವುದರಲ್ಲಿ ಎರಡು ಮಾತಿರಲಿಲ್ಲ. ಗುರು ದ್ರೋಣರೂ ಅವನ ಮಾತಿಗೆ ಒಂದು ಕ್ಷಣ ತಲೆದೂಗಿದರು. ಸ್ವಯಂ ಧರ್ಮರಾಯನಂತೂ ಪಕ್ಕಕ್ಕೆ ಬಂದು ದುರ್ಯೋಧನನ ತೋಳು ಸವರಿ "..ನಿನ್ನ ಮಾತು ಸರಿ, ನಿನ್ನ ನಡೆಯೂ ಸರಿ.."ಎಂದು ಬೆಂಬಲಕ್ಕೆ ನಿಂತ. ದ್ರೋಣರಿಗೂ ಸುಲಭಕ್ಕೆ ನೆವ ಹೇಳುವ ಹಾಗಿರಲಿಲ್ಲ. ಸಾವರಿಸಿಕೊಂಡು ದುರ್ಯೋಧನನಿಗೆ ತೃಪ್ತಿಯಾಗುವಂತೆ ಧರ್ಮಕ್ಕೆ ಚ್ಯುತಿ ಬಾರದಂತೆ ಚಾಣಾಕ್ಷತೆಯಿಂದ ಉತ್ತರಿಸಬೇಕು, ಎಲ್ಲಾ ಎದುರಿಗೆ ನಿಂತು ತಮ್ಮನ್ನೇ ನೋಡುತ್ತಿದ್ದಾರೆ. ಗ್ರಹಿಸಿ ಮಾತಾಡಬೇಕು. ಅಷ್ಟರಲ್ಲಿ ಹಿಂದಿನಿಂದ ಬಾಣದಂತೆ ನುಗ್ಗಿಬಂದ ಚಾಲಾಕಿ ಅರ್ಜುನ. ಬಿಲ್ಲನ್ನು ಎದುರಿಗೆ ಇರಿಸಿ ಮಂಡಿಯೂರಿ, ಕೈ ಮುಂದೆ ಮಾಡಿ ಪ್ರತಿಜ್ಞೆ ಮಾಡುವವನಂತೆ ಭೀಕರವಾಗಿ ನುಡಿದ.
" ಗುರುಗಳೆ ನೀವು ಕೇಳಿದಿರಿ ಆಯಿತು. ಗುರುವಿನ ಶಬ್ದಕ್ಕೆ ಎದುರು ನನ್ನಿಂದಾಗದು. ಪಥ್ಯವೋ ಅಪಥ್ಯವೋ ನಿಮ್ಮ ಮಾತು ನನಗೆ ಅಪ್ಪಣೆ. ಅಲ್ಲಿ ಧರ್ಮಾಧರ್ಮದ ಚರ್ಚೆ ಇಲ್ಲ. ಅಣ್ಣ ದುರ್ಯೋಧನ ನಿಮಗೆ ಮಾತು ಕೊಟ್ಟಾಗಿದೆ. ಅದಕ್ಕೆ ಉತ್ತರದ ಅವಶ್ಯಕತೆ ಇಲ್ಲ. ಈಗಲೇ ನಾವು ದ್ರುಪದನ ಮೇಲೆ ದಾಳಿಗಿಳಿಯುತ್ತೇವೆ. ನಿಮ್ಮ ಮುಂದಿನ ನಿದ್ರಾವಧಿಯೊಳಗೆ ನಿಮ್ಮ ಮ೦ಚದ ಕಾಲಿಗೆ ದ್ರುಪದನ ದೇಹ. ಗುರುವಿನ ಮಾತು ಮತ್ತು ಆಜ್ಞೆ ಎರಡಕ್ಕೂ ವ್ಯತ್ಯಾಸವಿಲ್ಲ.." ಎದೆಸೆಟೆಸಿ ನಿಂತುಬಿಟ್ಟ. ಒಂದರೆಕ್ಷಣದಲ್ಲಿ ಚೇತರಿಸಿಕೊಂಡು ಬಿಟ್ಟರು ದ್ರೋಣ. ಅವರಿಗೂ ಸನ್ನಿವೇಶದಿಂದ ಪಾರಾದ ತೃಪ್ತಿ. ಹಾಗಾಗಿ ತತಕ್ಷಣಕ್ಕೆ ಎಲ್ಲರಿಗೂ ಆಶೀರ್ವದಿಸುವಂತೆ ಕೈ ಯೆತ್ತಿ " ವಿಜಯೀ ಭವ " ಎಂದು ಅವನನ್ನೆಬ್ಬಿಸಿದರು. ತಮ್ಮ ಬತ್ತಳಿಕೆಯಿಂದ ಬಾಣಗಳ ಗಂಟೊಂದನ್ನು ಕೊಡುತ್ತಾ,
" ಅರ್ಜುನಾ. ಇದರಲ್ಲಿ ವಿಶೇಷ ದಿವ್ಯಾಸ್ತ್ರಗಳೆಲ್ಲಾ ಸೇರಿವೆ. ಇವನ್ನು ನನ್ನ ಬಿಟ್ಟು ಇನ್ಯಾರು ಈ ಜಗತ್ತಿನಲ್ಲಿ ಎದುರಿಸಲು ಬಲ್ಲವರಿಲ್ಲ. ಈಗ ನಿನಗೆ ಇವನ್ನೆಲ್ಲಾ ಧಾರೆಯೆರೆಯುತ್ತಿದ್ದೇನೆ. ಇಂದಿನಿಂದ ನಿನಗೆ ಈ ಜಗತ್ತಿನಲ್ಲಿ ಎದುರಾಳಿಯಾಗಿ ಯಾವ ಬಿಲ್ಲುಗಾರನೂ ನಿಲ್ಲಲಿಕ್ಕೆ ಸಾಧ್ಯವಿಲ್ಲ. ಸ್ವಯಂ ಶಂಕರನೂ ಕೂಡಾ ನಿನ್ನ ಬಾಣಗಳಿಗೆ ಬೆಚ್ಚಬಲ್ಲ. ಜಯಶಾಲಿಯಾಗಿ ಬಾ..." ಎ೦ದು ನುಡಿದು ಎದ್ದು ನಡೆದುಬಿಟ್ಟರು. ಗುಂಪು ನಿಧಾನಕ್ಕೆ ಕರಗಿತು. ಅರ್ಜುನ ಯುದ್ಧೋನ್ಮಾದದಿಂದ ರಥವೇರಿ ನಡೆದ. ಅವನ ಹಿಂದೆ ಉಳಿದ ಸಹೋದರರು.
ಅಗಾಧ ಕ್ರೀಡಾಂಗಣದ ಮಧ್ಯೆ ಏಕಾಂಗಿಯಾಗಿ ನಿಂತೆ ಇದ್ದ ದುರ್ಯೋಧನ. ಅವನ ಮನ ಮೂಕವಾಗಿ ರೋಧಿಸುತ್ತಿತ್ತು. ಯಾವುದು ಹಾಗಿದ್ದರೆ ರಾಜಧರ್ಮ...? ತಾನೇನು ದ್ರುಪದನನ್ನು ಹೊತ್ತು ತರುವುದಿಲ್ಲವೆಂದು ಹೇಳಿಲ್ಲ. ಆ ಲೆಕ್ಕಕ್ಕೆ ತನ್ನ ಏಟಿಗೆ ದ್ರುಪದನ ಸೈನ್ಯ ಒಂದು ಲೆಕ್ಕವೇ ಅಲ್ಲ. ಆದರೆ ಅಮಾಯಕರ ರಕ್ಷಣೆ ಮತ್ತು ನ್ಯಾಯಯುತ ವಿಚಾರವನ್ನಷ್ಟೆ ಪ್ರಸ್ತಾಪಿಸಿದ್ದೆ. ಅದು ರಾಜಧರ್ಮ ಕೂಡಾ. ಆದರೆ ಅವನು ಧರ್ಮಾಧರ್ಮದ ಯೋಚನೆಯಲ್ಲಿ ಯುದ್ಧರಂಗದಲ್ಲಿ ಗುರುವಿನ ಕೋರಿಕೆ ತೀರಿಸುವ ಸಲುವಾಗಿ ಕಾದಲು ಸನ್ನಧ್ಧನಾಗಿ ಹೋದರೂ ಕೊನೆಯಲ್ಲಿ ಆಗಿದ್ದೆ ಬೇರೆ. ದುರ್ಯೋಧನ ಮತ್ತೊಮ್ಮೆ ಗೆದ್ದರೂ, ತಾತ್ವಿಕವಾಗಿಯೂ ತಾಂತ್ರಿಕವಾಗಿಯೂ ಅದೃಷ್ಟದ ಎದುರಿಗೆ ಸೋತುಹೋಗಿದ್ದ.


Tuesday, March 6, 2018


ಅವನು ಯಾರು ಎಂಬ ಪ್ರಶ್ನೆಗೆ ಉತ್ತರ ಅಥವಾ ಇತರರಲ್ಲಿ ಅರಿವು ಮೂಡುವ ಮೊದಲೇ ಆತ ಶರ ಸಂಧಾನ ಆರಂಭಿಸಿಬಿಟ್ಟಿದ್ದ. ನಿಂತಲ್ಲಿಂದಲೇ ಏಕಕಾಲಕ್ಕೆ ಪಿತಾಮಹ ಭೀಷ್ಮ ಸೇರಿದಂತೆ ದ್ರೋಣ ಮತ್ತು ಕೃಪಾಚಾರ್ಯರ ಪಾದಾರವಿಂದಗಳಿಗೆ ಬಾಣ ಪ್ರಯೋಗದಿಂದ ಪ್ರಣಾಮವನ್ನು ಸಲ್ಲಿಸಿ, ಅವರು ಎಚ್ಚೆತ್ತುಕೊಳ್ಳುವುದರಲ್ಲಿ ನಭೋಮ೦ಡಲದಲ್ಲಿ ಶರಾಘಾತದಿಂದ ಬೆಳಕನ್ನು ಸೃಷ್ಟಿಸಿದ, ಅತ್ತ ತಿರುಗುವುದರೊಳಗಾಗಿ ಇತ್ತ ಮೇಘಗಳ ಮಾಲೆಯಲ್ಲಿ ತುಂತುರು ಸೃಷ್ಠಿಸಿ ಜನರನ್ನು ಹುಚ್ಚೆಬ್ಬಿಸಿದ್ದ. ದಶದಿಕ್ಕುಗಳಿಗೂ ಏಕಕಾಲಕ್ಕೆ ಶರಗಳನ್ನು ತೂರುತ್ತಾ, ಯಾರಿಗೂ ಎತ್ತ ಏನು ನೋಡಬೇಕು ಎಂಬುದನ್ನು ತಿಳಿಯಲೂ ಅವಕಾಶ ಕೊಡದಂತೆ ಅರ್ಜುನನಿಗಿಂತಲೂ ಒಂದು ಕೈ ಹೆಚ್ಚೆ ಎನ್ನುವಂತೆ ಅಮೋಘ ಪ್ರದರ್ಶನ ನೀಡಿದ. ಅವನ ವೇಗ ಮತ್ತು ಶರಗಳ ವೇಗಕ್ಕೆ ಜನಸ್ತೋಮ ಇನ್ನಿಲ್ಲದ ಮಮತೆಯಿಂದ ಅವನನ್ನು ಹುರಿದುಂಬಿಸುತ್ತಾ ಜೈಕಾರ ಹಾಕಿ ಬೊಬ್ಬಿರಿಯಿತು. ಶರಗಳ ಮೇಲಾಟದಲ್ಲಿ ಇತರರು ಮೈಮರೆತಿರುವಾಗಲೇ ಆಗಸದಲ್ಲಿ ಮಿಂಚು ಸಹಿತ ಬೆಳಕನ್ನು ಸೃಷ್ಠಿಸುತ್ತಾ, ಅದಕ್ಕಾಗಿ ಒಂದಕ್ಕೊಂದು ಬಾಣಗಳ ಆಘತವನ್ನು ನಿರಂತರವಾಗಿ ಕಾಯ್ದುಕೊಳ್ಳುತ್ತಾ, ಕೊನೆಯಲ್ಲಿ ದೊಡ್ಡ ದನಿಯಲ್ಲಿ ನುಡಿದ ಆ ದನುರ್ಧಾರಿ.
" ಸೇರಿರುವ ಮಹಾಜನಗಳೇ, ಇಲ್ಲಿಯವರೆಗೂ ನನ್ನ ಪ್ರದರ್ಶನವನ್ನು ನೋಡಿದ್ದೀರಿ. ನೀವು ಒಪ್ಪುವುದಾದರೆ ಈಗಾಗಲೇ ಕೈ ಚಳಕ ತೋರಿಸಿದಂತೆ ಈ ಅರ್ಜುನನ ಮೇಲೆ ದ್ವಂದ್ವ ಯುದ್ಧವನ್ನು ಮಾಡಬಲ್ಲೆ. ಅವನನ್ನು ಇಲ್ಲಿಯೇ ಈಗಲೇ ನಾನು ದ್ವಂದ್ವ ಯುದ್ಧಕ್ಕೆ ಆಹ್ವಾನಿಸುತ್ತಿದ್ದೇನೆ. ಮಹಾರಾಜ ನಿಮ್ಮ ಅಪ್ಪಣೆಯಿದ್ದಲ್ಲಿ ಅವನನ್ನು ನನ್ನೆದುರಿಗೆ ಯುದ್ಧಕ್ಕೆ ಇಳಿಸಿ... " ಎಂದು ನಭೋಮಂಡಲವೆಲ್ಲ ಕೇಳಿಸುವಂತೆ ಧನುಸ್ಸಿನ ಠೇಂಕಾರ ಮಾಡಿದ. ಒಂದು ಕ್ಷಣ ನೆರೆದಿದ್ದ ರಾಜ ಪರಿವಾರವೆಲ್ಲಾ ಅವಾಕ್ಕಾಯಿತು.
