Sunday, March 20, 2016


ಹನಿ ಹನಿ ಪೋಣಿಸಿದರಷ್ಟೇ  ನೀರು ..!
(ಮನಸ್ಸಿಗೆ ಬಂದಂತೆ ವ್ಯವಸ್ಥೆಯನ್ನು ಬಯ್ಯುತ್ತಾ ಬದುಕುತ್ತಿರುವ ನಮಗೆ, ಕಡಿದಾದ ಅಂಚಿನಲ್ಲಿ ಪ್ರಕೃತಿಯ ರೌದ್ರತೆಯ ನಡುವೆಯೂ ಹೇಗೆ ತೆವಳುತ್ತಿರುತ್ತದೆ ಎನ್ನುವುದರರಿವಿಲ್ಲ. ನಮ್ಮದೇನಿದ್ದರೂ ನಲ್ಲಿ ತಿರುಗಿಸಿದರೆ ನೀರು ಬರಬೇಕೆನ್ನುವ ಧಾವಂತ. ನೀರೇ ಇಲ್ಲದಿದ್ದರೆ..?)
ಅದು ಸಾರಕುಂಡಿ ಚಾರಣದ ಕೊನೆಯ ಎರಡು ದಿನಗಳವು. ದಿನಕ್ಕೆ ಸರಾಸರಿ ಹದಿನೈದು ಕಿ.ಮೀ. ಇದ್ದಿದ್ದು ಕೊನೆಗೆ ಐದಾರಕ್ಕಿಳಿದಿತ್ತು. ಬೇಸ್‍ಕ್ಯಾಂಪ್‍ನ ಸಮತೋಲನ ನಿರ್ವಹಿಸಲು ಸ್ವತ: ಕ್ಯಾಪ್ಟನ್ ಆಗಿದ್ದಾಗ ನಾನೂ ಅದನ್ನೇ ಮಾಡುತ್ತಿದ್ದೆ. ಆದರೆ ಈ ಬಾರಿ ಎರಡು ದಿನ ಎನ್ನುವುದೇಕೋ ಜೀರ್ಣವಾಗಲಿಲ್ಲ. ಹತ್ತು ಕಿ.ಮೀ.ಗೆ ಎರಡು ದಿನವಾ..? ಬೇಸ್‍ಕ್ಯಾಂಪ್ ಸಂಪರ್ಕಿಸಿ ನಾನು ಸ್ವಯಂ ಜವಾಬ್ದಾರಿಯ ಮೇಲೆ ಕೆಳಗೆ ಬರುತ್ತಿದ್ದೇನೆಂದು ತಿಳಿಸಿ, ಮಧ್ಯಾನ್ಹವೇ ಹೊರಟು,ರಾತ್ರಿಗೆ ಮನಾಲಿ ತಲುಪುವ ಯೋಜನೆ ನನ್ನದಾಗಿತ್ತು. ಆದರೆ ನಾಲ್ಕು ತಾಸಿನ ದಾರಿ ಬಾಕಿ ಇರುವಾಗಲೇ ವಾತಾವರಣ ತೀವ್ರ ಹದಗೆಟ್ಟು ಮಳೆ, ವಿಪರೀತ ಮಂಜು, ಮೂಳೆ ಕೊರೆಯುವ ಚಳಿ ಎಲ್ಲಾ ಸೇರಿ, ಅಂಥಾ ಸಂದರ್ಭದಲ್ಲಿ ತತಕ್ಷಣಕ್ಕೆ ಲಭ್ಯವಿರುವ ಹತ್ತಿರದ ಮನೆಯಕಡೆ ಕಾಲು ಹರಿಸಿದ್ದೆ. ಅಲ್ಲೆಲ್ಲಾ ಹೀಗೆ ಪೆಯಿಂಗ್ ಗೆಸ್ಟ್‍ಗಳಾಗೋದು ಮಾಮೂಲಿ.