ಕಾರಣ ಕ್ಷತ್ರಿಯನಾದವನಿಗೆ ದ್ವಂದ್ವ ಯುದ್ಧವಾಗಲಿ ಇನ್ನಾವುದೇ ರೀತಿಯ ಸವಾಲುಗಳನ್ನು ಎಸೆದಲ್ಲಿ ಅದನ್ನು ಮನ್ನಿಸದೇ, ಸೆಣೆಸದೆ ಬಿಡುವಂತಿಲ್ಲ. ಅದರಲ್ಲೂ ಹಸ್ತಿನಾವತಿಯ ರಾಜ ಪರಿವಾರಕ್ಕೆ ಸವಾಲು..? ಎಲ್ಲೆಲ್ಲೂ ಒಂದು ಕ್ಷಣ ಆತ೦ಕ ಕವಿದಿತ್ತು. ಕೂಡಲೇ ಅದಕ್ಕುತ್ತರಿಸುವ ಅಥವಾ ಪ್ರತಿಕ್ರಿಯಿಸುವ ಮನಸ್ಥಿತಿ ಅಲ್ಲಿ ಯಾರಿಗೂ ಕಂಡು ಬರಲಿಲ್ಲ. ಜನಸ್ತೋಮ ಮಾತ್ರ ಎಲ್ಲೆಲ್ಲೂ ಬಾನು ಭುವಿ ಸೇರುವಂತೆ ಕಿರುಚುತ್ತಾ ಇಬ್ಬರಿಗೂ ಜೈಕಾರ ಹಾಕುತ್ತಿದ್ದರೆ ಅರ್ಜುನ ಕೂಡಾ ಒಮ್ಮೆ ಕೊಂಚ ಆಂದೋಳನೆಗೊಳಗಾಗಿ ಆಚಾರ್ಯರ ಮುಖವನ್ನು ದಿಟ್ಟಿಸಿದ. ಜಗತ್ತಿನಲ್ಲೇ ಅಪ್ರತಿಮ ಬಿಲ್ಲುಗಾರನನ್ನಾಗಿಸುತ್ತೇನೆ ಎಂದು ಮಾತು ಕೊಟ್ಟಿದ್ದಾರೆ ಆಚಾರ್ಯರು. ಈಗ ನೋಡಿದರೆ ಇವನೊಬ್ಬನೆಲ್ಲಿಂದ ಹುಟ್ಟಿಕೊಂಡ. ಈಗಲೇ ಇವನ ಕಥೆ ಮುಗಿಸಬೇಕು. ಹೀಗೆ ಬೆಳೆಯಲು ಬಿಟ್ಟರೆ ಮುಂದೊಮ್ಮೆ ನನಗೇ ಎದುರಾಳಿಯಾದರೂ ತಪ್ಪೇನಿಲ್ಲ. ಕೂಡಲೇ ಅರ್ಜುನ ಅಂಗಳಕ್ಕೆ ಧುಮುಕಿ ದ್ವಂದ್ವ ಯುದ್ಧದ ಮುನ್ನಿನ ಸೆಣಸಿಗೆ ಮೊದಲಿಟ್ಟ. ಇಬ್ಬರೂ ಅದ್ಭುತ ಬಿಲ್ಲಾಳುಗಳು. ಬಾನು ಭುವಿ ಎಲ್ಲ ಬಾಣಗಳಿಂದ ಮುಚ್ಚಿ ಹೋದವು. ಆ ಯುವಕನ ಕೈ ಚಳಕಕ್ಕೆ ದ್ರೋಣರ ಶಿಷ್ಯ ಸಾಟಿಯಾದೇ ಹೋಗುತ್ತಿದ್ದಂತೆ, ಅಸ್ತ್ರ-ಪ್ರತ್ಯಾಸ್ತ್ರಗಳ ಮೇಲಾಟಕ್ಕೆ ಅರ್ಜುನ ಮುಂದಾಗಲು ಬಗ್ಪಿಳಿಕೆಗೆ ಕೈ ಹಾಕಿದ. ಕೂಡಲೇ ಕೃಪಾಚಾರ್ಯರು ಮಧ್ಯೆ ಪ್ರವೇಶಿಸಿ ಅವರಿಬ್ಬರ ಪ್ರದರ್ಶನ ನಿಲ್ಲಿಸಿ ಪ್ರಶ್ನಿಸಿದರು.
" ಯುವಕ ನೀನು ಅಸಾಧಾರಣ ಪ್ರತಿಭಾವಂತನೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಸಮಾನರೊಡನೆ ಮಾತ್ರವೇ ದ್ವಂದ್ವಯುದ್ಧ ಎನ್ನುವುದು ನೀತಿ. ಹಾಗಾಗಿ ನೀನು ಯಾರು..? ನಿನ್ನ ಕುಲ ಯಾವುದು..? ನೀನು ಯಾವ ದೇಶದ ರಾಜಕುಮಾರ..? ಎಲ್ಲಿಂದ ಬರುತ್ತಿರುವೆ ನಿನ್ನ ಗುರುಗಳು ಯಾರು..? ಇವುಗಳನ್ನು ಸಭಿಕರಿಗೆ ಮತ್ತು ಮಹಾರಾಜರಿಗೆ ಅರಿಕೆ ಮಾಡಿಕೊಂಡರೆ ದ್ವಂದ್ವ ಯುದ್ಧದ ನೀತಿಯಂತೆ ಮುಂದುವರೆಯಬಹುದಾಗಿದೆ..." ಎಂದರು. ಅಲ್ಲಿಯವರೆಗೂ ತಲೆಯೆತ್ತಿ ಆ ಕ್ಷಣಕ್ಕೆ ಅರ್ಜುನನನ್ನು ಸೋಲಿಸಿಯೇ ಸಿದ್ಧ ಎಂದು ತಯಾರಾಗಿ ನಿಂತಿದ್ದ ಯುವಕ ಈಗ ಮಾತು ಬಾರದೇ ನಿಂತುಬಿಟ್ಟ. ಆದರೂ ಸಾವರಿಸಿಕೊಂಡು ನುಡಿದ.
" ಆಚಾರ್ಯರೇ, ಸೇರಿರುವ ಹಿರಿಯರೇ ಯುದ್ಧ ಯಾವಾಗಲೂ ವೀರರ ನಡುವೆ ನಡೆಯುತ್ತದೆಯೇ ಹೊರತಾಗಿ ಅಸಮಾನರಲ್ಲಿ ಅಲ್ಲವಲ್ಲ. ಅದಕ್ಕೆ ಜಾತಿ ನೀತಿಗಳ ಪ್ರಶ್ನೆ ಯಾಕೆ..? ಅಷ್ಟಕ್ಕೂ ನಿಮಗೆ ಅರ್ಜುನನ ಬಾಹುಬಲದ ಮೇಲೆ ವಿಶ್ವಾಸ ಇಲ್ಲದಿದ್ದರೆ ಬಿಟ್ಟು ಕೊಡಲು ಹೇಳಿ. ನಾನು ಹೊರಟು ಹೋಗುತ್ತೇನೆ. ಅದನ್ನು ಬಿಟ್ಟು ಕುಲ ಸ್ಥರದ ಮಾತೇಕೆ ಆಚಾರ್ಯರೇ, ವಿದ್ಯೆ ಅಥವಾ ಪ್ರತಿಭೆಗೇಕೆ ಕುಲದ ಹಂಗು ಅಥವಾ ಅಂತಸ್ತಿನ ಗೋಡೆ ಕಟ್ಟುತ್ತೀರಿ...? ಯುದ್ಧ ಎಂದ ಮೇಲೆ ಕೇವಲ ರಾಜಕುಮಾರರನ್ನು ಮಾತ್ರ ಎದುರಿಸುವುದೇ..?" ಇನ್ನು ಏನು ನುಡಿಯುತ್ತಿದ್ದನೊ ಕೂಡಲೇ ದ್ರೋಣರು ನುಡಿದರು,
"ನೋಡು ಕುಮಾರಾ, ನೀನಾರೆಂದು ಗೊತ್ತಿಲ್ಲ. ಆದರೂ ಸಮಾನರಲ್ಲದವರೊಡನೆ ರಾಜರಲ್ಲದವರೊಡನೆ, ಕ್ಷತ್ರೀಯರಲ್ಲದವರೊಡನೆ ಯುದ್ಧವಾಗಲಿ ಮೇಲಾಟವಾಗಲಿ ಮಾಡಬಾರದು. ದ್ವಂದ್ವಯುದ್ಧ ಆಹ್ವಾನವಂತೂ ಶಾಸ್ತ್ರ ರೀತ್ಯಾ ನಿಷಿದ್ಧವೇ. ಹಾಗಾಗಿ ನೀನು ನಿನ್ನ ಸಮಾನ ಸ್ಥರದ ಪರಿಚಯ ಹೇಳಿಕೊಂಡು ಅರ್ಜುನನನ್ನು ಆಹ್ವಾನಿಸು. ಅವನೂ ಮೇಲಾಟಕ್ಕೆ ಬರುತ್ತಾನೆ..." ಎನ್ನುವಷ್ಟರಲ್ಲಿ ಯಾರೊ ಸಭಿಕರು ಕೂಗಿದರು,
" ಅವನು ನಮ್ಮ ಅದಿರಥನ ಸಾಕುಮಗ ಕರ್ಣ.. "
" ಅದಿರಥ ಎಂದರೆ..?"
" ನಮ್ಮ ರಥದ ಸಾರಥಿ ಅಲ್ಲವೇ..? ಅ೦ದರೆ ಇವನು ಸೂತಪುತ್ರ...? "
" ಸೂತ ಪುತ್ರ.. ? " ಹುಬ್ಬೇರಿಸಿದರು ಹಲವರು. ಕೂಡಲೇ ಆಚಾರ್ಯ ಸೇರಿದಂತೆ ದ್ರೋಣಾಚಾರ್ಯರು ಗುಡುಗಿದರು.
" ಸೂತಪುತ್ರನಾದವನು ನೀನು ರಾಜಪರಿವಾರದೊಡನೆ, ಕ್ಷತ್ರಿಯರೊಡನೆ ಹೋರಾಡಬಹುದೇ..? ಇದೆಲ್ಲಿಯ ಅಧಿಕ ಪ್ರಸಂಗತನ. ಇದು ಕುರುವಂಶದ ರಾಜಕುಮಾರರ ಶಸ್ತ್ರಾಸ್ತ್ರ ಪರಿಚಯ ಕಾರ್ಯಕ್ರಮ ಸಮಾನರಲ್ಲದವರಿಗಿಲ್ಲಿ ಅವಕಾಶವಿಲ್ಲ.." ಎನ್ನುತ್ತಿದ್ದಂತೆ ಅತ್ತಲಿಂದ ಹಾಹಾಕಾರ ಕೇಳಿಬಂತು. ಎಲ್ಲಾ ರೀತಿಯ ಸಭಾ ಮರ್ಯಾದೆಗಳನ್ನು ಮೀರಿ, ಯಾರನ್ನೂ ಲೆಕ್ಕಿಸದೆ ಮದಗಜದಂತೆ ರಂಗದ ಮಧ್ಯಕ್ಕೆ ಭಾರಿ ಬೆಂಬಲದೊಂದಿಗೆ ನುಗ್ಗಿ ಬಂದವನೇ ಏನಾಗುತ್ತಿದೆ ಎಂದು ನೋಡುವಷ್ಟರಲ್ಲಿ, ಎರಡು ತೋಳು ಅಗಲಿಸಿ ತುಂಬು ಮನಸ್ಸಿನ ಅಹ್ವಾನ ನೀಡುವವನಂತೆ ಕರ್ಣನನ್ನು ಆಲಂಗಿಸಿಕೊಂಡು ಬಿಟ್ಟ ದುರ್ಯೋಧನ.
ಅವನ ಧನುಸ್ಸಿನ ಹುರಿಯನ್ನು ಕೈಯ್ಯಲ್ಲಿ ಸವರುತ್ತಾ, ಅದರ ಬಿರುಸನ್ನು ಅವನ ಯುಧ್ಧೋತ್ಸಾಹಿ ಒರಟುತನವನ್ನು ಆನಂದಿಸುವವನಂತೆ, ಆತ್ಮೀಯತೆಯಿಂದ ಅವನ ಬೆನ್ನ ಮೇಲೆ ಕೈಯ್ಯಾಡಿಸಿ, ಮೇಲಿನಿಂದ ಕೆಳಗಿನವರೆಗೆ ಅವನ ಭವ್ಯ ನಿಲುವನ್ನು ಕಣ್ಣಲ್ಲೇ ತುಂಬಿಕೊಳ್ಳುತ್ತಾ ಆದರದಿಂದ ಗಾಢವಾಗಿ ತಬ್ಬಿದ. ಕರ್ಣ ನಿಂತೇ ಇದ್ದ ದುರ್ಯೋಧನ ತೆಕ್ಕೆಯಲ್ಲಿ. ಜನ ನಿಬ್ಬೆರಗಾಗಿ ನೋಡುತ್ತಿದ್ದರೆ ದುರ್ಯೋಧನ ಕರ್ಣನನ್ನು ತುಂಬು ಮನಸ್ಸಿನಿಂದ ಆದರಿಸುತ್ತಾ ನುಡಿದ,
" ನಿನ್ನಂಥ ಯುವ ಯುದ್ಧಾಳುವಿನ ಸಾರಥ್ಯ ಮತ್ತು ಸಾಮರ್ಥ್ಯ ಎರಡೂ ಈ ಕುರುವಂಶದ ಸಿಂಹಾಸನಕ್ಕೆ ಬೇಕು ಕರ್ಣಾ. ನಿನಗ್ಯಾವ ಯೋಚನೆ ಬೇಡ. ನಾನು ನಿನಗೆ ರಾಜಾಶ್ರಯ ನೀಡುತ್ತೇನೆ. ನಿನ್ನ ಶಸ್ತ್ರಾಸ್ತ್ರ ಸಾಮರ್ಥ್ಯ ಮತ್ತು ಸಾಧನೆಯನ್ನು ಮುಂದುವರೆಸು. ನಿನಗೆ ನನ್ನ ಆಸ್ಥಾನದಲ್ಲಿ ಯಾವುದೇ ಮೇಲು ಕೀಳಿನ ಹಂಗಿಲ್ಲ ಕುವರ ಕರ್ಣ. ಇಂದಿನಿಂದ ನೀನು ದುರ್ಯೋಧನನ ಅಂತರಂಗದ ಆಪ್ತರಲ್ಲೊಬ್ಬ. ಇದಕ್ಕೆ ಕಾರಣ ಕೇವಲ ನೀನೊಬ್ಬ ಅದ್ಭುತ ಬಿಲ್ಲಾಳು ಮತ್ತು ಸಾಧಕ ಹೊರತು ಬೇರೇನಲ್ಲ. ಉಳಿದ ವಿಷಯಕ್ಕೆ ನೀನು ತಲೆ ಕೆಡಿಸಿಕೊಳ್ಳಬೇಕಾಗಿಲ್ಲ ಸರಿಯೇ.. ? " ಎನ್ನುತ್ತಿದ್ದರೆ ನಡುಮಟ್ಟ ಬಾಗಿ ಅವನಿಗೆ ವಂದಿಸಿದ ಕರ್ಣ ನುಡಿದ.
" ರಾಜಕುವರ ದುರ್ಯೋಧನ. ನಿನ್ನ ಸ್ನೇಹಕ್ಕೆ ನಾನು ಯಾವ ರೀತಿಯಲ್ಲೂ ಋಣಿಯಾಗಿರಲು ಸಾಧ್ಯವಾಗುತ್ತಿಲ್ಲ. ಇದೋ ನೆರೆದ ಸಭಿಕರೆದುರು ಇಂದು ನಾನು ಪ್ರಮಾಣ ಮಾಡುತ್ತೇನೆ. ನನ್ನ ಕೊನೆಯ ಉಸಿರು ಇರುವವರೆಗೂ ನಿನ್ನ ತಲೆ ಕಾಯುತ್ತೇನೆ. ಇಂದಿನಿಂದ ನಿನ್ನ ಸಿಂಹಾಸನ ಮತ್ತು ನಿನ್ನ ರಾಜ್ಯದ ಹಿತಕ್ಕಾಗಿಯೇ ಈ ಪ್ರಾಣ ಮೀಸಲು. ಇದಕ್ಕೆ ಆ ಸೂರ್ಯದೇವನ ಮೇಲಾಣೆ ಅವನೇ ಸಾಕ್ಷಿ. ನಿನ್ನ ತಲೆ ಉರುಳಿಸಲೇನಾದರೂ ಸಂಚಿದ್ದರೆ ಅದಕ್ಕೂ ಮೊದಲು ಯಾವತ್ತಿಗೂ ಈ ಘಟ ಉರುಳದೇ ಸಾಧ್ಯವಾಗುವುದಿಲ್ಲ. ಆ ಸೂರ್ಯ ಭೂಮಿಯ ಕಿರಣಗಳನ್ನು ಸ್ಪರ್ಶಿಸುವ ಯಾವ ಹೊತ್ತಿನಲ್ಲೂ ಈ ಘಟ ನೆಲಕ್ಕುರುಳುವುದಿಲ್ಲ ದುರ್ಯೋಧನಾ. ರಣಾಂಗಣದಲ್ಲಿ ಸೂರ್ಯೋದಯದಿಂದ ಸೂರ್ಯಾಸ್ತದವರೆಗೂ ಈ ಧನಸ್ಸನ್ನು ನಿನಗಾಗಿ ಮೀಸಲಿಡುತ್ತೇನೆ. ಆ ಸೂರ್ಯ ರಶ್ಮಿ ಭೂಮಿಯ ಮೇಲಿರುವವರೆಗೂ ಕರ್ಣನನ್ನು ಭೂಮಂಡಲದ ಮೇಲೆ ಗೆಲ್ಲಬಲ್ಲವರಿಲ್ಲ. ಇದಕ್ಕೆ ಆ ಸೂರ್ಯ ದೇವನ ಮೇಲಾಣೆ. ಇನ್ನೇನಿದ್ದರೂ ಈ ಯುದ್ಧ ಪರಿಣಿತಿ ಕುರು ರಾಜಕುಮಾರ ನಿನಗೇ ಮಾತ್ರ ಮೀಸಲು.." ಎಂದು ಹೆದೆಯೇರಿಸಿ ನಿಂತ. ಅಲ್ಲಿಗೆ ಪ್ರದರ್ಶನ ವಿಚಿತ್ರ ತಿರುವನ್ನು ತೆಗೆದುಕೊಳ್ಳುವುದರೊಂದಿಗೆ ಎಲ್ಲರೂ ಅಯೋಮಯವಾದ ಸನ್ನಿವೇಶದಲ್ಲಿ ನಿಂತುಕೊಂಡರು. ರಂಗದ ಮಧ್ಯದಲ್ಲಿ ಅವರಿಬ್ಬರೂ ಪರಿಸ್ಥಿತಿಯನ್ನು ಅದ್ಯಾವ ಮಟ್ಟಕ್ಕೆ ಹಿಡಿತಕ್ಕೆ ತೆಗೆದುಕೊಂಡು ಬಿಟ್ಟಿದ್ದರೆಂದರೆ ಬಹುಶ: ಅವರಿಬ್ಬರ ಬಲಾಬಲಕ್ಕೆ ಎದುರು ಎನ್ನುವುದೇ ಇರುವುದಿಲ್ಲ ಎಂದು ನಿಚ್ಚಳವಾಗಿ ಕಾಣಿಸುತ್ತಿತ್ತು.
ಆಗಲೇ ಅತ್ತಲಿಂದ ಭೀಮನು ಅಬ್ಬರಿಸಿದ್ದು ಕೇಳಿಸಿತು.
" ಅರ್ಜುನ. ಸೂತಪುತ್ರನೊಡನೆ, ರಾಜನಲ್ಲದವರೊಡನೆ ಏನು ದ್ವಂದ್ವ ಯುದ್ಧದ ಮಾತು ಎದ್ದು ಈ ಕಡೆಗೆ ಬಾ.." ಅದನ್ನೆ ಉಳಿದ ಹಿರಿಯರು ಅನುಮೋದಿಸುವ೦ತೆ ಕಲರವವೆಬ್ಬಿಸಿದರು. ರಂಗದ ಮಧ್ಯೆ ಆಗಷ್ಟೆ ಕೊಂಚ ಹೆಮ್ಮೆಯಿಂದ ಇನ್ನೇನು ದ್ವಂದ್ವ ಯುದ್ಧವಾಗೇ ಬಿಡುತ್ತದೆ ಎನ್ನುವಂತೆ ನಿಂತಿದ್ದ ಕರ್ಣ ಈ ಬೆಳವಣಿಗೆಯಿಂದ ಏನು ಮಾಡುವುದೋ ತೋಚದೆ ಅಸಹಾಯಕನಾಗಿ ದುರ್ಯೋಧನನ ಕಡೆಗೆ ನೋಡಿದ. ಅಷ್ಟರಲ್ಲಿ ದ್ರೋಣರು,
" ರಾಜಕುಮಾರ ದುರ್ಯೋಧನ ಇದೇನು ಹುಡುಗಾಟ. ಸಮಾನ ವಂಶ ಅಲ್ಲದವರೊಡನೆ ಯುದ್ಧ ಹಾಗಿರಲಿ ಮಿತ್ರತ್ವವಂತೂ ಮೊದಲೇ ಹೊಂದಲಾಗುವುದಿಲ್ಲ. ಅದರಲ್ಲಿ ಇದ್ದಕ್ಕಿದ್ದಂತೆ ಇದೇನು ಹೊಸ ರಾಗ ತೆಗೆಯುತ್ತಿದ್ದಿ. ಇದು ಕೇವಲ ಪ್ರದರ್ಶನ ವೇದಿಕೆ. ನೀನೇಕೆ ಆ ಸೂತಪುತ್ರನನ್ನು ಯಾವುದೇ ರಾಜ್ಯವಿಲ್ಲದವರನ್ನು ಬೆಂಬಲಿಸುತ್ತಿದ್ದಿ. ಅಸಲಿಗೆ ಸಮರ್ಥ ಕುಲ, ನೆಲೆ ಇಲ್ಲದವನೊಡನೇನು ಮಾತು. ಈ ಪ್ರದರ್ಶನ ಮುಗಿಯಿತು ಇಲ್ಲಿಗೆ ನಿಲ್ಲಲಿದೆ.. " ಎಂದು ಘೋಷಿಸಿ ಹೊರಡಲನುವಾದರು. ಕೂಡಲೇ ಗದೆಯನ್ನು ಎತ್ತಿ ಹೂ೦ಕರಿಸುತ್ತಾ ನೆಲಕ್ಕೆ ಒಮ್ಮೆ ಜೋರಾಗಿ ಅಪ್ಪಳಿಸಿದ ದುರ್ಯೋಧನ. ದಶದಿಕ್ಕುಗಳೂ ಅದುರಿದವು. ಅವನ ಗದೆಯ ಆರ್ಭಟಕ್ಕೆ ರಂಗವೇ ಕಂಪಿಸಿ ಜನವೆಲ್ಲಾ ಹೋ... ಎಂದು ಭಯದಿಂದ ಕಿರುಚಿದರು. ತೀವ್ರವಾಗಿ ದ್ವನಿಯೇರಿಸಿ ನುಡಿದ ದುರ್ಯೋಧನ.
" ಪಿತಾಮಹ ಸರ್ವಶಾಸ್ತ್ರ ಮತ್ತು ಮಂತ್ರಾಸ್ತ್ರಗಳನ್ನು ಬಲ್ಲ ಕೋವಿದರು ನೀವು. ಯುದ್ಧ ರಂಗಕ್ಕಿಳಿದಾಗ ಪ್ರತಿ ಯೋಧನ ಜಾತಿಯನ್ನೇನಾದರೂ ಕೇಳುತ್ತಾ ಕುಳಿತಿದ್ದಿದೆಯೆ..? ಅರಿಗಳ ತಲೆ ಸವರುವುದನ್ನು ಹೊರತು ಪಡಿಸಿ ನೀವು ರಂಗದಲ್ಲಿ ಯಾವತ್ತಾದರೂ ಅವರ ಕುಲ ನೆಲೆ ಹುಡುಕಿದ್ದಿದೆಯೇ...? ಮತ್ಯಾಕೆ ಈಗ ಆ ಪ್ರಶ್ನೆ. ವಿದ್ಯೆಗೆ ಅವರ ಪ್ರತಿಭೆಗೆ ಬೆಲೆ ಕೊಡದ ರಾಜ ರಾಜನಲ್ಲ. ಯಾವ ಯುದ್ಧ ಅಥವಾ ಮಿತ್ರತ್ವದಲ್ಲಿ ಜಾತಿ, ಕುಲ, ನೆಲೆಗಳ ಪ್ರಶ್ನೆ ಬಂದಿದ್ದಿದೆ...? ರಾಜರು ಬಾಹು ಬಲದಿಂದ ಶ್ರೇಷ್ಠತ್ವವನ್ನು ಪಡೆಯುತ್ತಾರೆಯೇ ವಿನಹ ಪಟ್ಟದಿಂದಲ್ಲ. ಧರ್ಮ ಕೂಡಾ ಬಾಹುಬಲವನ್ನೇ ಅನುಸರಿಸುತ್ತದೆ. ಇನ್ನು ಕುಲ ಮತ್ತು ನೆಲೆಯ ವಿಚಾರವನ್ನು ಹುಟ್ಟಿನ ರಹಸ್ಯಗಳನ್ನು ಮಾತನಾಡುವುದಾದರೆ ಈ ತುಂಬಿದ ಸಾರ್ವಜನಿಕ ಸಭೆಯಲ್ಲಿ ಆ ವಿಷಯವನ್ನೇ ಎತ್ತದಿರುವುದು ಒಳ್ಳೆಯದು.
ಪಿತಾಮಹ ಈಗ ಹೇಳಿ ಕರ್ಣ ಯಾವ ರೀತಿಯಲ್ಲಿ ಯುದ್ಧಕ್ಕೆ ಅಥವಾ ಸಖ್ಯಕ್ಕೆ ಅರ್ಹನಲ್ಲವೆಂದು..? ಸಮಾಜದಲ್ಲಿ, ಯುದ್ಧದಂತಹ ಸನ್ನಿವೇಶದಲ್ಲಿ ಅಥವಾ ಪ್ರಾಣದ ಹಂಗು ತೊರೆದು ರಾಜ ಸಿಂಹಾಸನ ಉಳಿಸುವಾಗ, ರಾಜ ಮನೆತನಗಳನ್ನು ಕಾಪಾಡುವಾಗ ಯಾವತ್ತೂ ಇತಿಹಾಸದಲ್ಲಿ ಹೀಗೆ ಜಾತಿಯ ಪ್ರಶ್ನೆ ಕೇಳಿ ಕಾರ್ಯವಾಸಿ ನಿರ್ಣಯಗಳನ್ನು ತೆಗೆದುಕೊಂಡಿಲ್ಲ. ಮೊದಲಿನಿಂದಲೂ ಕುರು ಸಿಂಹಾಸನಕ್ಕೆ ಅಗತ್ಯ ಬಿದ್ದಾಗಲೆಲ್ಲ ಪರಜಾತಿಯವರೇ ಆಪ್ತರಾಗಿ ಹಿತ ಕಾಯ್ದಿರುವ ಸತ್ಯ ಹೊರಒಳಗಿನ ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಎಷ್ಟು ಜನ ಇವತ್ತು ಅರಮನೆಯಲ್ಲಿ ಕೇವಲ ಕ್ಷತ್ರೀಯರಾಗೇ ಉಳಿದು ಬದುಕುತ್ತಿದ್ದಾರೆ...? ಮೂಲತ: ಈ ಸಿಂಹಾಸನದ ಉಳಿವಿಗಾಗಿ ವಂಶೋದ್ಧಾರಕ್ಕೂ ಬಾರದ ಜಾತಿಯ ಪ್ರಶ್ನೆ ಈಗ್ಯಾಕೆ ಬರುತ್ತಿದೆ...? " ಎನ್ನುವಷ್ಟರಲ್ಲಿ ಅತ್ತಲಿಂದ ಭೀಮನು,
" ದುರ್ಯೋಧನಾ ಒಬ್ಬ ರಥಿಕ ಸಿಕ್ಕ ಮಾತ್ರಕ್ಕೆ ಸರ್ವ ಸ್ಥರಗಳೂ ಲಭ್ಯವಾದುವೆಂದಲ್ಲ. ಅಸಲಿಗೆ ಸೂತಪುತ್ರನೊಬ್ಬ ಕೊಂಚ ಬಿಲ್ಗಾರಿಕೆ ಕಲಿತ ಮಾತ್ರಕ್ಕೆ ಅರ್ಜುನನಂತಹ ಹಸ್ತಿನಾವತಿಯ ವಂಶದವರೊಡನೆ ಏನು ದ್ವಂದ್ವ ಯುದ್ಧದ ಮಾತು..? ಸರಿಕರೊಡನೆ, ಮೇಲ್ಸ್ತರದವರೊಡನೆ ನಡೆಯಬೇಕಿರುವ ಕುಲೀನ ವಂಶಸ್ಥರ ಈ ಸ್ಥಳದಲ್ಲಿ ಅನಾವಶ್ಯಕ ರಗಳೆ ಎಬ್ಬಿಸಬೇಡ.." ಎಂದ. ಅದಕ್ಕೆ ಬೆಂಬಲಿಸುವಂತೆ ಕೃಪಾಚಾರ್ಯರು ಕರ್ಣನನ್ನುದ್ದೇಶಿಸಿ,
" ಕರ್ಣ.. ನೀನು ನಿಜಕ್ಕೂ ಸೂತಪುತ್ರನೇ ಆದರೆ ಆ ಕಡೆ ಸರಿದು ಬಿಡು. ಕುಲೀನ ವಂಶಸ್ಥರ ಈ ಪ್ರದೇಶದಲ್ಲಿ ಯಾಕೆ ಬೇಡದ ರಗಳೆ...? ಉಚ್ಛ ಸ್ತ್ರೀಯಗರ್ಭ ಮತ್ತು ಪಿತೃಪ್ರಧಾನ ವ್ಯವಸ್ಥೆಯಲ್ಲಿ ವೃಥಾ ಅವಮಾನಕ್ಕೆ ತುತ್ತಾಗಬೇಡ. ರಾಜನಾದವನು ಕ್ಷತ್ರಿಯನಲ್ಲದವನೊಡನೆ ಏನು ಮಾತು..? " ಎಂದು ಮಾತನಾಡುವ ಮುಂಚೆ ಮೊದಲಿನಿಗಿಂತಲೂ ರಭಸದಿಂದ ಅಬ್ಬರಿಸಿದ ದುರ್ಯೋಧನ.
" ಆಚಾರ್ಯರೇ, ಪಿತಾಮಹ ಭೀಷ್ಮ, ನಾನು ಮೊದಲೇ ಹೇಳಿದ್ದೇ ವಂಶಾನುವಂಶೀಯ ಚರ್ಚೆ ಬೇಡ. ಕೇವಲ ವೀರತ್ವ ಮತ್ತು ಪ್ರತಿಭೆಯ ಚರ್ಚೆಯಾಗಲಿ, ಪ್ರದರ್ಶನವಾಗಲಿ ಎಂದು. ಆದರೆ ನೀವಾಗಿ ಕೆದರುತ್ತಿದ್ದೀರಿ ಹಾಗಿದ್ದರೆ ಕೇಳಿ. ಕರ್ಣನು ಸೂತ್ರಪುತ್ರನಾದರೂ ವೀರರಲ್ಲಿ ವೀರ ಎಂಬುದರಲ್ಲಿ ಎರಡು ಮಾತಿಲ್ಲ. ಹಾಗಾಗಿ ಅವನು ಈ ರಂಗಕ್ಕೆ ಅರ್ಹನೇ, ಅದೇ ವಂಶದ ಮಾತಿಗೆ ಬಂದರೆ ಇಲ್ಲಿ ಎಲ್ಲರಿಗೂ ಪ್ರಧಾನ ಕುಲಗುರುವಾಗಿರುವ ದ್ರೋಣಾಚಾರ್ಯರಿಗೆ ಯಾವ ವಂಶ ಇತಿಹಾಸವಿದೆ..? ಅವರು ಯಾವ ಉಚ್ಛ ಸ್ತರದ ಸಂತತಿಯ ಕೂಸು ..? ಎಲ್ಲಿಯೂ ಸಲ್ಲದ ಸಂತತಿಯಲ್ಲಿ ಅವರ ಹಿನ್ನೆಲೆಗೆ ಗುರುತೇ ಇಲ್ಲವಲ್ಲ..? ಅವರ ಹುಟ್ಟಿನ ಹಿನ್ನೆಲೆ ಗೊತ್ತಿಲ್ಲದ್ದೇನಲ್ಲವಲ್ಲ. ಅತಿ ಅವಸರಕ್ಕೆ ಬಿದ್ದ ದೊನ್ನೆಯಲ್ಲಿ ಹುಟ್ಟಿದ ದ್ರೋಣರು ಇವತ್ತಿಗೂ ಕುಲದ ವಿಷಯದಲ್ಲಿ ಕಳಂಕಿತರೆ. ಅಗ್ನಿಸ್ತೋಮ ಯಾಗದ ಮಧ್ಯದಲ್ಲಿ ಅಪ್ಸರೆಯ ಸಂಗದಲ್ಲಿ, ದ್ರೋಣದಲ್ಲಿ ಜನಿಸಿದ ಗುರುಗಳಿಗೆ ಅದ್ಯಾವ ಹಿನ್ನೆಲೆಯಿದೆ..?