ಮೂವತ್ತು ಮನೆಗಳ ಹಳ್ಳಿ ವಾಂಗ್ಜುಲಾ ಅಕ್ಷರಶ: ಎಂಟು ಸಾವಿರ ಅಡಿ ಎತ್ತರದಲ್ಲಿದೆ. ವ್ಯವಹಾರ, ಅಹಾರ ಎಲ್ಲದಕ್ಕೂ ಕೆಳಗಿಳಿಯಬೇಕು. ಚಾರಣಿಗರು, ಮೇಲಕ್ಕೇರಲಾಗದೆ ನಿಂತುಬೀಡುವ ಹೈಕರ್ಸು ಮತ್ತು ನನ್ನಂಥವರು ಅವರ ಗೆಸ್ಟುಗಳು. ಮನೆಯೊಂದನ್ನು ಸೇರಿ ಆವತ್ತಿನ ಊಟ, ವಸತಿ, ಸ್ನಾನ ಎಲ್ಲ ಸೇರಿ ಇನ್ನೂರವತ್ತೆಂದಾದ ಮೇಲೆ, ನೆನೆದಿದ್ದ ಬಟ್ಟೆ,ಬೂಟು ಕಳಚಿ ಬೆಚ್ಚಗೆ ಕುಳಿತು ದಾಲ್ಚಿನ್ನಿ ಬೆರೆಸಿದ ಚಹ ಕುಡಿಯುತ್ತಿದ್ದರೆ ಸ್ವರ್ಗವೆನಿಸಿದ್ದು ಸುಳ್ಳಲ್ಲ. ಟಿ.ವಿ. ಪೇಪರು, ಮೊಬೈಲು, ಯಾವದೆಂದರೆ ಯಾವ ಸಂಪರ್ಕವೂ ಇಲ್ಲದಿದ್ದರೂ ಮನೆ ಜನವೆಲ್ಲ ಇದ್ದ ಚಿಕ್ಕ ಕೊಠಡಿಯೊಳಗೆ ಅವರದ್ದೇ ಭಾಷೆಯಲ್ಲಿ ಕಚಪಚ ಎನ್ನುತ್ತ ಹರಟೆಯಲ್ಲಿತೊಡಗಿದ್ದಾರೆ. ಬಾಗಿಲಿಗೆ ತೆರೆದುಕೊಂಡಿರುವ ಅಡುಗೆ ಮನೆಯ ಶಾಖ ಒಳಭಾಗ ಬೆಚ್ಚಗಿಡುತ್ತಿದೆ. ಪಕ್ಕದಲ್ಲಿಯೇ ಬೂದಿ ತುಂಬಿದ ದೊಡ್ಡ ಬುಟ್ಟಿ. ಯಾವ ಪೂರ್ವಾಗ್ರಹವಿಲ್ಲದೆ ಬದುಕು ಅನುಭವಿಸುತ್ತಿರುವವರ ಸಂತಸದ ಹಿಂದೆ ಇದ್ದಿದು ಅಗಾಧ ಪರಿಶ್ರಮದ ಬದುಕು. ರಾತ್ರಿಗೆ ಸಪ್ಪೆತೋವೆ, ಮುದ್ದೆಬಿಸಿ ಅನ್ನ, ಜೊತೆಗೆ ನನಗ್ಯಾವತ್ತೂ ಹಿಡಿಸದ ಹಿಟ್ಟುಬಡಕ ಪುಲ್ಖಾ ತಿನ್ನಲಾಗದೆ ಟೀ ಮಾಡಿಸಿಕೊಂಡು ಬಿಸ್ಕೀಟು ತೊಯಿಸಿಕೊಂಡು ತಿಂದು ಮಲಗಿದ್ದೆ. 