ಗುರುಗಳೇ, ಇವತ್ತು ಅತಿದೊಡ್ಡ ಸಾಮ್ರಾಜ್ಯ ಹಸ್ತಿನಾವತಿಯ ಕುಲಾಚಾರ್ಯ ಎಂದು ಗುರುತಿಸಿದ್ದು ನಿಮ್ಮಲ್ಲಿನ  ರಣಕಲೆಯಿಂದ, ಅದ್ಭುತ ಬಿಲ್ಗಾರಿಕೆಯಲ್ಲಿನ ಸಾಧನೆಯಿಂದ. ಪರಶರಾಮರ ಶಿಷ್ಯರಾಗಿ ನೀವು ಸಾಧಿಸಿದ ಶರಸಂಧಾನದಿಂದಾಗಿ. ಅಷ್ಟಾಗಿಯೂ ಈ ಅರ್ಜುನನ್ನು ಬಿಲ್ಗಾರನನ್ನಾಗಿಸುವ ನೆವದಲ್ಲಿ ಅಂದು ಆ ಏಕಲವ್ಯನ ಬದುಕನ್ನು ಹಾಳು ಮಾಡಿದ ನಿಮ್ಮದು ಅದ್ಯಾವ ನೀತಿ ಮತ್ತು ಧರ್ಮ..? ಏಕಲವ್ಯನು ಎಂದೂ ನೇರವಾಗಿ ನಿಮ್ಮ ಬಳಿ ಶಿಷ್ಯನಾಗಿರಲೇ ಇಲ್ಲ. ಕೇವಲ ಅವನ ಔನ್ನತ್ಯದಿಂದಾಗಿ ಬೌದ್ಧಿಕವಾಗಿ ಗುರುವಾಗಿ ಸ್ವೀಕರಿಸಿದ್ದನಷ್ಟೆ. ಅದು ಅವನ ಹಿರಿಮೆ. ಅದರಲ್ಲಿ ನಿಮ್ಮ ಹೆಚ್ಚುಗಾರಿಕೆ ಏನೂ ಇರದಿದ್ದಾಗಲೂ ಅವನ ಸಾಧನೆಯನ್ನು ನಿಲ್ಲಿಸುವ ಉದ್ದೇಶದಿಂದ ಅವನ ಬೆರಳನ್ನೇ ಬಲಿತೆಗೆದುಕೊಂಡಿರಿ. ಆವತ್ತು ಅಂಥಾ ನಿಷಾದ ರಾಜನ ಮಗನಿಂದ ಹೆಬ್ಬೆರಳನ್ನೇ ದಕ್ಷಿಣೆಯಾಗಿ ಪಡೆಯುವಾಗ ಮುಖ್ಯವಾಗದ ಜಾತಿ ಕುಲ ಇವತ್ತು ಯಾಕೆ ಮುಖ್ಯವಾಗುತ್ತಿದೆ..?
ಇನ್ನು ಅದೇ ರೀತಿಯಲ್ಲಿ ಕೃಪಾಚಾರ್ಯರಾದರೂ ನೋಜೆ ಹುಲ್ಲಿನ ಸಮಾಗಮದಲ್ಲಿ ಹುಟ್ಟಿದವರಾದ್ದರಿಂದ ಹಿನ್ನೆಲೆಯ ಬಗ್ಗೆ ಜಾತಿಯ ಬಗ್ಗೆ ಮಾತಾಡಲು ಅವರಿಗೆಲ್ಲಿಯ ಹಕ್ಕು..? ಇನ್ನು ಸರ್ವ ಸಮ್ಮತ ಮಹಾ ಮಹಿಮ ಷಣ್ಮುಖನ ಹಿನ್ನೆಲೆ ಇಂದಿಗೂ ರಹಸ್ಯ. ಆದರೆ ಆತ ಆರಾಧ್ಯ ದೈವವಲ್ಲವೇ..? ವಿಶ್ವಾಮಿತ್ರ ಮೂಲತ: ಕ್ಷತ್ರೀಯರಾದರೂ ಅತ್ಯುತ್ತಮ ಬ್ರಾಹ್ಮಣ್ಯವನ್ನು ಸಾಧಿಸಿದರು. ಶಾಶ್ವತ ಬ್ರಹ್ಮತ್ವವನ್ನೂ ಪಡೆದರು. ಆದ್ದರಿಂದ ವೀರರ ಕುಲ ಗೋತ್ರ ವೃತ್ತಾಂತವನ್ನು ಹುಟ್ಟಿನ ಮೂಲಕ್ಕೆ ಕೈ ಹಾಕುವುದು ಬೇಡವೆಂದೆ ಹೇಳಿದ್ದೆ.
ಭೀಮಾ ತಪ್ಪು ತಿಳಿಯಬೇಡ. ನಿನ್ನ ವಂಶದ ಹಿನ್ನೆಲೆಗೆ ಬಂದರೆ ನಿಮ್ಮ ಹುಟ್ಟಿನ ರಹಸ್ಯವೇನು..? ಪಿತಾಮಹನೇ ಇದಕ್ಕೆ ಸಾಕ್ಷಿ. ಯಾವ ಹಿನ್ನೆಲೆಯಲ್ಲಿ ಪಾಂಡವರು ಜನಿಸಿದರು. ಅವರ ಹಿಂದಿನ ಜಾತಿಯ ಪ್ರಶ್ನೆಗಳನ್ನು ಎತ್ತಿದರೆ ಎಲ್ಲರೂ ಅಲ್ಲಿಗೆ ಮೂಲವಿಲ್ಲದವರೇ. ಪಾಂಡವರಂತೂ ಸಂಪೂರ್ಣ ನಿಯೋಗಿಗಳು. ಯಾರಿಗೆ ಗೊತ್ತು ಯಾವ ಪುರುಷನ ಸಂಯೋಗದಲ್ಲಿ ಯಾರು ಜನಿಸಿದರೆಂದು..? ಅಲಭ್ಯವಾಗಿದ್ದ ಜನ್ಮ ಕಾರಣಕ್ಕೆ ಬೆಂಬಲಿಸಿದ ನಿಯೋಗದ ಮಹಾತ್ಮರ ಮೂಲಗಳನ್ನು ಕೆದಕಿದರೆ ಪಾಂಡವರೆಲ್ಲರೂ ಮೂಲಹೀನರೆ. ಕ್ಷೇತ್ರ ನಮ್ಮದಾದ ಮಾತ್ರಕ್ಕೆ ಚಿಗುರುವ ಮರ ನಮ್ಮದಾಗುವುದಿಲ್ಲ. ಕಾರಣವಾಗುವ ವಂಶದ ಮೂಲವಾಗುತ್ತವೆ ಎನ್ನುವುದು ನಿಸರ್ಗ ನಿಯಮ. ಆದರೂ ಪ್ರತಿಯೊಬ್ಬರೂ ಅವರವರ ಹಿರಿಮೆಯಿಂದ ಗುಣಾವಗುಣಗಳಿಂದ ಗುರುತಿಸಿಕೊಳ್ಳುತ್ತಾರೆಯೇ ವಿನ: ಸ್ಥರಗಳಿಂದಲ್ಲ. ಯುಧಿಷ್ಠೀರನನ್ನು ಧರ್ಮರಾಯ, ಧರ್ಮಜನೆನ್ನಲು ಆತ ಕುರುವಂಶೀಯ ಹಿರಿಯ ಎಂದಲ್ಲ. ಅವನು ಗುರುತಿಸಿಕೊಂಡಿರುವ ಧರ್ಮ ನಿಷ್ಠೆಯಿಂದ. ಅಷ್ಟಕ್ಕೂ ರಾಜನಾಗಲು ಬೇಕಾಗುವ, ಇರಬೇಕಾದ ಮುಖ್ಯ ಅರ್ಹತೆಗಳಾದರೂ ಏನು.. ?
ಶೌರ್ಯ ಮತ್ತು ಸೇನೆಯನ್ನು ಮುನ್ನಡೆಸುವ ಸಾರಥ್ಯ, ಕೊನೆಯಲ್ಲಿ ಕುಲ. ಮೊದಲಿನವೆರಡೂ ಅಂಶಗಳಲ್ಲಿ ಕರ್ಣನನ್ನು ಪ್ರಶ್ನಿಸುವ ಅವಶ್ಯಕತೆಯೇ ಇಲ್ಲ. ಇಲ್ಲಿನ ಜನರು ಅವನ ಮೇಲೆ ಹಾಕಿದ ಜೈಕಾರವೇ ಅದಕ್ಕೆ ಸಾಕ್ಷಿ. ನಮ್ಮೆಲ್ಲ ರಾಜಕುಮಾರರಿಗಿಂತಲೂ ಹೆಚ್ಚಿನ ಪ್ರಾವೀಣ್ಯತೆಯನ್ನು ಜನರ ಅಭಿಮಾನವನ್ನು ಅವನು ಗಳಿಸಿದ್ದೇ ಇದಕ್ಕೆ ಸಾಕ್ಷಿ. ಇನ್ನು ಅವನು ರಾಜನಾಗಿರಲೇಬೇಕೆಂದು ನಿಮ್ಮ ಅಪೇಕ್ಷೆಯಾದರೆ ಇದೋ ಈ ರಣಕಲಿ ಕರ್ಣ ಈಗಿನಿಂದಲೇ ಅಂಗರಾಜ್ಯದ ರಾಜಾಧಿಪತಿಯಾಗುತ್ತಾನೆ.ಇಷ್ಟು ಹೇಳಿದ ಮೇಲೂ ಕರ್ಣನನ್ನು ಪ್ರಶ್ನಿಸುವ ಅಧಿಕ ಪ್ರಸಂಗತನವಾಗಲಿ, ಅವನ ರಾಜ್ಯಾಭಿಷೇಕವನ್ನು ತಡೆಯುವ ಉದ್ಧಟತನವಾಗಲಿ ಯಾರಲ್ಲಾದರೂ ಇದ್ದರೆ ನನ್ನೆದುರಿಗೆ ಬಂದು ಹೆದೆಯೇರಿಸಲಿ ಯಾರಲ್ಲಿ..? " ಎಂದು ಅರಮನೆಯ ಸೇವಕರನ್ನು ಕರೆದವನೇ,
"...ಸರ್ವ ಸಾಮಾನುಗಳು ರಾಜಗೌರವದ ಸಕಲ ವ್ಯವಸ್ಥೆಯೂ ಆಗಲಿ. ಈಗಲೇ ನಾನು, ನನ್ನ ಆತ್ಮೀಯ ಮಿತ್ರನನ್ನು ಅಂಗ ರಾಜ್ಯಕ್ಕೆ ರಾಜನನ್ನಾಗಿ ಪಟ್ಟಾಭಿಷೇಕ ನೆರವೇರಿಸುತ್ತಿದ್ದೇನೆ.." ಎಂದು ಭಯಂಕರವಾಗಿ ಆಜ್ಞೆ ಮಾಡಿದ. ಅಲ್ಲಿಗೆ ಸೇರಿದವರಲ್ಲಿ ಶಬ್ದವೇ ಇರಲಿಲ್ಲ. ಅಸಲಿಗೆ ಪಿತಾಮಹ ಭೀಷ್ಮ ಮತ್ತು ಉಳಿದ ರಾಜವಂಶದವರ ಮುಖದಲ್ಲಿ ರಕ್ತವೇ ಉಳಿದಿರಲಿಲ್ಲ. ದುರ್ಯೋಧನ ಹೇಳಿದ ಯಾವ ವಿಷಯದಲ್ಲೂ ತೆಗೆದು ಹಾಕುವಂತಹದ್ದು, ಅವನಿಗೆ ಉತ್ತರಿಸಲು ಯಾರ ಬಳಿಯೂ ಯಾವ ಸಮಜಾಯಿಸಿ ಕೂಡಾ ಇರಲಿಲ್ಲ. ತೀರ ಕುರುವಂಶದ ಬುಡಕ್ಕೆ ದುರ್ಯೋಧನ ಕೈ ಹಾಕಿದ್ದ. ಅವನದೇನಿದ್ದರೂ ನೇರಾ ನೇರ. ಆದರೆ ಉಚ್ಛ ನೀಚ ಭೇದವಿಲ್ಲದ ಅಪರೂಪದ ಮಿತ್ರತ್ವವೊಂದಕ್ಕೆ ಅದು ನಾ೦ದಿಯಾಗಿತ್ತು. ಮುಂದಿನ ಕಾರ್ಯದಲ್ಲಿ ಎಲ್ಲೂ ಯಾರಲ್ಲೂ ಸ್ವರ ಹೊರಡಲಿಲ್ಲ. ನಿರಾತಂಕವಾಗಿ ಸುಗಂಧ ನೀರು ಅಭಿಷೇಚಿಸಿ ದುರ್ಯೋಧನ ವ್ಯವಸ್ಥಿತವಾಗಿ ಅಲ್ಲಿಯೇ ರಣಾಂಗಣದಲ್ಲಿ ಕರ್ಣನಿಗೆ ಅಂಗ ರಾಜ್ಯಾಭಿಷೇಕ ಮಾಡಿದ.
ಈ ಅಂಗರಾಜ್ಯವೆಂಬುದು ಹಸ್ತಿನಾವತಿಗೆ ಸೇರಿದ ಒಂದು ರಾಜ್ಯ. ಅದು ಗಂಗಾ ಮತ್ತು ಸರಯೂ ನದಿಗಳ ಮಧ್ಯೆ ಇರುವ ದೊಡ್ಡ ಭೂ ಪ್ರದೇಶ. ಅನುವಂಶದ ಬಲಿಜರಾಜನಿಗೆ ಸೇರಿದ ಪಟ್ಟದ ಅರಸಿ ಸುದೆಷ್ಣೆಗೆ ಹುಟ್ಟಿದ ತನ್ನ ಮಕ್ಕಳಾದ ಅಂಗ, ವಂಗ, ಕಲಿಂಗ, ಪುಂಡ್ರ ಹಾಗು ಸುಹ್ಮರಿಗೆ ಈ ಭೂಭಾಗವನ್ನು ಹಂಚಿಕೊಟ್ಟಿದ್ದ. ಅಂಗನ ಪಾಲಿಗೆ ಬಂದಿದ್ದ ಭಾಗವನ್ನು ಚಂಪಾಪುರಿ ಎಂಬ ನಾಮದಡಿಯಲ್ಲಿ ಅಂಗರಾಜ ಆಳುತ್ತಿದ್ಡುದರಿಂದ ಕಾಲಾನಂತರದಲ್ಲಿ ಅದು ಅಂಗರಾಜ್ಯವೆಂದೇ ಗುರುತಿಸಿಕೊಂಡಿತು. ಭೀಷ್ಮನ ಆಳ್ವಿಕೆಯಡಿಯಲ್ಲಿ ಕೊನೆಗೆ ಹಸ್ತಿನಾವತಿಗೆ ಸೇರಿತ್ತು. ಅದೀಗ ಕರ್ಣನ ಅಧಿಪತ್ಯಕ್ಕೆ ಒಳಪಡಲಿತ್ತು. ಅದನ್ನೇ ಎರಡನೆ ಯೋಚನೆ ಇಲ್ಲದೆ ಕರ್ಣನಿಗೆ ನೀಡಿಬಿಟ್ಟಿದ್ದ. ಅವನಿಗೆ ಆಭಾರಿಯಾದ ಕರ್ಣ ಎಲ್ಲರೆದುರಿಗೆ ಮತ್ತೊಮ್ಮೆ ನಮಿಸಿ ಮತ್ತೇ ನುಡಿದ.