ತೀರ ನಾಲ್ಕೂವರೆಗೆ ಬೆಳಗಾಗುವ ತುಂಬ ಚೆಂದದ ಪರಿಸರ. ಎಲ್ಲಿ ನೋಡಿದರೂ ಕ್ಲಿಕ್ಕಿಸಲು ಪೂರಕ ಎನ್ನಿಸುವ ಹಸಿರು ಮತ್ತು ಆಕಾಶದ ಅಧ್ಬುತ ನೀಲಿ ಬಾನಿನ ಸಂವಹನ. ಪರ್ವತಗಳು ಮಾತ್ರ ಸ್ವಚ್ಚ ಸ್ವಚ್ಛ. ಹಿಮ ಬಿದ್ದು ಹಾಳಾಗುವ ಮೈಲ್ಮೈ ಅದರದ್ದು. ಸುತ್ತಲೂ ಎರಡಡಿ ಸಮತಟ್ಟು ಕೊರೆದು ನಿರ್ಮಿಸಿರುವ ಏರಿಳಿತದ ಹೊಲ ಎನ್ನುವ ಪಟ್ಟಿಗಳಲ್ಲಿ ಆಲೂ, ಹಸಿರುಕಡ್ಲೆ ಬೆಳೆ. ತಗಡಿನ ಶೀಟುಗಳ ಎರಡಂತಸ್ತಿನ ಮನೆಯ ಅಂಗಳದಲ್ಲಿ ಎಲ್ಲ ಕಡೆಯಿಂದಲೂ ಮನೆಯಕಡೆ ಮುಖಮಾಡಿದ್ದ ಪ್ಲಾಸ್ಟಿಕ್ ಪೈಪುಗಳು. ಉಳಿದ ಪರಿಸರ ಹೊಸದಲ್ಲವಾದರೂ ಈ ಪೈಪುಗಳ ವ್ಯವಸ್ಥೆ ಅರ್ಥವಾಗಲಿಲ್ಲ. ಗುಡ್ಡದ ಆ ತುದಿ ಈ ತುದಿಯಿಂದ ಸಂಪರ್ಕವೇರ್ಪಡಿಸಿದ್ದ ಪೈಪುಗಳದ್ದು ಅಪ್ಪಟ ಲೋಕಲ್ ಇಂಜಿನಿಯರಿಂಗ್. ಏನಿದು ಎಂದೆ ಮನೆಯ ಹುಡುಗನಿಗೆ. ಅವನು ಬಾಯಿಗೆ ಇಟ್ಟಿದ್ದ ಕಡ್ಡಿ ತೆಗೆಯುತ್ತಾ, ಕಾಯಿಸುತ್ತಿದ್ದ ಬಿಸಿಲನ್ನು ಬಿಟ್ಟು ಎದ್ದು ಬಂದ.
`..`..ಇಲ್ಲಿ ಕರೆಂಟು, ನೀರು ಏನಿದ್ದರೂ ನಾವೇ ಮಾಡಿಕೊಳ್ಳಬೇಕಾದ ವ್ಯವಸ್ಥೆ.
ಅದಕ್ಕೆ ಅಲ್ಲಿ ಕಾಣುತ್ತಿದೆಯಲ್ಲ ಅಲ್ಲಿಯವರೆಗೆ ನೀರು ಸಹಜವಾಗಿ ಹರಿದು ಬರುತ್ತೆ.
ಅದಕ್ಕೊಂದು ದಾರಿ ಮಾಡಿ ಅದರ ಬಾಯಿಗೆ ಪೈಪು ಹಾಕಿದ್ದೇವೆ. ಬೇಸಿಗೆಯಲ್ಲಿ ಹಿಮ ಕರಗಿ ಹರಿಯುತ್ತಲೇ ಇರುತ್ತದೆ.
ಅದರೆ ಮಳೆ ಮತ್ತು ಚಳಿಗಾಲದಲ್ಲಿ ಪರಿಸ್ಥಿತಿ ಗಂಭೀರ. ಹಿಮ ಕರಗಲಾರಂಭಿಸಿದೊಡನೆ ಆ ಕಡೆಯ ಪೈಪಿನಲ್ಲಿ ಬೆಳಿಗ್ಗೆ
ಹನ್ನೊಂದರಿಂದ ಸಂಜೆ ಐದರವರಗೂ ನಿಧಾನಕ್ಕೆ ನೀರು ಹರಿಯುತ್ತದೆ. ಈ ಕಡೆಯದ್ದು ಸಹಜ ಹರಿವಿನಲ್ಲಿ ಹನಿಹನಿಯಾಗಿ ಇ
ತ್ತ ಕಡೆ ಬರುತ್ತಿರುತ್ತದೆ. ಇಲ್ಲೆಲ್ಲ ಭೂ ಕುಸಿತ ಸಾಮಾನ್ಯ. ಹಾಗಾದಾಗ ಪರ್ವತ ಹತ್ತಿ ಮತ್ತೆ ನೀರಿನ ದಾರಿ ಸರಿಮಾಡಿ ಬರುತ್ತೇವೆ.