" ಮಿತ್ರ ನಿನ್ನಿಂದ ಇಂತಹ ಸ್ನೇಹದ ಹೊರತಾಗಿ ನನಗಿನ್ನೇನು ಬೇಕಾಗಿಲ್ಲ. ನಿನ್ನ ಈ ಮಿತ್ರತ್ವದ ಹೃದಯ ವೈಶಾಲ್ಯತೆಗೆ ನನ್ನಿಂದ ಮಾತೇ ಹೊರಡದಂತಾಗಿದೆ. ನಮ್ಮಿಬ್ಬರಲ್ಲಿ ಯಾವ ವೈಮನಸ್ಸೂ ಬಾರದಂತೆಯೂ ಸ್ನೇಹವೆಂದರೆ ಹೀಗಿರಬೇಕೆ೦ದೂ, ಇತಿಹಾಸ ಗುರುತಿಸುವಂತೆಯೂ ನಾನಿರುತ್ತೇನೆ. ನನ್ನ ಕೊನೆಯ ಉಸಿರಿರುವವರೆಗೂ ನಿನ್ನ ರಾಜ್ಯ ಮತ್ತು ರಕ್ಷಣೆ ನನ್ನ ಹೊಣೆ ದುರ್ಯೋಧನಾ. ನೀನಗಿಂತಲೂ ಮೊದಲು ಈ ದೇಹ ಬೀಳಲಿದೆ. ಅಲ್ಲಿಯವರೆಗೂ ನಿನ್ನ ಮತ್ತು ನಿನ್ನ ಸಿಂಹಾಸನದ ರಕ್ಷಣೆ ನನ್ನದು. ಇದು ಆ ಸೂರ್ಯ ದೇವನಾಣೆಗೂ ಸಾಕ್ಷಿ. ಸೂರ್ಯಾಸ್ತದ ಮೊದಲು ಯಾವತ್ತೂ ಈ ಘಟ ಬೀಳಲಾರದು. ಈ ಘಟ ಇದ್ದಷ್ಟು ಕಾಲ ನೀನು ಮತ್ತು ನಿನ್ನ ಸಿಂಹಾಸನ ಅಬಾಧಿತ ಮಿತ್ರ..." ಎಂದು ಬಿಗಿದಪ್ಪಿಕೊಂಡ.
ಸೇರಿದ್ದ ಜನಸ್ತೋಮ ಅವರಿಬ್ಬರನ್ನು ಕೊಂಡಾಡುತ್ತಾ, ಹೊಗಳುತ್ತಾ ಸರಿಯತೊಡಗಿತ್ತು. ರಾಜವಂಶ ಮಾತಿಲ್ಲದೆ ಅಲ್ಲಿಂದ ಹೊರಡಲನುವಾಗಿದ್ದರೆ ಅತ್ತ ಸ್ತ್ರೀ ಕಕ್ಷೆಯಲ್ಲಿ ವಿರಾಜಿಸಿದ್ದ ಆಕೆ ಮಾತ್ರ ಎಲ್ಲರಿಗಿಂತಲೂ ಮೊದಲೇ ಕ್ರೀಡಾಂಗಣ ತೊರೆದು ಅರಮನೆಯ ಅಂತ:ಪುರ ಸೇರಿದ್ದಳು. ಕಾರಣ ಆಕೆಗೆ ಸ್ಪಷ್ಟವಾಗೇ ಗೊತ್ತಾಗಿತ್ತು. ಕರ್ಣ ಸೂತಪುತ್ರನಲ್ಲ. ತನ್ನ ಯೌವ್ವನದ ಕಾಲದಲ್ಲಿ ಸೂರ್ಯನೆಂಬುವವನೊಡನೆ ಬೆರೆತ ಫಲ ಎಲ್ಲೆರೆದುರಿಗೆ ಹೆಮ್ಮರವಾಗಿ ನಿಂತಿದ್ದು ಎದ್ದು ಕಾಣಿಸುತ್ತಿತ್ತು. ಆಕೆಯ ಮುಖದಲ್ಲಿ ರಕ್ತವಿರಲಿಲ್ಲ. ಆಕೆಯನ್ನು ರಾಜಮಾತೆ ಎಂದೇ ಎಲ್ಲರೂ ಕರೆಯುತ್ತಿದ್ದರು. ಆಕೆಯ ಹೆಸರು ಕುಂತಿ.



ಆವತ್ತು ಸುದ್ದಿ ತಿಳಿಯುತ್ತಿದಂತೆ ಕೂಡಲೇ ರಥವನ್ನೇರಿ ದುಶ್ಯಾಸನ, ಶಕುನಿಯರೊಡಗೂಡಿ ದುರ್ಯೋಧನ ಕಾಡಿನತ್ತ ಧಾವಿಸಿದ್ದ. ಅಲ್ಲಿದ್ದ ಅವನು. ನಿಶಾದರಾಜನ ಏಕಮಾತ್ರ ಪುತ್ರ ಏಕಲವ್ಯ. ಅವನ ಮುಖದಲ್ಲಿ ಅದೇ ದಿವ್ಯ ಕಳೆ. ಅದೇ ಕಡು ಹುಂಬತನ ಮತ್ತು ಅದೇ ಆತ್ಮೀಯ ಸ್ನೇಹಿಮನಸ್ಸು.
"...ರಾಜಕುಮಾರ ನಮಸ್ಕಾರ. ಕರೆ ಕಳುಹಿಸಿದ್ದರೆ ನಾನೇ ಬರುತ್ತಿದ್ದೆನಲ್ಲ...? ಯಾವ ಸೇವೆಯಾಗಬೇಕಿತ್ತು ಕುರು ರಾಜೇಂದ್ರ. ನೀವು ಇಲ್ಲಿ ಈ ಕಾಡಿನವರೆಗೇಕೆ ಪಾದ ಬೆಳೆಸಿದಿರಿ." ಎಂದ. ಏನೂ ಆಗೇ ಇಲ್ಲವೆನ್ನುವಂತೆ ಎದುರುಗೊಂಡ ಬೇಡರ ಕುವರ ಕೈಮುಗಿದು ನಿಲ್ಲುತ್ತಿದ್ದರೆ ಎದುರಿಗೆ ಬಲಗೈ ಬೆರಳು ಬಿಗಿದು ಕಟ್ಟಿದ್ದು ಎದ್ದು ಕಾಣಿಸುತ್ತಿತ್ತು. ಅಲ್ಲಿಗೆ ತನಗೆ ಬಂದ ಸುದ್ದಿ ನಿಜ. ದ್ರೋಣ ದ್ರೋಹ ಬಗೆದುಬಿಟ್ಟಿದ್ದಾರೆ ಅವನ ವಿದ್ಯೆಗೆ. ಬಲಗೈ ಹೆಬ್ಬೆರಳು ಇನ್ನು ಶಾಶ್ವತವಾಗಿ ಮುಗಿದು ಹೋಯಿತು ಎನ್ನುವಂತೆ ರಕ್ತದ ಕಲೆಗಳಿದ್ದ ಬಟ್ಟೆ ಬಿಗಿಯಲಾಗಿತ್ತು. ಮತ್ತೆ ದುರ್ಯೋಧನನಿಗೆ ವಿವರಿಸುವುದು ಬೇಕಿರಲಿಲ್ಲ. ಅವನಿಗೆ ಏನಾಗಿರಬಹುದೆಂದು ಅಂದಾಜು ದೊರಕಿಹೋಗಿತ್ತು. ನಡೆದ ಚಿತ್ರ ಕಣ್ಮುಂದೆ ಕದಲುತ್ತಿತ್ತು.
ಏಕಾಗ್ರತೆಯಿಂದ ಯಾವುದೇ ವಿದ್ಯೆಯಾದರೂ ಸುಲಭಕ್ಕೆ ಒಲಿಯುತ್ತದೆ. ದ್ರೋಣರನ್ನು ಗುರುಗಳಾಗಿ ಸ್ವೀಕರಿಸಿದ್ದ ಏಕಲವ್ಯ ಆವರ ಮಣ್ಣಿನ ಮೂರ್ತಿಯೆದುರು ಒಂದೇ ಸಮನೆ ಶರ ಸಂಧಾನ ನಡೆಸಿ, ಇನ್ನೂ ಅರ್ಜುನ ಪಕ್ವವಾಗಿಲ್ಲದ ಶಬ್ದವೇದಿಯಂತಹ ವಿದ್ಯೆಯ ಮೇಲೂ ಅವನು ಹಿಡಿತ ಸಾಧಿಸಿಬಿಟ್ಟಿದ್ದ. ಅದೇ ಅರ್ಜುನನ ಸಮಸ್ಯೆಗೆ ಕಾರಣವಾಗಿತ್ತು. ಅರ್ಜುನ ಆ ವಿದ್ಯೆಯನ್ನು ಇನ್ನೂ ಅಷ್ಟಾಗಿ ಕಲಿತಿರಲಿಲ್ಲ. ಅದಕ್ಕಿಂತಲೂ ಮ೦ತ್ರ ಶಕ್ತಿಯ ಮುಕ್ತಾ ಆಮುಕ್ತಗಳ ಅಭ್ಯಾಸದಲ್ಲಿ ನಿರತನಾಗಿದ್ದರಿಂದ ಇತ್ತ ಗಮನ ಹರಿಸಿರಲಿಲ್ಲ. ಆದ್ದರಿಂದಲೇ ಅದಾವುದರ ಲಭ್ಯತೆ ಇಲ್ಲದ ಏಕಲವ್ಯ ಇದನ್ನು ಸಾಧಿಸಿದ್ದ. ಕಾರಣ ಮುಕ್ತಾ ಆಮುಕ್ತಗಳ ಸಾಧನೆಗೆ ಗುರುಮಂತ್ರದ ಬೆಂಬಲ ಬೇಕು. ಇದಕ್ಕೆ ಏಕಾಗ್ರತೆಯ ಅಭ್ಯಾಸ ಸಾಕು. ಆ ದಿನ ಅವನ ಶರವಿದ್ಯೆ ನೋಡಿದ ಅರ್ಜುನ ಕೂಡಲೇ ಆಚಾರ್ಯ ದ್ರೋಣರ ಬಳಿಗೆ ಹೋಗಿ ಅಲವತ್ತುಕೊಂಡಿದ್ದಾನೆ.
" ಗುರುವರ್ಯ. ಇದೇನಿದು ನೀವು ನನ್ನನ್ನು ಜಗತ್ತಿನಲ್ಲೇ ಶ್ರೇಷ್ಠ ಬಿಲ್ಲುಗಾರನನ್ನಾಗಿ ಮಾಡುತ್ತೇನೆಂದು ಮಾತು ಕೊಟ್ಟಿದ್ದೀರಿ. ಈಗ ನೋಡಿದರೆ ಆ ಬೇಡರ ಹುಡುಗ ಅತಿಮಾನುಷವಾದ ಶರ ಸಂಧಾನವನ್ನು ಸಾಧಿಸುತ್ತಿದ್ದಾನೆ." ಎಂದು ಬಿಟ್ಟಿದ್ದ. ಕೂಡಲೇ ಶಬ್ದವೇದಿ ಮತ್ತು ಇರುಳ ಸಂಧಾನಗಳನ್ನು ಸರ್ವ ರೀತಿಯಲ್ಲೂ ಕಲಿಸುವುದಾಗಿ ಅರ್ಜುನನಿಗೆ ತಿಳಿಸಿ ಅವನೊಡನೆ ಕಾಡಿಗೆ ಬಂದಿದ್ದಾರೆ. ವಿದ್ಯಾಭ್ಯಾಸ ಮಾಡುತ್ತಿದ್ದ ಏಕಲವ್ಯನ ಬಳಿ ಸಾರಿ ಗುರುವೆಂದು ಒಪ್ಪಿಕೊಂಡ ತನಗೆ ಗುರುದಕ್ಷಿಣೆಯಾಗಿ ಅವನ ಹೆಬ್ಬೆರಳನ್ನೆ ಬೇಡಿದ್ದಾರೆ. ಅಲ್ಲಿಗೆ ಅವನ ವಿದ್ಯೇ ನಿಂತುಹೋಗುತ್ತದೆ.
ಅರ್ಜುನ ಮುಂದೊಮ್ಮೆ ಶಸ್ತ್ರ ಸಂಧಾನದಲ್ಲಿ ಜಗದ್ವಿಖ್ಯಾತನಾದ ಮೇಲೂ ಹೀಗೆ ಬಿಲ್ವಿದ್ಯೆಯಲ್ಲಿ ಅವನನ್ನು ಎದುರಿಸುವವರಾರೂ ಇರುವುದಿಲ್ಲ. ಅಷ್ಟೆ.. ಏಕಲವ್ಯನ ಅತೀವ ಗುರುಭಕ್ತಿ, ಪರವಶತೆಯ ಉನ್ಮಾದದಲ್ಲಿ ಹಿಂದೆ ಮುಂದೆ ಯೋಚಿಸದೆ ಹೆಬ್ಬರಳನ್ನು ನೀಡುವಂತೆ ಮಾಡಿವೆ. ಅರ್ಜುನ ಸಂಪ್ರೀತನಾದರೆ ದ್ರೋಣ ಹಸ್ತಿನಾವತಿಯ ಪಿತಾಮಹ ಭೀಷ್ಮನಿಗೆ ಮತ್ತು ಅರ್ಜುನನಿಗೆ ಕೊಟ್ಟ ಮಾತನ್ನು ಉಳಿಸಿಕೊಂಡ ಹೆಮ್ಮೆಯಲ್ಲಿ ಹಿಂದಿರುಗಿದ್ದಾರೆ. ಕೂಡಲೇ ದ್ರೋಣರ ಬಳಿ ಸಾರಿದ ದುರ್ಯೋಧನ ಅವರೊಡನೆ ಮಾತಿಗಿಳಿದ. ಅವನು ಬಂದ ರಭಸದಿಂದಲೇ ದ್ರೋಣರು ಊಹಿಸಿದ್ದರು ಇಂಥದ್ದೇನಾದರೂ ನಡೆದಿರಬಹುದೆಂದು.