ಆದರೆ ಮಳೆ ಚಳಿಯಲ್ಲಿ ನೀರು ಕರಗುವುದೇ ಇಲ್ವಲ್ಲ. ಪೈಪಿನಲ್ಲೂ ಹಿಮ ಗಡ್ಡೆಯಾಗಿಬಿಡುತ್ತದಲ್ಲ ಆಗ..? ನೀರು ಇಲ್ಲ.
ಏನೂ ಇಲ್ಲ. ಕಮೋಡಿಗೂ ಕೂಡಿಟ್ಟಿರುವ ಬೂದಿಯೇ ಗತಿ. ಅದಕ್ಕೆ ಹಾಗಾದಿರಲು ನೀರು ಕಾಯ್ದಿಟ್ಟು ಉಪಯೋಗಿಸುತ್ತೇವೆ.
ಅಷ್ಟಕ್ಕೂ ಅಂಗಡಿ,ಗಾಡಿ,ಸಂತೆ ಏನಿಲ್ಲದಿದ್ದರೂ ನಾವ್ಯಾಕಿಲ್ಲಿದ್ದೇವೆ..? ಇಷ್ಟು ಎತ್ತರದಲ್ಲಿ ಮನೆ ಕಟ್ಟಿಕೊಳ್ಳುವುದರಿಂದ ತೆರಿಗೆ ಬೀಳುವುದಿಲ್ಲ.
ಭೂಮಿ ಕಟ್ಟಿಗೆ ಫಿû್ರೀ. ಕೆಳಗೆ ಹೋದಷ್ಟೂ ರೇಟು ಜಾಸ್ತಿ...' ಅವನು ಮಾತಾಡುತ್ತಿದ್ದರೆ ನಾನು ತೆಪ್ಪಗಾಗಿಬಿಟ್ಟಿದ್ದೆ.
ಇನ್ನುಳಿದದ್ದು ಕೇಳುವ ಮೊದಲೇ ಮನಸ್ಸು ಬಗ್ಗಡವಾಗಿತ್ತು. ಸುಮ್ಮನೆ ಕೈಕುಲುಕಿ ಹೊರಡುತ್ತ,
`..ಇನ್ನೆಂದೂ ನಲ್ಲಿ ತಿರುಗಿಸಿಟ್ಟು ಹಲ್ಲುಜ್ಜುವುದೂ, ಶೇವ್ ಮಾಡುವುದೂ ಮಾಡಲಾರೆ..' ಎಂದೆ ಪ್ರಾಮಾಣಿಕವಾಗಿ.
ಅವನು ಬರಿದೇ ನಕ್ಕ. ಪ್ರಕೃತಿ ಎಲ್ಲ ಕಲಿಸುತ್ತಿರುತ್ತದೆ. ಕಲಿಯಬೇಕಷ್ಟೆ.
ಹಾಗೊಂದು ಅನುಭವಕ್ಕೆ ಕಾರಣವಾಗಿಸಿದ್ದು ಅಲೆಮಾರಿತನ. ಕಾರಣ ನಾನೇ ಅಲೆಮಾರಿ...


2 comments:

  1. Parisarakke takkanta hondanike
    Tumba sahajavada baravanige
    Chennagide

    ReplyDelete
  2. `..ಇನ್ನೆಂದೂ ನಲ್ಲಿ ತಿರುಗಿಸಿಟ್ಟು ಹಲ್ಲುಜ್ಜುವುದೂ, ಶೇವ್ ಮಾಡುವುದೂ ಮಾಡಲಾರೆ..' ಎಂದೆ ಪ್ರಾಮಾಣಿಕವಾಗಿ>>>>>> ಒಪ್ಪುವಂಥ ಮಾತು! :-)

    ReplyDelete