" ಗುರುವರ್ಯ. ನೀವು ಪಿತಾಮಹರಂತೆ ಸರ್ವಶಾಸ್ತ್ರ ಕೋವಿದರು. ಮಿಗಿಲಾಗಿ ಶಸ್ತ್ರಾಸ್ತ್ರಗಳಿಗಿಂತಲೂ ಉತ್ತಮ ಜ್ಞಾನ ನೀಡುವ ಸಜ್ಜನರು. ಸಾಮಾನ್ಯ ಕ್ಷತ್ರೀಯನಿಗೂ ನಿಮಗೂ ಇರುವ ದೊಡ್ಡ ವ್ಯತ್ಯಾಸವೆಂದರೆ ಅದೇನೆ. ನೀವಾಗಿ ಇಂಥ ಅಮಾನವೀಯ ಕೆಲಸ ಮಾಡಬಹುದಿತ್ತೆ..? ಅಷ್ಟಕ್ಕೂ ಒಬ್ಬ ಬೇಡರ ಹುಡುಗ ತನ್ನಷ್ಟಕ್ಕೆ ತಾನು ವಿದ್ಯೆಯನ್ನು ಕಲಿತಿದ್ದರೆ ಅದ್ಯಾವ ರಾಜ್ಯ ಕೊಳ್ಳೆ ಹೋಗುತ್ತಿತ್ತು..? ಅವನಂಥ ನೂರಾರು ಯೋಧರು ಈ ರಾಜ್ಯಕ್ಕೆ ಬೇಕು ಎಂಬುದು ನಿಮಗೂ ಗೊತ್ತಿರುವಂತಹದ್ದೇ. ಸರ್ವ ಕಾಲಕ್ಕೂ ನಾವೇ ಕುರುವಂಶಜರು ಅಥವಾ ಹಸ್ತಿನಾವತಿಗೆ ನಿಷ್ಠೆಯಾಗಿ ನಿಂತಿರುವ ನಿಮ್ಮಂತವರು ಮಾತ್ರವೇ ಈ ಹಸ್ತಿನಾವತಿಯನ್ನು ರಕ್ಷಿಸುತ್ತೇವೆ ಎನ್ನುವುದು ಸುಳ್ಳು ಗುರುವರ್ಯಾ.
ಕಾಲಾನಂತರದಲ್ಲಿ ಈ ಅರಮನೆಯ ಅನ್ನದ ಋಣದಲ್ಲಿರುವ ವಂಶಗಳು ಮಾತ್ರವೇ ಈ ಸಿಂಹಾಸನಕ್ಕೆ ನಿಷ್ಠೆಯನ್ನು ಸಲ್ಲಿಸುತ್ತವೆ. ಅಂಥವರಲ್ಲಿ ಹಿರಣ್ಯಧನುಷ ಮತ್ತವನ ಮಗ ಕೂಡಾ. ಅವನನ್ನು ನೀವು ಜೀವನ ಪರ್ಯಂತ ಅಂಗವಿಕಲನನ್ನಾಗಿಸಿ ವಿದ್ಯೆ ಕಲಿಯದಂತೆ ಮಾಡಿ ನಿಲ್ಲಿಸಿದ್ದೀರಲ್ಲ ಅವನ್ಯಾವ ಮನಸ್ಸಿನಿಂದ ಈ ಅರಮನೆಯ ಋಣಕ್ಕೆ ಬಿದ್ದಾನು. ಅಷ್ಟಕ್ಕೂ ತೀರ ಕುಲ ಗುರುವಾದ ನಿಮಗೆ ಇಷ್ಟು ಕೀಳು ಮಟ್ಟದ ಕೃತ್ಯ ಸಮ್ಮತವೆನ್ನಿಸಿದ್ದು ಯಾವ ರೀತಿಯಲ್ಲೂ ಯಥೋಚಿತವೆನ್ನಿಸುತ್ತಿಲ್ಲ ನನಗೆ ಛೇ.." ಎಂದು ಕುಸಿದು ಕುಳಿತ.
ಆ ಕ್ಷಣಕ್ಕೆ ಅವನ ನೋವಿಗೆ ದ್ರೋಣಾಚಾರ್ಯರು ಯಾವುದೇ ಉತ್ತರ ನೀಡಿದರೂ ಅದು ಕ್ಷಮ್ಯವಾಗುತ್ತಿರಲಿಲ್ಲ. ಅದವರಿಗೆ ಗೊತ್ತಿತ್ತು ಕೂಡಾ. ಕಾರಣ ಎಂತಹದ್ದೇ ಸಮಜಾಯಿಸಿ ಕೊಟ್ಟರೂ ಏಕಲವ್ಯವನ್ನು ಶಾಶ್ವತ ಅಂಗಹೀನನನ್ನಾಗಿಸಿದ್ದು ಸಮರ್ಥಿಸಿಕೊಳ್ಳುವಂತಹ ವಿಷಯವಾಗಿರಲೇ ಇಲ್ಲ. ಆದರೆ ಅರಮನೆಯ ಅನ್ನದ ಋಣ, ಮಾತಿನ ಋಣ ಕ್ಷಣಕಾಲ ಅವರನ್ನು ಆವರಿಸಿದ್ದು ಆ ಘಟನೆ ನಡೆದುಹೋಗಿತ್ತು. ಅದಕ್ಕೂ ಮೊದಲು ಅರ್ಜುನ ಮತ್ತು ಇತರರು ಅವರನ್ನು ಕೊಂಚ ಪ್ರಭಾವಿಸಿದ್ದೂ ಸುಳ್ಳಲ್ಲ. ಕೊಟ್ಟ ಮಾತಿಗೆ ಬಿದ್ದು ಭೀಷ್ಮನೊಡನೆ ಆಡಿದ ಮಾತಿಗೆ ಬದ್ಧರಾಗಿದ್ದ ಗುರುವಾಗಿ ಮಾತ್ರ ಯೋಚಿಸಿದ್ದರು ಅವರು. ಮಾತಿನ ಭರಕ್ಕೆ ಮಾನವೀಯತೆ ಸತ್ತುಬಿದ್ದಿತ್ತು ಅವರೆದುರಿಗೆ ಅನಾಥ ಶವದಂತೆ.
" ದುರ್ಯೋಧನಾ. ನಿನ್ನ ಮನಸ್ಥಿತಿ ನನಗರಿವಾಗುತ್ತಿದೆ. ಆದರೆ ನಾನು ಪಿತಾಮಹರಿಗೂ, ಅರ್ಜುನನಿಗೂ ಮಾತು ಕೊಟ್ಟಿದ್ದೆ. ಈ ಜಗತ್ತಿನಲ್ಲಿ ಅದ್ವಿತೀಯ ಬಿಲ್ಲುಗಾರರನ್ನು ಯುದ್ಧ ಪ್ರವೀಣರನ್ನು ಹಸ್ತಿನವಾತಿಯ ರಾಜಕುಮಾರರಲ್ಲಿ ತಯಾರಿಸುತ್ತೇನೆ ಎಂದು. ಅದರಲ್ಲೂ ಅರ್ಜುನನಿಗೆ ಬಿಲ್ವಿದ್ಯೆಯಲ್ಲಿರುವ ಆಸಕ್ತಿ ಮತ್ತು ಏಕಾಗ್ರತೆ ಸಧ್ಯ ಬೇರಾರಲ್ಲೂ ಕಂಡು ಬರುತ್ತಿಲ್ಲ. ಗದೆಯಲ್ಲಿರುವ ನಿನಗಿರುವ ಪ್ರಾವೀಣ್ಯತೆ ಅರ್ಜುನನಿಗೆ ಬಿಲ್ವಿದ್ಯೆಯಲ್ಲಿ ಸಾಧಿಸುತ್ತಿದೆ. ಇನ್ನೂ ಸಾಧನೆಯಾಗಬೇಕಷ್ಟೆ. ಬಹುಶ: ನನ್ನ ಶಿಷ್ಯ ಕೋಟಿಯಲ್ಲಿ ಅವನೊಬ್ಬನೆ ಅಂಥ ಸಾಮರ್ಥ್ಯವುಳ್ಳವನು. ಆದರೆ ನೀನು ಊಹಿಸುತ್ತಿರುವಂತೆ ಮುಂದೊಮ್ಮೆ ಅರ್ಜುನನಿಗೆ ಎದುರಾಳಿ ಇರಲಿ ಎಂದಾಗಿದ್ದರೆ ಅದು ಎಂದಿದ್ದರೂ ಕುರುವಂಶಕ್ಕೂ ಆಪತ್ತೇ ಆಗುವಂಥದಲ್ಲವೇ..?" ಮಾತನ್ನು ಮೂಲದೆಡೆಗೇ ತಿರುಗಿಸಲೆತ್ನಿಸಿದ್ದರು ದ್ರೋಣಾಚಾರ್ಯ. ಹಾಗೆ ಹೇಳುವ ಮೂಲಕ ತನ್ನ ಕಾರ್ಯವನ್ನು ಸಮರ್ಥಿಕೊಂಡಂತೆಯೂ ಆಗುತ್ತದೆ. ಇತ್ತ ಏಕಲವ್ಯನ ಬೆರಳು ಕತ್ತರಿಸಿದ ಘಾತುಕತನ ತಮ್ಮ ಆತ್ಮವನ್ನೂ ಸುಡದಂತಿರುತ್ತದೆ. ಹಾಗಾಗಿ ನೀನೆ ಅರ್ಜುನನ ಪ್ರತಿಸ್ಪರ್ಧಿ ಎನ್ನುವ ಮಾತಿನ ಮೂಲಕ ದುರ್ಯೋಧನನ್ನು ಸುಮ್ಮನಿರಿಸಲು ಪ್ರಯತ್ನಿಸಿದರು. ಎದುರಿಗಿದ್ದ ದುರ್ಯೊಧನನಿಗೆ ಗುರುಗಳ ಒಳಾರ್ಥ ಅರಿವಾಗದಿರಲಿಲ್ಲ. ಆದರೂ ಸಾವರಿಸಿಕೊಂಡು,
" ಅದನ್ನು ನಾನೂ ಒಪ್ಪುತ್ತೇನೆ ಗುರುವರ್ಯಾ. ಅದರೆ ಅವನ ವಿರುದ್ಧ ನಿಲ್ಲಲೇಬಾರದು.. "
" ದುರ್ಯೋಧನಾ ಮಾತಿಗಿದು ಸಮಯವಲ್ಲ. ನಿನ್ನ ದೂರಾಲೋಚನೆಗಳನ್ನು ನಾ ಬಲ್ಲೆ. ಅದಕ್ಕಾಗಿ ನೀನು ಪರಿತಪಿಸುತ್ತಿದ್ದಿ ಅಂತಾದರೆ ಯೋಚಿಸಬೇಕಿಲ್ಲ... " ಎಂದಿನ್ನೇನು ಹೇಳುತ್ತಿದ್ದರೋ ದುರ್ಯೋಧನ ಸಿಡಿದು ನುಡಿದ.
" ಗುರುವರ್ಯ ಒಬ್ಬ ರಾಜಕುಮಾರನಾಗಿ ಹಸ್ತಿನಾವತಿಯ ಕುರುವಂಶಜನಾಗಿ ನಾನು ಅವನ ಬಗ್ಗೆ ಅಭಿಮಾನವಿಟ್ಟು, ನನ್ನ ರಾಜ್ಯದ ಪ್ರಜೆಯೊಬ್ಬನ ಪರ ವಹಿಸಿದ್ದೇನೆಯೇ ಹೊರತಾಗಿ ನೀವು ಯೋಚಿಸುತ್ತಿರುವಂತೆ ನನ್ನಲ್ಲಿ ಯಾವುದೇ ದೂರಾಲೋಚನೆಗಾಗಲಿ, ದುರಾಲೋಚನೆಗಾಗಲಿ ಇರಲೇ ಇಲ್ಲ ಈಗಲೂ ಇಲ್ಲ. ಈ ದಾಯಾದಿಗಳು ಎಂಬ ಭಾವನೆಯನ್ನು ಕೇವಲ ನಿಮ್ಮಂಥವರು ಈ ಅರಮನೆಯಲ್ಲಿ ಹುಟ್ಟು ಹಾಕುತ್ತಿದ್ದೀರಿ ವಿನ: ನಾನಲ್ಲ. ನನಗೂ ಭೀಮನಿಗೂ ಕಲಿಕೆಯಲ್ಲಿ ಬಲದಲ್ಲಿ, ತಂತ್ರದಲ್ಲಿ ಜಿದ್ದಾಜಿದ್ದು ಇದ್ದಿರಬಹುದೇ ವಿನ: ಅದರರ್ಥ ನಾವು ಶತ್ರುಗಳೆಂದು ನಾನಿದುವರೆಗೂ ಎಣಿಸಿದ್ದೇ ಇಲ್ಲ. ಕೇವಲ ನಿಮ್ಮ೦ಥ ಇತರೆ ಜನರೇ ಎಲ್ಲೆಲ್ಲೂ ನಮ್ಮ ಮಧ್ಯೆ ಭೇದ ಎಣಿಸುತ್ತಲೇ ಇದ್ದೀರಿ. ಹಾಗೇನಾದರೂ ಅನ್ನಿಸಿದ್ದಲ್ಲಿ, ನಾನು ಪ್ರತಿಸ್ಪರ್ಧಿ ಎಂದು ಭಾವಿಸಿ ಅವನೊಡನೆ ಅನುಚಿತವಾಗಿ ನಡೆದುಕೊಂಡ ಒಂದೇ ಒಂದು ಉದಾಹರಣೆಗಳಿದ್ದರೆ ವಿವರಿಸಿ ನೋಡೊಣ. ಇಲ್ಲಿವರೆಗೂ ಕೌರವ ಸಹೋದರ ಅನುಚಿತ ನಡೆಗಳಿದ್ದರೆ ಬೆರಳೆತ್ತಿ ತೋರಿಸಿ ನೋಡೋಣ.
ಕ್ಷತ್ರೀಯನಾದವನಿಗೆ, ಸಬಲನಿಗೆ, ದೂರಾಲೋಚನೆ ಇರುವ ರಾಜಕುಮಾರರಿಗೆ ಸೇರಿದಂತೆ ಎಲ್ಲರಲ್ಲೂ ರಾಜನಾಗುವ ಮತ್ತು ರಾಜ್ಯ ಪರಿಪಾಲಿಸುವ ಆಸೆ ಸಹಜವಾಗೇ ಇರುತ್ತದೆ. ಅದರಿಂದ ನಾನೂ ಹೊರತಲ್ಲ. ಹಾಗಂದು ಅದಕ್ಕಾಗಿ ನನ್ನ ದಾಯಾದಿ ಸಹೋದರರಿಂದಲೇ ವೈರತ್ವವನ್ನು ಎದುರು ಹಾಕಿಕೊಳ್ಳುವ ಜಾಯಮಾನವೂ ನನ್ನದಲ್ಲ. ನನ್ನದೇನಿದ್ದರೂ ನೇರಾನೇರ ನಡೆ. ಅಕಸ್ಮಾತ ಏಕಲವ್ಯನಂಥವನು ಈಗ ಬೆಳೆದೂ ಮುಂದೆ ಹಸ್ತಿನಾವತಿಗೆ ತಿರುಗಿ ಬಿದ್ದಿದ್ದರೆ ಅವನನ್ನು ನಿವಾರಿಸಿಕೊಳ್ಳುವುದು ಎಷ್ಟರ ಮಾತಾಗಿತ್ತು. ನಾನೊಬ್ಬನೆ ಸಾಕು ಎಂಥಾ ಸೈನ್ಯವನ್ನೂ ಬಡಿದು ಬಿಸಾಡಲು ಎಂದು ನಿಮಗೂ ಗೊತ್ತಿಲ್ಲದ್ದೇನಲ್ಲವಲ್ಲ.
ಅದರಲ್ಲೂ ನೀವು, ಪಿತಾಮಹ ಇಬ್ಬರೂ ಈ ಸಿ೦ಹಾಸನ ರಕ್ಷಣೆಗೆ ವಚನ ಬದ್ಧರೂ, ಸಾವನ್ನು ಜಯಿಸಿದವರೂ, ರಣರಂಗದಲ್ಲಿ ಅತಿರಥಿಗಳೂ, ಸೋಲನ್ನು ಮೀರಿದವರೂ ಆಗಿರುವಾಗ ನಾನ್ಯಾಕೆ ಹಾಗೆ ಯೋಚಿಸುತ್ತೇನೆ ಗುರುವರ್ಯಾ. ಹಾಗೆ ನೋಡಿದರೆ ಈವರೆಗೂ ನನಗೆ ಸಿಂಹಾಸನದ ಚಿಂತೆ ಬಂದೇ ಇಲ್ಲ. ಕೇವಲ ಅದ್ಭುತ ಮೇಧಾವಿಯೊಬ್ಬನ ಬದುಕು ಹಾಳು ಮಾಡಿದ ಬಗ್ಗೆ ಖೇದವಿದೆ. ಅದರಲ್ಲೂ ನಿಮ್ಮಂಥ ಎಲ್ಲಾ ತಿಳಿದವರಿಂದ, ನನಗೇ ಇಲ್ಲದ ದೂರಾಲೋಚನೆ, ದುರಾಲೋಚನೆ ನಿಮಗೆಲ್ಲರಿಗೂ ಇದ್ದುದು ಅಚ್ಚರಿ ಮೂಡಿಸುತ್ತಿದೆ. ಅಂತಹ ನಿಮ್ಮ ಆಲೋಚನೆಗಳು, ನಿಮ್ಮ ಗುರುಪರಂಪರೆಗಿಂತಲೂ ಮಿಗಿಲಾಗಿ ಪಾಂಡವರ ಅಥವಾ ಅರ್ಜುನ ಪಕ್ಷಪಾತಿಯಾಗಿದ್ದರೂ ನನಗೆ ಬೇಜಾರಿಲ್ಲ.
ಕಾರಣ ನೀವು ಒಬ್ಬ ಏಕಲವ್ಯನನ್ನು ಅಂಗಹೀನನನ್ನಾಗಿಸುವುದರ ಮೂಲಕ ಅರ್ಜುನನಿಗೊಬ್ಬ ಪ್ರತಿಸ್ಪರ್ಧಿಯನ್ನು ತಪ್ಪಿಸಿದ್ದರೂ ಈ ಭೂಮಂಡಲದಲ್ಲಿ ಇನ್ನೆಲ್ಲೋ ಇನ್ನೊಬ್ಬ ವೀರ ಈಗಾಗಲೇ ಬೆಳೆಯುತ್ತಿದ್ದಿರಬಹುದು. ಯಾರಿಗೆ ಗೊತ್ತು. ನಾಳೆಯನ್ನು ಯಾರೂ ಬಲ್ಲವರಿಲ್ಲ. ಯೋಜನೆಗಳಷ್ಟೆ ನಮ್ಮವು. ಆದ್ದರಿಂದಲೇ ನಾನು ಯಾವತ್ತೂ ನನ್ನನ್ನು ನಂಬಿದವರಿಗೋಸ್ಕರ, ನನ್ನ ಮೇಲೆ ಭರವಸೆಗಳನ್ನಿಟ್ಟವರಿಗೋಸ್ಕರ ಎಲ್ಲಾ ಕಾರ್ಯವನ್ನು ಯೋಜಿಸುತ್ತೇನೆ ವಿನ: ಅದರಲ್ಲಿ ಯಾವಾಗಲೂ ನನ್ನ ದುರಾಲೋಚನೆಗಳು ಇರುವುದಿಲ್ಲ. ಅಷ್ಟಕ್ಕೂ ಈಗಾಗಲೇ ಅರ್ಜುನನಿಗೊಬ್ಬ ಸ್ಪರ್ಧಿ ಬೇರೆಲ್ಲಾದರೂ ಅಭ್ಯಸಿಸುತ್ತಾ ಇಲ್ಲವೆಂದು ಅದ್ಹೇಗೆ ನೀವು ವಿಶ್ವಾಸಿಸುತ್ತೀರಿ ಗುರುವರ್ಯ..?
ಹಾಗೆಂದು ನೀವು ಮಾತುಕೊಟ್ಟಿದ್ದೇನೋ ಸರಿ. ಆದರೆ ಭೂಮಂಡಲವನ್ನೆಲ್ಲಾ ತಡಕಾಡಿ ಧನುರ್ಧಾರಿಗಳನ್ನೆಲ್ಲಾ ಬಡಿಬಡಿದು ಅರ್ಜುನನನ್ನು ರೂಪಿಸಲಿಕ್ಕಾದೀತೆ..? ಅದರ ಬದಲಾಗಿ ಎಂಥವನೇ ಅತಿರಥ ಬಂದರೂ ಗೆಲ್ಲಬಲ್ಲ ಶಿಷ್ಯನನ್ನು ರೂಪಿಸಿ ಆಗ ನಿಮ್ಮ ಗುರುವಿದ್ಯೆಗೊಂದು ಮಹತ್ವ ಗುರುವರ್ಯಾ. ಗದೆಯಲ್ಲಿ ಸರ್ವ ಶ್ರೇಷ್ಠನಾಗುವವನು ಎಂಥವನನ್ನೂ ಬಡಿದು ಬಿಸಾಡಬಲ್ಲವನು ಮಾತ್ರ. ಹೊರತು ಅದ್ವಿತೀಯನೆಂದು ಎಲ್ಲರನ್ನೂ ಕೊಂದು ಶ್ರೇಯಸ್ಸು ಗಳಿಸುವವನಲ್ಲ. ಇಲ್ಲದಿದ್ದರೆ ಹೀಗೆ ಕಂಡವರನ್ನೆಲ್ಲಾ ಬಲಿಕೊಡುತ್ತಾ ಶಿಷ್ಯರನ್ನು ರೂಪಿಸುತ್ತೀರಂತಾದರೆ ಅದ್ಯಾವ ರೀತಿಯಲ್ಲೂ ಸಮರ್ಥನೆ ಸಿಕ್ಕುವುದಿಲ್ಲ ಮತ್ತದು ಮಾನವೀಯವೂ ಅಲ್ಲ.
ಈ ಘಟನೆಯಿಂದ ಇತಿಹಾಸ ಏಕಲವ್ಯನನ್ನೇ ಉತ್ತಮನನ್ನಾಗಿ ಗುರುತಿಸುತ್ತದೆಯೇ ವಿನ: ದ್ರೋಣಾಚಾರ್ಯರು ಅವನ ಗುರುವಾಗಿದ್ದರು ಎಂದು ನಿಮ್ಮ ಮೂಲಕ ಯಾವತ್ತೂ ಔನತ್ಯಕ್ಕಿಡಾಗುವುದಿಲ್ಲ. ಯಾರೊಬ್ಬನನ್ನೂ ಹೀಗೆ ತಯಾರು ಮಾಡುತ್ತೇನೆನ್ನುವುದು ನಿಮ್ಮ ಅಪಾರ ಶಕ್ತಿಯ ಸಂಕೇತ ನಿಜವೇ. ಆದರೆ ಅದನ್ನು ಸಾಧಿಸುವ ಬಲದಲ್ಲಿ ಇನ್ನೊಬ್ಬನನ್ನು ತುಳಿಯುವುದಾದರೆ ನಿಮ್ಮ ಬಲಕ್ಕೆ ಅದು ಕಪ್ಪು ಚುಕ್ಕೆಯೇ ಆಚಾರ್ಯ. ಯಾರನ್ನೋ ಹೀಗೆಯೇ ಆಗಬೇಕೆಂದು ನಿರ್ದೇಶಿಸಲು ನಾವ್ಯಾರು..? ಅದನ್ನೆಲ್ಲಾ ನೋಡಿಕೊಳ್ಳುವ ಆ ದೇವರು ಇದನ್ನು ನಿರ್ವಹಿಸುತ್ತಾನೆ. ನಾಳಿನ ಬಗ್ಗೆ ಅತೀವ ಚಿಂತೆಗಳಿರುವವ ಮಾತ್ರ ಹೀಗೆ ತೀರ ಸಂಕೀರ್ಣ ಮನಸ್ಸಿನಿಂದ ಯೋಚಿಸುತ್ತಾನೆ ಅದಕ್ಕೆ ಏಕಲವ್ಯನಂಥವರು ಬಲಿಯಾಗುತ್ತಾರೆ ಅಷ್ಟೆ. ಆದರೆ ಹೀಗೆ ಬಲಿಯಾದ ಮುಗ್ಧತೆಯ ಜೊತೆಗೆ ಅವನ ಗುರುಭಕ್ತಿಯ ಬಗ್ಗೆ ನನಗೆ ಹೆಮ್ಮೆ ಇದ್ದರೆ ನಿಮ್ಮ ಸಣ್ಣತನ ನನ್ನನ್ನು ಅಸಹ್ಯಕ್ಕಿಡುಮಾಡುತ್ತಿದೆ ಕ್ಷಮಿಸಿ..." ಎಂದು ಮುಂದೆ ಮಾತಾಡಲಾರದೆ ಎದ್ದು ಬಂದಿದ್ದ.
ಆದರೆ ಅವನ ಮಾತಿನ ಊಹೆ ಸರಿಯಾಗೇ ಇತ್ತು. ಭೂ ಮಂಡಲದ ಇನ್ನೊಂದು ತುದಿಯಲ್ಲಿ ಮಹೇ೦ದ್ರ ಪರ್ವತದಲ್ಲಿ ಪರುಶುರಾಮರಲ್ಲಿ ಅವನೊಬ್ಬ ಬಿಲ್ವಿದ್ದೆ ಕಲಿಯಲು ನಿಂತು ಬಿಟ್ಟಿದ್ದ. ಏಕಲವ್ಯನಿಗಿಂತಲೂ ವೇಗವಾಗಿ ಅವನು ಸಿದ್ಧಿಯನ್ನು ಸಾಧಿಸುತ್ತಲಿದ್ದ. ಹಗಲು ರಾತ್ರಿ ಶರ ಸಂಧಾನ ಮಾಡುತ್ತಾ ತಾನೂ ಬ್ರಾಹ್ಮಣ ಎಂದು ಸುಳ್ಳು ಹೇಳಿ ಶತಾಯು ಗತಾಯು ಬಿಲ್ವಿದ್ಯೆಯ ರಹಸ್ಯಕ್ಕಾಗಿ ಹಗಲಿರುಳು ಶರಸಂಧಾನ ಮಾಡುತ್ತಾ, ಮುಕ್ತಾ ಆಮುಕ್ತಗಳನ್ನು ಸಾಧಿಸುತ್ತಾ ನಿಂತು ಬಿಟ್ಟಿದ್ದ. ಅವನನ್ನು ಮುಂದೆ ಅದಿರಥನ ಸಾಕು ಮಗ " ಕರ್ಣ " ಎಂದು ಇತಿಹಾಸ ಗುರುತಿಸಿತು. ಅಸಲಿಗೆ ಅವನು ಮದುವೆಯ ಮುಂಚೆ ಕುಂತಿಯ ಸೂರ್ಯನೆಂಬ ಮತಸ್ಥ ಪುರುಷನೊಬ್ಬನೊಂದಿಗೆ ವಯೋಸಹಜ ಕುತೂಹಲಾಪೇಕ್ಷೆಯಿಂದ,  ಆತುರತೆಯಿಂದ ನಡೆಸಿದ, ಸಮಾಗಮದ ಪರಿಣಾಮ ಗರ್ಭಿಣಿಯಾಗಿಬಿಟ್ಟಿದ್ದಳು.
ಆದರೆ ಅರಮನೆಯ ಮರ್ಯಾದೆಯ ಪ್ರಶ್ನೆಯಾಗಿ ಬಂದಾಗ ಅರಣ್ಯ ವಾಸ ಮತ್ತು ವನ ಸಂಚಾರದ ನೆಪದಲ್ಲಿ ಕಾಡಿನಲ್ಲಿ ಕೊನೆಯ ನಾಲ್ಕೈದು ಮಾಸಗಳನ್ನು ಕಳೆದು ಪರಿಹಾರ ಕಂಡುಕೊಂಡಿದ್ದಳು. ಅದರಂತೆ ಬಸಿರು ಕಳೆಯುತ್ತಿದ್ದಂತೆ ಹುಟ್ಟಿದ ಮಗುವನ್ನು ಒಂದಿಷ್ಟು ನಗ ನಾಣ್ಯಗಳೊಂದಿಗೆ ಸುರಕ್ಷಿತವಾಗಿ ತೇಲುವ ಬುಟ್ಟಿಯಲ್ಲಿಟ್ಟು ನದಿಗೆಸೆದು ಬಂದಿದ್ದಳು ಕುಂತಿ ಪರಿಚಾರಿಕೆಯ ಸಹಾಯದೊಂದಿಗೆ. ನದಿಯ ಪಾಲು ಮಾಡಿದ ಆ ಮಗು ಅದಿರಥನೆಂಬ ಸಾರಥಿಯ ಕೈಗೆ ಸಿಕ್ಕು ಅವನ ಸಾಕು ಮಗನಾಗಿ ಬೆಳೆದಿದ್ದ. ಆದರೆ ರಾಜವಂಶದ ಕ್ಷತ್ರೀಯ ರಕ್ತದ ಫಲವಾಗಿ ಚಾವಟಿ ಬಿಟ್ಟು ಬಿಲ್ವಿದ್ಯೆಗಾಗಿ ಆತ ಪರಶುರಾಮರ ಬಳಿ ಸೇರಿಕೊಂಡಿದ್ದ.
*                                                           *                                                           *
ಇಂತಹ ಹಲವು ಹಳವಂಡಗಳ ವೈರುಧ್ಯಗಳ ಮಧ್ಯೆ ಶಸ್ತ್ರಾಭ್ಯಾಸ ಅನುಚಾನವಾಗಿ ನಡೆದೇ ಇತ್ತು. ಅಲ್ಲಿಯವರೆಗೆ ಎಲ್ಲ ಹೆಚ್ಚು ಕಡಿಮೆ ಎಲ್ಲ ವಿದ್ಯೆಗಳಲ್ಲಿ ಪರಿಣತಿ ಪಡೆದಿದ್ದಾರೆ ಎನ್ನಿಸುತ್ತಿದ್ದಂತೆ ಧೃತರಾಷ್ಟ್ರರನ್ನು ಭೇಟಿ ಮಾಡಿ ರಾಜಕುಮಾರರೆಲ್ಲರ ಪ್ರತಿಭಾ ಪ್ರದರ್ಶನವನ್ನು ಏರ್ಪಡಿಸಿದರು ಗುರುವಾದ ದ್ರೋಣರು. ಅರಮನೆಯ ಆವರಣದಾಚೆಗಿನ ಕ್ರೀಡಾಂಗಣದಲ್ಲಿ ವೇದಿಕೆ ಆಸನಗಳು ಸೇರಿದಂತೆ ಎಲ್ಲಾ ರೀತಿಯ ಮೇಲಾಟಕ್ಕೆ ಕ್ರೀಡಾಂಗಣ ಸಜ್ಜುಗೊಳಿಸಲಾಯಿತು. ನಿರ್ದಿಷ್ಟ ದಿನದಂದು ರಾಜ ಮನೆತನ ಬಂದು ಅವರವರಿಗಾಗಿ ಮೀಸಲಿರಿಸಿದ್ದ ಆಸನದಲ್ಲಿ ಕುಳಿತುಕೊಂಡರು.
ಎಲ್ಲ ವ್ಯವಸ್ಥೆಯನ್ನೊಮ್ಮೆ ಪರಿಶೀಲಿಸಿದ ದ್ರೋಣರು ಧೃತರಾಷ್ಟ್ರನ ಅನುಮತಿಯ ಮೇರೆಗೆ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟರು. ಒಬ್ಬರಾದ ಮೇಲೊಬ್ಬರು ಅದ್ಭುತವಾಗಿ ವಿದ್ಯೆಗಳನ್ನು ಪ್ರದರ್ಶಿಸಿದರು. ನಂತರ ನಡೆದದ್ದು ಅಕ್ಷರಶ: ರಣರ೦ಗದಂತಹ ಕ್ರೀಡೆ. ಭೀಮಾರ್ಜುನ ಅಂಗಳಕ್ಕಿಳಿಯುತ್ತಿದ್ದಂತೆ ಸೇರಿದ್ದ ಜನಸ್ತೋಮ ಇನ್ನಿಲ್ಲದ್ದಂತೆ ಬೊಬ್ಬಿರಿದು ಅವರನ್ನು ಹುರಿದುಂಬಿಸಿತು. ಮೊದಮೊದಲು ಆರಂಭಿಕ ಸುತ್ತುಗಳ ನಂತರ ವಾತಾವಾರಣ ಕಾವೇರಿತು. ಭೀಮ ದುರ್ಯೋಧನ ಇಬ್ಬರೂ ಅತ್ಯಂತ ಆಸ್ಥೆಯಿಂದ ಗದಾಯುದ್ಧವನ್ನು ಅಭ್ಯಸಿಸಿದವರು.
ಹಾಗಾಗಿ ಪ್ರತಿಯೊಂದು ಹೊಡೆತ ಗದೆಯ ತಿರುವುವಿಕೆ, ಅವುಗಳಿಗೆ ಪ್ರತಿ ಪ್ರಹಾರ, ಆಗಸಕ್ಕೆ ನೆಗೆದು ಅಲ್ಲಿಂದ ನೆಲಕ್ಕಿಳಿದು ಗಾಳಿಯಲ್ಲೇ ಗದೆಯನ್ನು ತಿರು ತಿರುಗಿಸಿ ಏಟಿಗೆ ಎದಿರೇಟು ನೀಡುವ ಲಾಘವ ಎಲ್ಲಾ ನಡೆಯುತ್ತಿದ್ದಂತೆ ಭೀಮ ಬಾರಿಸಿದ ಏಟುಗಳು ದುರ್ಯೋಧನನನ್ನು ಯೋಚಿಸುವಂತೆ ಮಾಡಿದವು. ಅಲ್ಲಿಯವರೆಗೂ ಹಲವು ಸುತ್ತುಗಳ ಕಾದಾಟದಲ್ಲಿ ದುರ್ಯೋಧನ ಭೀಮನನ್ನು ಎದುರಾಳಿ ಎಂದೇ ಭಾವಿಸಿ ಗದೆ ಬೀಸುತ್ತಿದ್ದನಾದರೂ ಅದನ್ನು ಪ್ರದರ್ಶನ ಎಂದು ಮರೆತಿರಲಿಲ್ಲ. ಹಾಗಾಗಿ ಅವನು ಬಾರಿಸುತ್ತಿದ್ಡ ಏಟುಗಳು ಭೀಮನ ಮೈಯ್ಯನ್ನು ಸವರುತ್ತಿದ್ದರೂ ಅವು ಏಟಾಗದಂತೆ ಬೀಸಿದ್ದ ಪರಿಯಿಂದಾಗಿ ಇಬ್ಬರಿಗೂ ಏನೆಂದರೆ ಏನೂ ಆಗುತ್ತಿರಲಿಲ್ಲ. ಅದೊಂದು ವ್ಯವಸ್ಥಿತ ಕಲಿಕೆಯ ಪರಿಣಾಮವಾಗಿ ಪ್ರಹಾರ ನಡೆಸುವ ಪ್ರಾವೀಣ್ಯತೆ. ಅದು ಇಬ್ಬರಲ್ಲೂ ಇತ್ತು.
ಆದರೆ ಕೊನೆ ಕೊನೆಯಲ್ಲಿ ನಿಜವಾದ ಏಟುಗಳು ಬೀಳ ತೊಡಗಿದಂತೆ ದುರ್ಯೋಧನ ಒಮ್ಮೆ ಆಚೆ ನಿಂತು ಸುತ್ತ ನೋಡಿದ. ತಾನು ಇಲ್ಲಿಯವರೆಗೂ ಗಮನಿಸಿಯೇ ಇಲ್ಲ. ಕೇವಲ ಗದೆಯ ಪ್ರಾವೀಣ್ಯತೆಯಲ್ಲಿ ಮೈಮರೆತಿದ್ದೇನೆ. ಇತ್ತ ಜನ ಹುಚ್ಚೆದ್ದು ಭೀಮನನ್ನು ಹುರಿದುಂಬಿಸುತ್ತಿದ್ದಾರೆ. ಕೂಡಲೇ ವಾಸ್ತವಕ್ಕೆ ಮರಳಿದ ದುರ್ಯೋಧನ ಸರಿಸಾಟಿಯಾಗಿ ನೇರಾ ನೇರ ಯುದ್ಧಕ್ಕಿಳಿದ. ಭೀಮನನ್ನು ಬಡಿದು ಕೆಡುವತೊಡಗಿದ. ಅಲ್ಲಿಗೆ ಪ್ರದರ್ಶನ ವೇದಿಕೆ ಅಕ್ಷರಶ: ರಣಾಂಗಣದಂತೆ ಭಾಸವಾಯಿತು. ಕೇವಲ ಗದೆ ಮತ್ತು ಕಿರುಚುತ್ತಾ ಹಾಹಾಕಾರ ಮಾಡುತ್ತಿದ್ದ ಶಬ್ದಗಳ ವಿನ: ಬೇರೇನೂ ಕಂಡು ಬರುತ್ತಿದ್ದಿಲ್ಲ.
ಸುತ್ತ ಮುತ್ತ ಅವರ ಪಾದಾಘಾತದಿಂದ ಎದ್ದ ಧೂಳಿನಲ್ಲಿ ಗದೆಯ ಕಿಡಿಗಳು ಸೃಷ್ಟಿಸುತ್ತಿದ್ದ ಬೆಳಕಿನ ಪ್ರಭೆಯ ಹೊರತು ಪಡಿಸಿದರೆ ಸರ್ವ ಪ್ರದೇಶವೂ ಮಸುಮಸುಕು ಧೂಳಿನಿಂದಾವರಿಸಿಬಿಟ್ಟಿತ್ತು.
ದುರ್ಯೋಧನ ಇನ್ನಿಲ್ಲದಂತೆ ಗದೆ ತಿರುವುತ್ತಾ ಭೀಮನನ್ನು ಬಡಿಯಲಾರಂಭಿಸಿದ್ದರೆ ಸಮಯ ನೋಡಿ ಅವನಿಗಿಂತಲೂ ಎತ್ತರಾದ ಭೀಮ ಮೇಲಿನಿಂದ ಪ್ರಹಾರಕ್ಕೆ ಆರಂಭಿಸುತ್ತಿದ್ದ. ಆದರೆ ಚತುರತೆಯಲ್ಲಿ ದುರ್ಯೋಧನ ಒಂದು ಕೈ ಮಿಗಿಲೇ ಆಗಿದ್ದರಿಂದ ಅವನು ಸಮಯ ಸಾಧಿಸಿ ಭೀಮನನ್ನು ದಣಿಸಿ ದಣಿಸಿ ಪ್ರಹಾರ ಮಾಡತೊಡಗಿದ್ದ. ಇದರ ಮುನ್ಸೂಚನೆ ಅರಿತ ದ್ರೋಣ ಕೂಡಲೇ ಮಗ ಅಶ್ವತ್ಥಾಮನನ್ನು ಕಳುಹಿಸಿ ಅವರನ್ನು ಹಿಂದಕ್ಕೆ ಕರೆಸಿದರು. ಮೊದಲಿನಿಂದಲೂ ಅಶ್ವತ್ಥಾಮನೆಂದರೆ ಅದೊಂದು ರೀತಿಯ ವಿಶ್ವಾಸ ದುರ್ಯೋಧನನಿಗೆ. ಅಶ್ವತ್ಥಾಮನಿಗೂ ಅಷ್ಟೆ. ಕೌರವನೊಂದಿಗೆ ಅತಿ ವಿಶ್ವಾಸದ ಗೆಳೆತನ. ಅವನ ಮಾತಿಗೆ ಎದುರಾಡದೆ ಅಂಗಳದಿಂದ ಹಿಂದೆ ಸರಿದ.
ಅಲ್ಲಿಗೆ ದುರ್ಯೋಧನಾದಿಗಳು ಅತೀವ ಹರ್ಷದಲ್ಲಿ ಸ್ವಸ್ಥಾನಕ್ಕೆ ಹಿಂದಿರುಗಿದರು. ಕಾರಣ ಭೀಮನ ಬಲ ಮಾತ್ರ ದೊಡ್ಡದು. ಅವನ ಏಟಿಗೆ ಸಿಕ್ಕರೆ ಅಪ್ಪಚ್ಚಿ. ಆದರೆ ಅವನಲ್ಲಿ ಯುದ್ಧ ಚತುರತೆಯಿಲ್ಲ. ಅವನನ್ನು ಬಲಕ್ಕೆ ಬದಲಾಗಿ ಚತುರತೆಯಿಂದ ಎದುರಿಸಿ ಗೆಲ್ಲಬಹುದು. ಆದ್ದರಿಂದ ಅವನನ್ನು ಎದುರಿಸುವುದು ಸುಲಭ ಎಂದು ಕೌರವನ ಕಡೆಯವರಿಗೆ  ಮನವರಿಕೆ ಆಗಿ ಹೋಗಿತ್ತು. ಜೊತೆಗೆ ದುರ್ಯೋಧನ ಗದೆಯ ಹೋಡೆತಕ್ಕೆ ಇನ್ನು ಭೂಮಂಡಲದಲಿ ಎದುರಿಲ್ಲ ಎನ್ನುವ ಸಂದೇಶ ಸ್ಪಷ್ಟವಾಗಿ ಹೋಗಿತ್ತು. ಜನರೆಲ್ಲಾ ಅದೇ ಗುಂಗಿನಲ್ಲಿ ಇರುವಾಗಲೇ ಅರ್ಜುನ ರಂಗ ಪ್ರವೇಶಿಸಿ ಮಿಂಚನ್ನು ಎಬ್ಬಿಸಿದ. ಅದೊಂದು ಅಮೋಘ ಪ್ರದರ್ಶನ. ಬಾನಲ್ಲಿ ಶರಗಳ ಮೇಘ ಮಾಲೆ ಕಟ್ಟಿದಂತೆ ಮಿಂಚು ಗುಡುಗು ಸಿಡಿಲು ಸೇರಿದಂತೆ ಸರ್ವ ರೀತಿಯ ರಣಾಂಗಣ ರಸಗಳನ್ನು ಶರಾಘಾತದಿಂದ ಹೊರಚೆಲ್ಲಿದ ಅರ್ಜುನ ಸೇರಿದವರಿಗೆಲ್ಲಾ ಭೂಮ೦ಡಲಕ್ಕೊಬ್ಬನೆ ಬಿಲ್ಲುಗಾರನೆಂಬ ಸ೦ದೇಶ ರವಾನಿಸಿದ. ಬಹುಶ: ವನಿಗಿಂತ ಮಿಗಿಲಾದ ಬಿಲ್ಗಾರ ಇನ್ನು ಬರಲಿಕ್ಕಿಲ್ಲ ಎಂದೇ ನಿರ್ಧರಿಸಿಬಿಡುವಂತಹ ಅಧ್ಬುತ ಕೌಶಲ್ಯ ತೋರಿದ್ದ ಆತ.
ಜನಸ್ತೋಮ ಅವನ ಶರಸಂಧಾನದ ಕ್ರಿಯೆಗೆ ಇನ್ನಿಲ್ಲದಂತೆ ಜೈಕಾರ ಹಾಕುತ್ತಾ ಬೊಬ್ಬಿರಿಯುವಾಗ ಕೇಳಿ ಬಂದಿತ್ತು ಆ ಠೇಂಕಾರ. ಕಾರಣ ಅಲ್ಲಿದ್ದ ಎಲ್ಲಾ ರೀತಿಯ ಸದ್ದಿಗಿಂತಲೂ ಮೇರುವಾಗಿ ಕೇವಲ ಅವನ ಧನುಸ್ಸಿನ ಠೇಂಕಾರ ಮಿಂಚು ಹರಿಸಿತ್ತು. ವೇದಿಕೆ ಸೇರಿದಂತೆ ಸುತ್ತಮುತ್ತಲೆಲ್ಲ ಒಮ್ಮೆಲೆ ನಿಶಬ್ದ ಆವರಿಸಿತು. ಎತ್ತರವಾದ ಆಳ್ತನ, ಭಾರಿ ಗಾತ್ರದ ಧನುಸ್ಸು ತೋಳುಗಳಲ್ಲಿ ಇನ್ನಿಲ್ಲದ ಹುರಿಗೊಂಡ ಸ್ನಾಯುಗಳು ಪುಟಿಯುತ್ತಿದ್ದರೆ ಆ ಯುವಕ ಅಪೂರ್ವ ತೇಜಸ್ಸಿನಿಂದ ಕಂಗೊಳಿಸುತ್ತಾ ವೇದಿಕೆಗೆ ಕಾಲಿರಿಸಿದ್ದ. ಅವನು ರಂಗದ ಮೇಲೆ ನಡೆಯುತ್ತಿದ್ದರೆ ಅವನೆದುರಿಗೆ ರಾಜಕುಮಾರರೆಲ್ಲ ಚಿಕ್ಕವರಾಗಿ ಕಾಣಿಸುತ್ತಿದ್ದರು. ಅವನ ಎತ್ತರ ಮತ್ತು ಶರಾಘಾತದಿಂದ ಹರವಾದ ಎದೆಯ ಬಿರುಸು ಸುಮ್ಮನೆ ಒಂದು ಸೈನ್ಯದ ನೆನಪನ್ನು ತರುತ್ತಿತ್ತು.
ನೆರೆದಿದ್ದ ಜನಸ್ತೋಮ ಅವನಾರು..? ಯಾವ ರಾಜಕುಮಾರ.. ಅದೇನು ಹುರಿಗೊಂಡ ಸ್ನಾಯುಗಳು ಅಬ್ಬ.. ಅದೆಂಥಾ ಆತ್ಮವಿಶ್ವಾಸ ರಾಜ ಕುಟುಂಬದಲ್ಲವನಿಗೆ ಇಂತಹದ್ದೊಂದು ಠೀವಿ ಬರಲಿಕ್ಕೆ ಸಾಧ್ಯವಿಲ್ಲ ಎಂದು ಪ್ರತಿಯೊಬ್ಬರೂ ಹುಬ್ಬೇರಿಸುತ್ತಿದ್ದರೆ ಅವನು ಮಾತ್ರ ಅದೊಂದು ರೀತಿಯ ದಿವ್ಯ ನಿರ್ಲಕ್ಷದಲ್ಲಿ ಕಾಲೂರಿ ನಿಂತಿದ್ದ. ಪ್ರತಿಯೊಬ್ಬನಲ್ಲೂ ಮೊದಲು ಮೂಡಿದ ಪ್ರಶ್ನೇಯೆ ಅದು.  ಯಾರು ಇವನು...?